ಬಿಜೆಪಿಯಿಂದ ಅಭಿವೃದ್ಧಿ ಕಾರ್ಯ ಶೂನ್ಯ: ತಂಗಡಗಿ

| Published : Mar 24 2024, 01:39 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಕೇವಲ ಸುಳ್ಳು ಹೇಳುತ್ತಾರೆ, ಸುಳ್ಳುಗಳು ಇವರ ಮನೆಯ ದೇವರು.

ಕೊಪ್ಪಳ ಕ್ಷೇತ್ರದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಕೇವಲ ಸುಳ್ಳು ಹೇಳುತ್ತಾರೆ, ಸುಳ್ಳುಗಳು ಇವರ ಮನೆಯ ದೇವರು ಎಂದು ಸಚಿವ ಶಿವರಾಜ ತಂಗಡಗಿ ಟೀಕಿಸಿದರು.

ಪಟ್ಟಣದ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ನಿವಾಸದಲ್ಲಿ ನಡೆದ ಕೊಪ್ಪಳ ಕ್ಷೇತ್ರದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ದೇಶದ ಜನರಿಗೆ ಮೂಲಸೌಲಭ್ಯ ಒದಗಿಸಿಕೊಡುವಲ್ಲಿ ವಿಫಲವಾಗಿದೆ ಎಂದರು.

ಇದು ಸುಳ್ಳು ಮತ್ತು ಸತ್ಯದ ನಡುವೆ ನಡೆಯುವ ಚುನಾವಣೆಯಾಗಿದ್ದು, ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ದೇಶದ ಅಭಿವೃದ್ಧಿಗೆ ಪಾತ್ರರಾಗಬೇಕು. ಕಾಂಗ್ರೆಸ್ ಜನಪರವಾದ ಆಡಳಿತ ಮಾಡುತ್ತಿದೆ. ಗ್ಯಾರಂಟಿಗಳನ್ನು ಪೂರೈಸುವ ಮೂಲಕ ಭರವಸೆ ಈಡೇರಿಸಿದೆ. ಪಕ್ಷವು ಬಡವರ ಪರವಾಗಿ ಆಡಳಿತ ಮಾಡುತ್ತಿದೆ ಎಂದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ನರೇಂದ್ರ ಮೋದಿ ಅವರಿಗೆ ಅಭಿವೃದ್ಧಿ ಪರವಾದ ವಿಚಾರಗಳೇ ಇಲ್ಲವಾಗಿವೆ. ಅವರು ಬಡವರ ಪರ ಆಡಳಿತ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನೀಡಿರುವ ಒಂದೂ ಭರವಸೆ ಈಡೇರಿಸಿಲ್ಲ. ಬರೀ ಜಾತಿ, ಧರ್ಮದ ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಮಾತನಾಡಿದರು.

ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ, ಮಾಲತಿ ನಾಯಕ, ಚಂದ್ರು ನಾಲತವಾಡ, ಕಲ್ಲಪ್ಪ ತಳವಾರ, ಕೃಷ್ಣ ಇಟ್ಟಂಗಿ, ಶರಣಬಸವರಾಜ, ವಸಂತ ಕುಷ್ಟಗಿ, ದೊಡ್ಡಯ್ಯ ಗದ್ದಡಕಿ, ಶರಣಪ್ಪ, ಅಮರೇಗೌಡ ವಕೀಲರು, ಪ್ರಕಾಶ ರಾಠೋಡ, ಶಂಕರಗೌಡ ವಕೀಲರು, ಮಹಾಂತೇಶ ಅಗಸಿಮುಂದಿನ, ಶಕುಂತಲಾ ಹಿರೇಮಠ ಇದ್ದರು.