ಯೂಟ್ಯೂಬರ್ ಸಮೀರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

| Published : Aug 22 2025, 02:00 AM IST

ಸಾರಾಂಶ

ಧರ್ಮಸ್ಥಳ ಅವಹೇಳನ ಆರೋಪಕ್ಕೆ ಸಿಲುಕಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ಬಂಧನಕ್ಕೆ ಪೊಲೀಸರು ತೆರಳಿದ ಸಂದರ್ಭ ಆತನಿಗೆ ಮಂಗಳೂರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಲಭಿಸಿದೆ.

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಯೂಟ್ಯೂಬರ್ ಸಮೀರ್ ಎಂ.ಡಿ. ಬಂಧನಕ್ಕೆ ಪೊಲೀಸರು ತೆರಳಿದ ಸಂದರ್ಭ ಆತನಿಗೆ ನಿರೀಕ್ಷಣಾ ಜಾಮೀನು ಲಭಿಸಿದೆ.

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಅವಹೇಳನ ಕುರಿತಂತೆ ಧರ್ಮಸ್ಥಳ ಪೊಲೀಸರು ಜು.೧೨ಕ್ಕೆ ಸುಮೋಟೋ ಪ್ರಕರಣ ದಾಖಲಿಸಿದ್ದರು. ಈ ನಿಟ್ಟಿನಲ್ಲಿ ಸಮೀರ್ ಎಂ.ಡಿ. ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯಕ್ಕೆ ಆ.೧೯ರಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಗುರುವಾರ ಆದೇಶ ಕಾಯ್ದಿರಿಸಿತ್ತು. ಗುರುವಾರ ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ಸಾಕ್ಷಿ ದೂರುದಾರ ತನ್ನ ದೂರಿನಲ್ಲಿ ಹಾಗೂ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರುವ ಮಾಹಿತಿಗಳನ್ನು ಹೊರತುಪಡಿಸಿ ಸಮೀರ್‌ ಎಐ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ಸಾಕ್ಷಿ ದೂರುದಾರನ ಬಗ್ಗೆ ಹಾಗೂ ಪ್ರಕರಣದ ಬಗ್ಗೆ ಇತರೆ ಹೆಚ್ಚಿನ ಮಾಹಿತಿಗಳನ್ನು ಒಳಗೊಂಡಿರುವ ಕಾಲ್ಪನಿಕವಾಗಿ ಈ ವಿಡಿಯೋ ಸೃಷ್ಟಿಸಲಾಗಿತ್ತು. ಸುಳ್ಳು ಮಾಹಿತಿಗಳನ್ನೊಳಗೊಂಡ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದ ಆರೋಪ ಸಮೀರ್‌ ಮೇಲೆ ದಾಖಲಾಗಿತ್ತು.

ಉದ್ದೇಶಪೂರ್ವಕವಾಗಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಸಮೀರ್ ಎಂ.ಡಿ ವಿರುದ್ಧ ಬಿಎನ್‌ಎಸ್ 192, 240, 353(1)(ಬಿ) ರಂತೆ ಪ್ರಕರಣ ದಾಖಲಿಸಲಾಗಿತ್ತು. ಧರ್ಮಸ್ಥಳ ಪಿಎಸ್‌ಐ ಸಮರ್ಥ್ ಈ ಕುರಿತಂತೆ ದೂರು ನೀಡಿದ್ದರು.

ಹಲವು ಬಾರಿ ನೊಟೀಸ್ ನೀಡಿದರೂ ಸಮೀರ್‌ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಧರ್ಮಸ್ಥಳ ಪೊಲೀಸರು ಸಮೀರನ ಬಂಧನಕ್ಕೆ ಆತನ ಬೆಂಗಳೂರಿನ ನಿವಾಸಕ್ಕೆ ತೆರಳಿದ್ದರು. ಅಲ್ಲಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.