ಹೈಟೆನ್ಷನ್ ವೈಯರ್​ ಕಂಬದ ಮೇಲೆ ಕುಳಿತಿದ್ದ ಸಾಕಿದ​ ಗಿಳಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಶಾಕ್ ಹೊಡೆದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್​ನಲ್ಲಿ ನಡೆದಿದೆ. ಮಂಡ್ಯದ ನಾಗಮಂಗಲ ಮೂಲದ ಅರುಣ್ ಕುಮಾರ್ (32) ಮೃತ ದುರ್ದೈವಿ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೈಟೆನ್ಷನ್ ವೈಯರ್​ ಕಂಬದ ಮೇಲೆ ಕುಳಿತಿದ್ದ ಸಾಕಿದ​ ಗಿಳಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಶಾಕ್ ಹೊಡೆದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್​ನಲ್ಲಿ ನಡೆದಿದೆ. ಮಂಡ್ಯದ ನಾಗಮಂಗಲ ಮೂಲದ ಅರುಣ್ ಕುಮಾರ್ (32) ಮೃತ ದುರ್ದೈವಿ.

ಅರುಣ್ ಕುಮಾರ್‌ ತಮ್ಮ ಚಿಕ್ಕಮ್ಮ ಲಿಖಿತ ಅವರ ಜತೆ ಗಿರಿನಗರದ ಅಪಾರ್ಟ್‌ಮೆಂಟ್​ನಲ್ಲಿ ವಾಸವಿದ್ದ. ಇವರ ಚಿಕ್ಕಮ್ಮ ಗಿಳಿಯನ್ನು ಸಾಕಿದ್ದು, ಆ ಗಿಳಿ ಮನೆಯಿಂದ ಹಾರಿಹೋಗಿ ಅಪಾರ್ಟ್‌ಮೆಂಟ್​ನ ಆವರಣದಲ್ಲಿರುವ ಹೈಟೆನ್ಷನ್ ವೈಯರ್​ ಕಂಬದ ಮೇಲೆ ಕುಳಿತುಕೊಂಡಿತ್ತು. ಇದನ್ನು ನೋಡಿದ ಅರುಣ್‌ ಕುಮಾರ್‌ ಬೆಳಗ್ಗೆ 10.30 ರ ಸುಮಾರಿಗೆ ಗಿಳಿ ರಕ್ಷಣೆಗೆ ಮುಂದಾಗಿದ್ದಾರೆ. ಅಪಾರ್ಟ್‌ಮೆಂಟ್​ ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್​​ಗೆ ಕಟ್ಟಿಗೆ ಸೇರಿಸಿ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಹೈಟೆನ್ಷನ್ ವೈಯರ್​ನಿಂದ ವಿದ್ಯುತ್‌ ಶಾಕ್‌ ಹೊಡೆದು ಅರುಣ್ ಕಾಂಪೌಂಡ್​​ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಗಿರಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2 ಲಕ್ಷ ಬೆಲೆಯ ಫಾರಿನ್ ಗಿಳಿ?

ಅರುಣ್‌ ಚಿಕ್ಕಮ್ಮನ ಮನೆಗೆ ಆಗಾಗ ಬಂದು ಉಳಿದುಕೊಳ್ಳುತ್ತಿದ್ದರು. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗಿರಿನಗರ ಠಾಣೆಯಲ್ಲಿ ಯುಡಿಆರ್​ ಪ್ರಕರಣ ದಾಖಲಾಗಿದೆ. ಅರುಣ್‌ ರಕ್ಷಣೆಗೆ ಮುಂದಾಗಿದ್ದು 2 ಲಕ್ಷ ರು. ಬೆಲೆ ಬಾಳುವ ಫಾರಿನ್ ಗಿಳಿ ಎನ್ನಲಾಗಿದೆ.​

ನಿವಾಸಿಗಳ ಆಕ್ರೋಶ: ಇನ್ನು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಪಾರ್ಟ್‌ಮೆಂಟ್ ಒಳಗೆ 60 ಸಾವಿರ ಕೆ.ವಿ ಸಾಮರ್ಥ್ಯದ ವೈಯರ್​ಗಳು ಇರುವುದಕ್ಕೆ ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.