ಕಾರ್ಕಳ: ರಂಗ ಸಮಾಜದ ಸರ್ವಾನುಮತದ ಶಿಫಾರಸಿನ ಮೇರೆಗೆ ಸರ್ಕಾರವು ‘ಯಕ್ಷ ರಂಗಾಯಣ ಕಾರ್ಕಳ’ ಹೆಸರನ್ನು ‘ಕರಾವಳಿ ರಂಗಾಯಣ ಕಾರ್ಕಳ’ ಎಂದು ಬದಲಾವಣೆ ಮಾಡಲಾಗಿದೆ ಎಂದು ಕಾರ್ಕಳ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್ ಹೇಳಿದ್ದಾರೆ.

ಕಾರ್ಕಳದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣವು ನಾಟಕ ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ಸಂಸ್ಥೆಯಾಗಿದ್ದು, ಯಕ್ಷಗಾನ ಮತ್ತು ರಂಗಾಯಣದ ಕಾರ್ಯವ್ಯಾಪ್ತಿ ವಿಭಿನ್ನವಾಗಿದೆ ಎಂದು ಸ್ಪಷ್ಟಪಡಿಸಿದರು.ರಂಗ ಸಮಾಜದಲ್ಲಿ ಕರಾವಳಿ ಭಾಗದ ರಂಗಕರ್ಮಿಗಳು, ಚಲನಚಿತ್ರ ನಟರು, ಸಾಹಿತಿಗಳು ಹಾಗೂ ವಿದ್ವಾಂಸರು ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣಿತರು ಸಮಗ್ರ ಚರ್ಚೆ ನಡೆಸಿ ‘ಕರಾವಳಿ ರಂಗಾಯಣ’ ಎಂಬ ಹೆಸರನ್ನು ಶಿಫಾರಸು ಮಾಡಿದ್ದರು. ಅದರಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

‘ಯಕ್ಷ ರಂಗಾಯಣ’ ಎಂಬ ಹೆಸರಿನಿಂದ ಇದು ಯಕ್ಷಗಾನಕ್ಕೆ ಸಂಬಂಧಿಸಿದ ಸಂಸ್ಥೆ ಎಂಬ ಗೊಂದಲ ಸಾಹಿತಿಗಳು, ವಿದ್ವಾಂಸರು ಹಾಗೂ ಸಾರ್ವಜನಿಕರಲ್ಲಿ ಉಂಟಾಗಿತ್ತು. 1993ರ ರಂಗಾಯಣ ಬೈಲಾದಲ್ಲಿಯೂ ‘ಕರಾವಳಿ ರಂಗಾಯಣ’ ಎಂಬ ಹೆಸರಿನ ಉಲ್ಲೇಖ ಇರುವುದನ್ನು ಪರಿಗಣಿಸಿ ಸರ್ಕಾರ ಈ ಬದಲಾವಣೆ ಮಾಡಿದೆ ಎಂದು ವಿವರಿಸಿದರು.ಕಳೆದ ವರ್ಷ ರಂಗಾಯಣದಿಂದ 70ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಪ್ರಸಕ್ತ ವರ್ಷ ಚಟುವಟಿಕೆಗಳಿಗಾಗಿ 50 ಲಕ್ಷ ರು. ಅನುದಾನ ಮೀಸಲಿಡಲಾಗಿದೆ. ರಂಗಾಯಣದ ಕಾರ್ಯವ್ಯಾಪ್ತಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದರು.

ಕಾರ್ತಿಕ್, ಸೂರಜ್ ಬಂಗೇರ ಮತ್ತಿರರಿದ್ದರು.