ಭತ್ತ, ಕಬ್ಬು ಬೆಳೆಯುತ್ತಿದ್ದ ನೆಲದಲ್ಲಿ ಆ ಬೆಳೆಗಳನ್ನು ಬೆಳೆಯದಂತೆ ರಾಜ್ಯಸರ್ಕಾರ ಸೂಚಿಸಿದೆ. ಇದು ರೈತ ಪರ, ಜನಪರ ಸರ್ಕಾರವೇ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಬಿಟ್ಟು ಇಲ್ಲಿನ ರೈತರ ಬದುಕನ್ನು ಬರಡಾಗಿಸಿದೆ. ಕಾವೇರಿ ನೀರಿನ ವಿಚಾರದಲ್ಲಿ ಕಾನೂನು ತಜ್ಞರ ತಂಡದೊಂದಿಗೆ ಸರ್ಕಾರ ಚರ್ಚೆ ನಡೆಸಲಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಮರುಳಾಗಬೇಡಿ. ಅವರೇನು ಮನೆಯಿಂದ ತಂದು ನಿಮಗೆ ಹಣ ಕೊಡುತ್ತಿಲ್ಲ. ನಿಮ್ಮಿಂದ ಸಂಗ್ರಹಿಸುವ ತೆರಿಗೆ ಹಣವನ್ನು ನಿಮಗೇ ಕೊಟ್ಟು ವಂಚಿಸುತ್ತಿದ್ದಾರೆ. ಅವರು ಕೊಡುವ ಗ್ಯಾರಂಟಿಗಳಿಂದ ಜನರ ಬದುಕು ಉದ್ಧಾರವಾಗುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಬಳಿಘಟ್ಟ ಗ್ರಾಮದಲ್ಲಿ ಶ್ರೀರಾಮಮಂದಿರ ಪುನರ್‌ನಿರ್ಮಾಣ, ಶ್ರೀಮಾರಮ್ಮ ದೇವಿ ದೇಗುಲ ಉದ್ಘಾಟನೆ ಮತ್ತು ಬಳಿಘಟ್ಟ ಏತ ನೀರಾವರಿ ಯೋಜನೆಗೆ 300 ಕೋಟಿ ರು. ನೀಡಿದ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಕೊಡುವ ಚಿಲ್ಲರೆ ಹಣಕ್ಕೆ ಜನರು ಆಸೆಪಡಬಾರದು. ನಿಮ್ಮ ಮಕ್ಕಳು, ಮರಿಮಕ್ಕಳ ಭವಿಷ್ಯವನ್ನು ನೋಡಬೇಕು. ಅವರಿಗೆ ಉತ್ತಮ ಭವಿಷ್ಯ ರೂಪಿಸಿಕೊಡುವುದಕ್ಕೆ ಯಾರು ಸ್ಪಂದಿಸುವರೋ ಅವರನ್ನು ಬೆಂಬಲಿಸುವಂ ತೆ ಮನವಿ ಮಾಡಿದರು.

ಭತ್ತ, ಕಬ್ಬು ಬೆಳೆಯುತ್ತಿದ್ದ ನೆಲದಲ್ಲಿ ಆ ಬೆಳೆಗಳನ್ನು ಬೆಳೆಯದಂತೆ ರಾಜ್ಯಸರ್ಕಾರ ಸೂಚಿಸಿದೆ. ಇದು ರೈತ ಪರ, ಜನಪರ ಸರ್ಕಾರವೇ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಬಿಟ್ಟು ಇಲ್ಲಿನ ರೈತರ ಬದುಕನ್ನು ಬರಡಾಗಿಸಿದೆ. ಕಾವೇರಿ ನೀರಿನ ವಿಚಾರದಲ್ಲಿ ಕಾನೂನು ತಜ್ಞರ ತಂಡದೊಂದಿಗೆ ಸರ್ಕಾರ ಚರ್ಚೆ ನಡೆಸಲಿಲ್ಲ. ನಾನು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವಂತೆಲೆರಡು-ಮೂರು ಬಾರಿ ಹೇಳಿದರೂ ಎಚ್ಚೆತ್ತುಕೊಳ್ಳಲಿಲ್ಲ. ಏಕೆಂದರೆ ಅವರಿಗೆ ಜನರ ಸಮಸ್ಯೆ ಬೇಕಿಲ್ಲ ಎಂದು ಕುಟುಕಿದರು.

ರಾಜ್ಯದ 120 ತಾಲೂಕುಗಳಲ್ಲಿ ಬರ ಇದೆ. ಬಯಲು ಸೀಮೆಯ ಜನರಿಗೆ ನೀರಾವರಿ ಯೋಜನೆಗಳನ್ನು ವಿಸ್ತರಿಸುವಲ್ಲೂ ಸರ್ಕಾರ ವಿಫಲವಾಗಿದೆ. ಬಳಘಟ್ಟಕ್ಕೆ ನೀರೇ ಬರುವುದಿಲ್ಲವೆಂದಾಗ ಪುಟ್ಟರಾಜು ನೀರು ಕೊಡಲಿಲ್ಲವೆ. ಅಂತಹ ಇಚ್ಛಾಶಕ್ತಿ, ಬದ್ಧತೆ ರಾಜ್ಯಸರ್ಕಾರಕ್ಕಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, ಮನ್‌ಮುಲ್‌ ನಿರ್ದೇಶಕ ಸಿ.ಶಿವಕುಮಾರ, ಜಿಪಂ ಮಾಜಿ ಸದಸ್ಯ ಎಚ್‌.ಮಂಜುನಾಥ, ಗ್ರಾಮದ ಮುಖಂಡರಾದ ರಾಮೇಗೌಡ, ಗೋಪಾಲಗೌಡ, ಶಂಭೂನಹಳ್ಳಿ ಆನಂದ್‌, ಬೋರೇಗೌಡ, ಹೊಸಕೋಟೆ ಪುಟ್ಟರಾಜು ಇತರರಿದ್ದರು.