ಹಿಂದಿನ ಸರ್ಕಾರಗಳು ಹಾಗೂ ಅಧಿಕಾರಿಗಳು ನೈಸ್ ಯೋಜನೆಯಲ್ಲಿ ಶಾಮೀಲಾಗಿದ್ದಾರೆ. ಎಲ್ಲರೂ ಪ್ರೇಮ್ ವರ್ಕ್ ಅಗ್ರಿಮೆಂಟ್‌ನ್ನು ಉಲ್ಲಂಘನೆ ಮಾಡುವ ಮೂಲಕ ಕಪಂನಿ ಮಾಲೀಕನಿಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ರೈತರ ಭೂಮಿಗಳನ್ನು ಲೂಟಿ ಮಾಡಿದ್ದಾರೆ. ೨೦ ವರ್ಷ ಆದರೂ ಸಹ ಇನ್ನೂ ರೈತರಿಗೆ ಹಣ ಪಾವತಿ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ನೈಸ್ ಯೋಜನೆ ಹೆಸರಿನಲ್ಲಿ ಸರ್ಕಾರ ಕಂಪನಿ ಜೊತೆಗೆ ಶಾಮೀಲಾಗಿದೆ ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.ಮೇಲುಕೋಟೆಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದಿನ ಸರ್ಕಾರಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಎಲ್ಲರೂ ಪ್ರೇಮ್ ವರ್ಕ್ ಅಗ್ರಿಮೆಂಟ್‌ನ್ನು ಉಲ್ಲಂಘನೆ ಮಾಡುವ ಮೂಲಕ ಕಪಂನಿ ಮಾಲೀಕನಿಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ರೈತರ ಭೂಮಿಗಳನ್ನು ಲೂಟಿ ಮಾಡಿದ್ದಾರೆ. ೨೦ ವರ್ಷ ಆದರೂ ಸಹ ಇನ್ನೂ ರೈತರಿಗೆ ಹಣ ಪಾವತಿ ಮಾಡಿಲ್ಲ ಎಂದು ಲೇವಡಿ ಮಾಡಿದರು.

ಈ ಎಲ್ಲಾ ಆಧಾರ ಇಟ್ಟುಕೊಂಡುವ ನ್ಯಾಯಾಲಯ ಟೋಲ್ ಸಂಗ್ರಹ ಕಾನೂನು ಬಾಹಿರ ಎಂದು ಹೇಳಿದೆ. ಆದರೂ, ರಾಜ್ಯ ಸರ್ಕಾರ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಲೋಕೋಪಯೋಗಿ ಸಚಿವರು ಇನ್ನೂ ೨೦ ವರ್ಷ ಅಗ್ರಿಮೆಂಟ್ ಇದೆ ಎನ್ನುತ್ತಿದ್ದಾರೆ. ಯಾವ ಅಗ್ರಿಮೆಂಟ್ ಇದೆ ಎಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಖೇಣಿ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ:

ಖೇಣಿ ನನಗೆ ಏನು ಹೇಳಬೇಕಿಲ್ಲ. ಆತನನ್ನು ಕಟ್ಟಿಕೊಂಡು ನನಗೇನು ಆಗಬೇಕಿಲ್ಲ. ನಾನು ಅವನಿಗೇನು ಹೇಳುತ್ತಿಲ್ಲ. ನಾನು ಹೇಳುತ್ತೀರೋದು ಈ ಸರ್ಕಾರಕ್ಕೆ. ಕೋರ್ಟ್ ಆದೇಶ ಕೊಟ್ಟಿರುವುದು ಸರ್ಕಾರಕ್ಕೆ ಖೇಣಿಗಲ್ಲ ಎಂದು ತಿರುಗೇಟು ನೀಡಿದರು.

ನಾನು ಪ್ರಚೋದನೆ ಮಾಡುತ್ತಿಲ್ಲ. ಜನರು ಇಷ್ಟೋತ್ತಿಗಾಗಲೇ ನುಗ್ಗಬೇಕಿತ್ತು. ತಾಳ್ಮೆಯಿಂದ ಕಾಯುತ್ತಿದ್ದಾರೆ. ಯಾವಾಗ ನುಗ್ಗುತ್ತಾರೋ ಗೊತ್ತಿಲ್ಲ ಎಂದರು.

ನಾನು ಅವನ್ಯಾರಿಗೋ ಉತ್ತರ ಕೊಡೋಕೆ ಬಂದಿಲ್ಲ. ಅವರೆಲ್ಲ ಲೂಟಿ ಮಾಡಲು ಬಂದವರು. ನೈಸ್ ಯೋಜನೆಗೆ ೫ ರುಪಾಯಿ ಹಣ ಹಾಕಿಲ್ಲ ಆತ. ರಾಜ್ಯ ಸರ್ಕಾರ ೧೦ ರುಗೆ ಭೂಮಿನಾ ಲೀಸ್‌ಗೆ ಕೊಟ್ಟರು. ರಾಜ್ಯದ ಆಸ್ತಿಯನ್ನು ಐಸಿಐಸಿಯಲ್ಲಿ ಅಡವಿಟ್ಟು ಸಾಲ ತಂದು ಈ ಆಟ ಆಡಿಕೊಂಡು ಕೂತಿದ್ದಾನೆ ಎಂದು ಹರಿಹಾಯ್ದರು.

ಸರ್ಕಾರ ನಡೆಸುವವರು ಇದನ್ನು ನೋಡಿಕೊಂಡು ಸುಮ್ಮನೆ ಕುಳಿತಿದ್ದಾರೆ. ಈ ಸಂಬಂಧ ವಿಧಾನಸಭಾ ಕಲಾಪದಲ್ಲಿ ಪ್ರಶ್ನೆ ಮಾಡಿದ್ದೇನೆ. ಸದನ ಒಪ್ಪುವುದಾದರೆ ಈ ಪ್ರಾಜೆಕ್ಟ್ ‌ನ ಸ್ಕ್ರಾಪ್ ಮಾಡೋಣ ಎಂದು ೨೦೦೬-೦೭ ರಲ್ಲೆ ಹೇಳಿದ್ದೇನೆ. ಆಗ ಇವರು ಏನು ಹೇಳಲಿಲ್ಲ. ನನಗೆ ಬೆಂಬಲ ಇರಲಿಲ್ಲ. ಇದ್ದದ್ದು ಕೇವಲ ೩೮ ಜನ ಶಾಸಕರ ಬೆಂಬಲ ಅಷ್ಟೇ ಏನು ಮಾಡೋದು ಎಂದರು.

ಕ್ಯಾಬಿನೆಟ್ ಮುಂದೆ ತಂದಾಗ ಬಾಯ್ಕಟ್ ಮಾಡಿದ್ದರು. ನನಗೆ ಜನ ೧೩೪ ಶಾಸಕ ಸ್ಥಾನ ಕೊಟ್ಟಿದ್ದರೆ. ಬಹಳಷ್ಟು ಜನ ಜೈಲಿನಲ್ಲಿ ಇರುತ್ತಿದ್ದರು ಎಂದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಜರಿದ್ದರು.