ಗ್ರಾಮೀಣ ಠಾಣೆಯ ಪೊಲೀಸ್ ವರ್ಗಾವಣೆಗೆ ಲಕ್ಷಗಟ್ಟಲೇ ಲಂಚ: ಗೃಹ ಸಚಿವರಿಗೆ ಶಾಸಕರ ಪತ್ರ

| Published : Aug 04 2024, 01:23 AM IST / Updated: Aug 04 2024, 04:30 AM IST

ಸಾರಾಂಶ

 ಪೊಲೀಸ್‌ ಅಧಿಕಾರಿಯೊಬ್ಬ₹20 ಲಕ್ಷ ನೀಡಿ ಇಲ್ಲಿಗೆ ಬಂದಿದ್ದಾರೆ ಹಾಗೂ ಗುರುಮಠಕಲ್‌ ಠಾಣೆಯಲ್ಲಿ ತೆರವಾದ ಇನ್ಸ್‌ಪೆಕ್ಟರ್‌ ಹುದ್ದೆಗೆ ₹40 ಲಕ್ಷ ಬೇಡಿಕೆ ಇದೆ ಎಂದು ಆರೋಪಿಸಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರಗೆ ಪತ್ರ ಬರೆದಿದ್ದು, ವ್ಯಾಪಕ ಸಂಚಲನ ಸೃಷ್ಟಿಸಿದೆ.

 ಯಾದಗಿರಿ : ಗ್ರಾಮೀಣ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬ₹20 ಲಕ್ಷ ನೀಡಿ ಇಲ್ಲಿಗೆ ಬಂದಿದ್ದಾರೆ ಹಾಗೂ ಗುರುಮಠಕಲ್‌ ಠಾಣೆಯಲ್ಲಿ ತೆರವಾದ ಇನ್ಸ್‌ಪೆಕ್ಟರ್‌ ಹುದ್ದೆಗೆ ₹40 ಲಕ್ಷ ಬೇಡಿಕೆ ಇದೆ ಎಂದು ಆರೋಪಿಸಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರಗೆ ಪತ್ರ ಬರೆದಿದ್ದು, ವ್ಯಾಪಕ ಸಂಚಲನ ಸೃಷ್ಟಿಸಿದೆ.

ನಗರ ಠಾಣೆಯ ಪಿಎಸ್‌ಐ ಪರಶುರಾಮ ಅವರ ಸಾವಿನ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿ ಕಂದಕೂರ ಬರೆದ ಪತ್ರದಲ್ಲಿ ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆ ದಂಧೆ ಕುರಿತು ಪ್ರಸ್ತಾಪಿಸಿದ್ದು, ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದ್ದಾರೆ.

ಪರಶುರಾಮ ಯಾದಗಿರಿಯಲ್ಲಿ ಮುಂದುವರೆಯಲು 20 ಲಕ್ಷ ರು. ಬೇಡಿಕೆ ಇಟ್ಟಿರುವುದು ಖಂಡನೀಯ. ಅವೈಜ್ಞಾನಿಕ ವರ್ಗಾವಣೆಯಿಂದಾಗಿ ಹೃದಯಾಘಾತಕ್ಕೆ ಒಳಗಾಗಿ ಅವರು ಮೃತಪಟ್ಟಿದ್ದಾರೆ. ಯಾದಗಿರಿಯಲ್ಲಿ ಸೇವೆ ಮುಂದುವರೆಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಪರಶುರಾಮ ಭೇಟಿಯಾಗಿದ್ದರು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಪರಶುರಾಮ ಅವರ ಕುಟುಂಬದ ನಿರ್ವಹಣೆಗಾಗಿ ನನ್ನ 2 ತಿಂಗಳ ಭತ್ಯೆ ನೀಡುತ್ತೇನೆ ಎಂದು ಕಂದಕೂರ ತಿಳಿಸಿದ್ದಾರೆ.

ಹೋಟೆಲ್‌ ಮೆನು ರೀತಿಯಲ್ಲಿ ದರ ನಿಗದಿ: ಆಯಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಪಡೆಯಲು "ಹೋಟೆಲ್‌ ಮೆನು " ರೀತಿಯಲ್ಲಿ ಇಂತಿಷ್ಟು ಹಣ ನಿಗದಿಪಡಿಸಲಾಗಿದೆ. ಅದರಲ್ಲೂ ನದಿ ತೀರದ ಪ್ರದೇಶ, ಮರಳು, ಮಟ್ಕಾ, ಕ್ಲಬ್‌, ಅಕ್ರಮ ಅಕ್ಕಿ ದಂಧೆ ಹೀಗೆ ಕಾನೂನು ಬಾಹಿರ ಚಟುವಟಿಕೆ ನಡೆಯುವ ಸ್ಥಳಗಳಿಗೆ ಬೇಡಿಕೆ ಹೆಚ್ಚಿದೆ. ಈ ಸ್ಥಳಗಳಲ್ಲಿ ದಂಧೆ ನಡೆಸುವವರೇ ಲಕ್ಷಾಂತರ ಹಣ ನೀಡಿ ವರ್ಗಾವಣೆ ಮಾಡಿಸಿಕೊಂಡ ಬಳಿಕ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.