ಸಾರಾಂಶ
ಕೋಲಾರ : ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಕಾಂಗ್ರೆಸ್ ಮಾಡದ ಅಭಿವೃದ್ದಿ ಕೆಲಸಗಳನ್ನು ಮೋದಿ ಮಾಡಿರುವುದರಿಂದ ನಮಗೆ ಕರ್ನಾಟಕ ಸೇರಿ ಎಲ್ಲೆಡೆ ಉತ್ತಮ ಬೆಂಬಲ ದೊರೆತಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಯಿತು. ಆದರೆ, ಪ್ರತಿಪಕ್ಷಗಳು ಮಂಡಿಸಿದ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ವಿಚಾರ ಮಹಾರಾಷ್ಟ್ರದಲ್ಲಿ ಪ್ರಭಾವ ಬೀರಿದ್ದರಿಂದ ಸ್ವಲ್ಪ ಹಿನ್ನಡೆಯಾಯಿತು. ಏಕೆಂದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಾರಾಷ್ಟ್ರದವರು. ಹಾಗೆಯೇ ಮುಸ್ಲಿಂ ಹಾಗೂ ದಲಿತ ಮತಗಳು ನಮಗೆ ವಿರುದ್ದವಾದದ್ದು ಸಹ ಹಿನ್ನಡೆಗೆ ಕಾರಣ. ಆದರೂ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದ್ದೇವೆ. ವಿರೋಧ ಪಕ್ಷದವರು ಏನೇ ಮಾಡಿದರೂ 5 ವರ್ಷಗಳ ಕಾಲ ಸರ್ಕಾರ ನಿರಾತಂಕವಾಗಿ ನಡೆಯಲಿದೆ ಎಂದರು.
ವಿರೋಧ ಪಕ್ಷದವರಿಗೆ ಅಧಿಕಾರದ ಆಸೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇಂಡಿಯಾ ಒಕ್ಕೂಟದಲ್ಲೂ ಒಡಕು ಉಂಟಾಗಬಹುದು. ಆದರೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಪ್ರಧಾನಿ ದೇವೇಗೌಡರು ನಮ್ಮ (ಎನ್ಡಿಎ) ಜೊತೆಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.