ಕನ್ನಡಪ್ರಭ ವಾರ್ತೆ ಪಾಂಡವಪುರ

ಸೋಲಿನ‌ ಹತಾಶೆಯಿಂದ ಮತದಾರರ ಪಟ್ಟಿಯಿಂದ 85 ಶಿಕ್ಷಕರನ್ನು‌ ಹಿಂದಿನ ಆಡಳಿತ ಮಂಡಳಿ ಕೈಬಿಟ್ಟಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ಎಂ.ಡಿ.ಕುಮಾರ್ ಹಾಗೂ ಸಂಘದ ಚುನಾವಣಾ ಆಕಾಂಕ್ಷಿತ ಎಸ್.ಎನ್.ಕೆಂಪೇಗೌಡ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ‌ಚುನಾವಣೆಯಲ್ಲಿ 85 ಶಿಕ್ಷಕರನ್ನು ಕೈ ಬಿಟ್ಟಿರುವ ಬಗ್ಗೆ ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ವಿಜಯಕುಮಾರ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಯುವರಾಜು ಇತರರು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದರು.

ಸಂಘ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸಂಘ 85 ಶಿಕ್ಷಕರನ್ನು ಮತಪಟ್ಟಿಯಿಂದ ಕೈಬಿಟ್ಟಿದೆ ಹೊರತು ಇದರಲ್ಲಿ ಯಾವ ದುರುದ್ದೇಶವಿಲ್ಲ. ಜತೆಗೆ ತುರ್ತು ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮತಪಟ್ಟಿ ಏ.11ರಂದು ಸಿಕ್ಕಿದೆ ಎಂದು‌ ಸ್ಪಷ್ಟಪಡಿಸಿದರು.

ಕಳೆದ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಸಂಘದ ಅಭಿವೃದ್ಧಿ ಜತೆಗೆ ತಾಲೂಕಿನ ಶಿಕ್ಷಕರ ಹಿತ ಕಾಪಾಡಲು ಶ್ರಮಿಸಲಾಗಿದೆ. ಬಾಗಿಲು ಮುಚ್ಚಿದ ಶಿಕ್ಷಕರ ಭವನವನ್ನು ಪುನಶ್ಚೇತನಗೊಳಿಸಿ ಶಿಕ್ಷಕರ ಹಲವು ಕಾರ್ಯ ಚಟುವಟಿಕೆ ನಡೆಸಲಾಗಿದೆ. ಸಂಘದ ಅಭಿವೃದ್ಧಿ ಸಹಿಸದೆ ಇದೊಂದು ಅಕ್ರಮ ಚುನಾವಣೆ ಎಂದು ಆರೋಪಿಸಿರುವುದು ಸರಿಯಲ್ಲ ಎಂದರು.


ಚುನಾವಣೆ ಹಿನ್ನೆಲೆಯಲ್ಲಿ ಪದವೀಧರ 63 ಶಿಕ್ಷಕರ ಹೆಸರು ಕೈಬಿಡಲಾಗಿದೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೇರ ಹಾಗೂ ಮುಕ್ತ ಚುನಾವಣೆ ನಡೆಸುವ ಬದಲು ಅಕ್ರಮ ಹಾಗೂ ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದಿರುವ ಎಂ.ಕೆ.ವಿಜಯಕುಮಾರ್ ಆರೋಪ ನಿರಾಧಾರ. ಗಡ್ಡ ಚಂದ್ರಶೇಖರ್ ಅಧ್ಯಕ್ಷರಾಗಿದ್ದ ವೇಳೆ ಸುಮಾರು 65 ಶಿಕ್ಷಕರನ್ನು ಮತಪಟ್ಟಿಯಿಂದ ಕೈಬಿಡಲಾಗಿತ್ತು. ಜತೆಗೆ ಅಂದು ಇದೇ ವಿಜಯಕುಮಾರ್ ಕಾರ್ಯದರ್ಶಿಯಾಗಿದ್ದರು. ಅದನ್ನು ಏಕೆ ಇವರು ಪ್ರಶ್ನಿಸಲಿಲ್ಲ. ಪದವೀಧರ ಶಿಕ್ಷಕರ ಸಂಘ ಪ್ರತ್ಯೇಕವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸಂಘವೇ ಆ ಶಿಕ್ಷಕರ ಹೆಸರು ಕೈಬಿಟ್ಟಿದೆ ಎಂದು ಸ್ಪಷ್ಟಪಡಿಸಿದರು.

ತಾಲೂಕಿನ ಶಿಕ್ಷಕರು ಎಲ್ಲವನ್ನು ಅರಿತಿದ್ದಾರೆ. ಜತೆಗೆ ಸಂಘಧ ಅಭಿವೃದ್ಧಿ ಕೆಲಸವನ್ನು ಕಣ್ಣಾರೆ ಕಂಡಿರುವ ಶಿಕ್ಷಕರು ಏ.19ರ ಚುನಾವಣೆಯಲ್ಲಿ ನಮ್ಮ ತಂಡವನ್ನು ಗೆಲ್ಲಿಸುವ ಮೂಲಕ ಗಡ್ಡ ಚಂದ್ರಶೇಖರ್ ತಂಡಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.

ಮತಪಟ್ಟಿಯಿಂದ ಕೈಬಿಟ್ಟಿರುವ ಶಿಕ್ಷಕರಿಗೆ ಮೂರು ಬಾರಿ ಕಾರಣ ಕೇಳಿ ನೋಟೀಸ್ ನೀಡಬೇಕಿತ್ತು ಎಂದಿರುವ ಗಡ್ಡ ಚಂದ್ರಶೇಖರ್ ತಮ್ಮ ಅವಧಿಯಲ್ಲಿ ಶಿಕ್ಷಕರ ಹೆಸರು ಕೈಬಿಟ್ಟಾಗ ಯಾರಿಗೆ ನೋಟೀಸ್ ನೀಡಿದ್ದರು. ನಾವು ಸಂಘದ ಬೈಲಾ ಪ್ರಕಾರವೇ ನಡೆದುಕೊಂಡಿದ್ದೇವೆ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಚುನಾವಣಾ ಆಕಾಂಕ್ಷಿತರಾದ ಬಿ.ಎಂ.ನಾಗೇಗೌಡ, ಜೆ.ಶಿವಲಿಂಗಮ್ಮ, ಎಚ್.ಸಿ.ಧನಂಜಯ, ಎ.ಎಸ್.ಶಿವರಾಂ, ಎಸ್.ಎನ್.ಕೆಂಪೇಗೌಡ, ಟಿ.ಬಿ.ಪ್ರೇಮಕುಮಾರಿ, ಎಸ್.ರಾಘವೇಂದ್ರ, ಕೆ.ಆರ್.ಧರ್ಮೇಶ್, ಶಿಕ್ಷಕರಾದ ದೀಪು, ಕೆಂಚೇಗೌಡ ಸೇರಿದಂತೆ ಇತರರಿದ್ದರು.