ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇಲ್ಲಿನ ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಎನ್ಎಸ್ಎಸ್ ಘಟಕದ ವತಿಯಿಂದ 11ನೇ ಅಂತಾರಾಷ್ಟ್ರೀಯ ಯೋಗ ಆಚರಿಸಲಾಯಿತು.ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಭಾಗ್ಯಮ್ಮ ವಿಶೇಷ ಉಪನ್ಯಾಸ ನೀಡಿ, ಪ್ರಸ್ತುತ ದಿನಗಳಲ್ಲಿ ಮನುಷ್ಯನು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳುವಲ್ಲಿ ಹಿಂದೆ ಸರಿದಿದ್ದಾನೆ ಎಂದರೆ ತಪ್ಪಾಗಲಾರದು. ಹಾಗಾಗಿ ಇಂತಹ ಹಲವಾರು ಸಮಸ್ಯೆಗಳಿಗೆ ಒಂದು ದಿವ್ಯಔಷಧ ಎಂದರೆ ನಿರಂತರ ಯೋಗವೇ ಆಗಿದೆ ಎಂದರು.
ಯೋಗವು ಒತ್ತಡದ ಬದುಕಿಗೆ ಸಹಾಯ ಮಾಡುವ ಒಂದು ಪ್ರಾಚೀನ ಕಾಲದ ಅಭ್ಯಾಸವೆಂದೇ ಹೇಳಬಹುದಾಗಿದೆ. ಇದು ನಮ್ಮ ದೇಹ ಮತ್ತು ಮನಸ್ಸನ್ನು ಒಂದುಗೂಡಿಸಿ ಸಾಮರಸ್ಯತೆ ಮೂಡಿಸಿ ಪ್ರತಿದಿನ ಚಟುವಟಿಕೆಯಿಂದಿರಲು ನೆರವಾಗಲಿದೆ. ಯೋಗದ ಅಭ್ಯಾಸವು ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಶಕ್ತಿಯ ಮಟ್ಟವನ್ನು ಅಧಿಕಗೊಳಿಸಲು ಹಾಗೂ ಜೀವನದ ಯೋಗ ಕ್ಷೇಮವನ್ನು ಉತ್ತಮ ರೀತಿಯಲ್ಲಿ ಸುಧಾರಿಸಲು ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು.ಯೋಗವು ದೇಹದ ಸ್ನಾಯುಗಳನ್ನು ಬಲಪಡಿಸಿವುದರ ಜೊತೆಗೆ ನಮ್ಯತೆಯನ್ನು ಹೆಚ್ಚಿಸಿ ಸಮತೋಲನ ಸುಧಾರಿಸುತ್ತದೆ. ಮತ್ತು ರಕ್ತ ಪರಿಚಲನೆ ಸರಾಗವಾಗಲಿದೆ. ಇತ್ತೀಚೆಗೆ ಎಲ್ಲಾ ವಯೋಮಾನದವರಲ್ಲೂ ಕೂಡ ದೈಹಿಕವಾಗಿ ಹಲವು ಸಮಸ್ಯೆಗಳು ಕಂಡುಬರುತ್ತಿದ್ದು ಪ್ರಮುಖವಾಗಿ ಹೃದಯ ಸಂಬಂಧಿ, ಸಂಧಿವಾತ, ಬೆನ್ನುನೋವು ಮತ್ತು ಮಂಡಿನೋವು ಇತರೇ ಸಮಸ್ಯೆಗಳಿಗೆ ಸಿಲುಕಿ ನರಳುತ್ತಿರುವುದನ್ನು ನೋಡುತ್ತಿದ್ದೇವೆ. ಇದೆಲ್ಲವನ್ನು ನಿವಾರಿಸಲು ಯೋಗಭ್ಯಾಸ ಸಹಾಯ ಮಾಡುತ್ತದೆ. ಎಲ್ಲರೂ ನೆಮ್ಮದಿಯ ಬದುಕಿಗಾಗಿ, ಏಕಾಗ್ರತೆಗಾಗಿ ಮನಸ್ಸನ್ನು ಶಾಂತಗೊಳಿಸುವುದಕ್ಕಾಗಿ ಹಾಗೂ ಭಾವನಾತ್ಮಕವಾಗಿ ಸ್ಥಿರತೆಯನ್ನು ಉತ್ತೇಜಿಸುವಲ್ಲಿಯೂ ಯೋಗ ಸಹಾಯವಾಗುತ್ತಿದೆ ಎಂದರು. ಚಾಮರಾಜನಗರ ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಆರ್.ಮಹೇಶ್ ಮಾತನಾಡಿ, ಪ್ರತಿದಿನ ಯೋಗದ ಜೊತೆಗೆ ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಆಂತರಿಕ ಶಾಂತಿ ಮತ್ತು ಅರಿವನ್ನು ಪಡೆಯಲು ತುಂಬಾ ಸಹಕಾರಿಯಾಗಿದೆ. ಹಾಗೆಯೇ ಆಧ್ಯಾತ್ಮಿಕ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಒಟ್ಟಾರೆ ನಮ್ಮ ಜೀವನದ ಎಲ್ಲ ಅಂಶಗಳಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಧಾರಿಸುವ ಮೂಲಕ ಉತ್ತಮ ಬದುಕಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಚಯಾಪಚಯ ಕ್ರಿಯೆಯನ್ನು ಸುಧಾರಿಸಲು, ದಿನನಿತ್ಯದ ನಿದ್ರೆಯ ಗುಣಮಟ್ಟ ಕಾಪಾಡಲು ಯೋಗ ಉಪಯೋಗವಾಗುತ್ತದೆ. ಯೋಗಾಭ್ಯಾಸವು ವ್ಯಾಯಾಮದ ಒಂದು ರೂಪ ಮಾತ್ರವಲ್ಲ, ದಿನನಿತ್ಯದ ಬದುಕಿನ ಒಂದು ಭಾಗವೇ ಆಗಿದೆ. ಇದು ಎಲ್ಲರ ಆರೋಗ್ಯ, ಸಂತೋಷ ಮತ್ತು ನೆಮ್ಮದಿಯ ಜೀವನವನ್ನು ನಡೆಸಲು, ಕಾಪಾಡಿಕೊಳ್ಳಲು ಒಂದು ಅಧ್ಬುತವಾದ ಅಸ್ತ್ರವೇ ಆಗಿದೆ ಎಂದರು. ಎನ್ಎಸ್ಎಸ್ ವಿದ್ಯಾರ್ಥಿಗಳು ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.