ಮಂಡ್ಯದಲ್ಲಿ ಹಣ ಬಲವಲ್ಲ, ಜನ ಬಲ ಗೆದ್ದಿದೆ: ಶಾಸಕ ಎಚ್.ಟಿ.ಮಂಜು

| Published : Jun 08 2024, 12:31 AM IST / Updated: Jun 08 2024, 04:39 AM IST

ಮಂಡ್ಯದಲ್ಲಿ ಹಣ ಬಲವಲ್ಲ, ಜನ ಬಲ ಗೆದ್ದಿದೆ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಮಾರಣ್ಣ ಕಾಂಗ್ರೆಸ್ ಹಣಬಲದ ಅಭ್ಯರ್ಥಿಯೊಂದಿಗೆ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯ ಎರಡು ಪಕ್ಷಗಳ ಮತದಾರರು ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ನೀಡಿ ಅಭೂತ ಪೂರ್ವ ಮತನೀಡಿ ಗೆಲುವು ತಂದುಕೊಟ್ಟಿದ್ದಾರೆ.

 ಕೆ.ಆರ್.ಪೇಟೆ :  ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಹಣ ಬಲದ ಅಭ್ಯರ್ಥಿಯೊಂದಿಗೆ ಹೋರಾಟ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅಭೂತ ಪೂರ್ವ ಜನಬೆಂಬಲ ಸಿಕ್ಕಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ಪಟ್ಟಣದ ಬಸವೇಶ್ವರ ಬಡಾವಣೆ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕು ಮತದಾರರು ನಿರೀಕ್ಷೆಗೂ ಮೀರಿದ ಮತಗಳನ್ನು ಕುಮಾರಣ್ಣರಿಗೆ ನೀಡಿರುವುದಕ್ಕೆ ಧನ್ಯವಾದ ಸಲ್ಲಿಸಿದರು.

ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಮಾರಣ್ಣ ಕಾಂಗ್ರೆಸ್ ಹಣಬಲದ ಅಭ್ಯರ್ಥಿಯೊಂದಿಗೆ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯ ಎರಡು ಪಕ್ಷಗಳ ಮತದಾರರು ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ನೀಡಿ ಅಭೂತ ಪೂರ್ವ ಮತನೀಡಿ ಗೆಲುವು ತಂದುಕೊಟ್ಟಿದ್ದಾರೆ ಎಂದರು.

ಜಿಲ್ಲೆಯಲ್ಲಿ ಜೆಡಿಎಸ್ ಮುಗಿದೇ ಹೋಯಿತು ಎನ್ನುತ್ತಿದ್ದವರಿಗೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮತದಾರರು ಪಕ್ಷಾತೀತವಾಗಿ ಕುಮಾರಣ್ಣನ ಬಗ್ಗೆ ಒಲವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ 2,84 ಲಕ್ಷ ಮತಗಳಿಂದ ಗೆಲುವು ಸಾಧಿಸುವುದು ಸುಲಭದ ಮಾತಲ್ಲ. ರಾಜ್ಯಕ್ಕೆ ಎರಡನೇ ಹೆಚ್ಚು ಅಂತರದ ಮತಗಳಿಂದ ಗೆಲುವು ದಾಖಲಿಸಿದ್ದಾರೆ. ಇದರೊಂದಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಹಣೆಪಟ್ಟಿ ಕಳಚಿದಂತಾಗಿದೆ ಎಂದರು.

ಕುಮಾರಣ್ಣನವರು ಕೇಂದ್ರದಲ್ಲಿ ಮಂತ್ರಿಯಾಗಲಿದ್ದು ರಾಜ್ಯದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಮಾಡಲಿದ್ದಾರೆ. ತಾಲೂಕಿನಾದ್ಯಂತ ಲೋಕೋಪಯೋಗಿ ಇಲಾಖೆ ರಸ್ತೆಗಳು ಹಾಳಾಗಿವೆ. ಅವುಗಳ ದುರಸ್ತಿ ಮತ್ತು ಹೇಮಾವತಿ ನದಿ ಪಾತ್ರದ ಮಂದಗೆರೆ, ಹೇಮಗಿರಿ ಮತ್ತು ಅಕ್ಕಿಹೆಬ್ಬಾಳು ಅಣೆಕಟ್ಟುಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದ್ದು ಇನ್ನು ಅನೇಕ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಭರವಸೆ ಸಿಕ್ಕಂತಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎ.ಎನ್.ಜಾನಕಿರಾಮ್, ಮನ್ಮುಲ್ ನಿರ್ದೇಶಕ ಡಾಲುರವಿ, ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಜೆಡಿಎಸ್ ಕಾನೂನು ಘಟಕದ ತಾಲೂಕು ಅಧ್ಯಕ್ಷ ವಿ.ಎಸ್ ಧನಂಜಯ್‌ಕುಮಾರ್ ಮುಂತಾದವರು ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಬಲದೇವ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ಹೋಬಳಿ ಜೆಡಿಎಸ್ ಅಧ್ಯಕ್ಷರಾದ ರವಿಕುಮಾರ್, ಬಸವಲಿಂಗಪ್ಪ, ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತ್‌ಕುಮಾರ್, ಸೇರಿದಂತೆ ಹಲವು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

ಯಾವ ಕುತಂತ್ರವೂ ಫಲ ನೀಡಿಲ್ಲ

ಎಚ್ಡಿಕೆ ಅವರನ್ನು ಸೋಲಿಸಲು ಕಾಣದ ಕೈಗಳು ಕುತಂತ್ರ ನಡೆಸಿದ್ದವು. ಜಿಲ್ಲೆಯ ಮತದಾರರು ನಿಜವಾದ ಜನ ನಾಯಕನನ್ನು ಸಂಸದರಾಗಿ ಆಯ್ಕೆ ಮಾಡಿದ್ದು ಇದು ಸತ್ಯಕ್ಕೆ ಸಂದ ಜಯವಾಗಿದೆ. ಜನರ ಆಶೀರ್ವಾದದ ಮುಂದೆ ಯಾವ ಮಂತ್ರ-ತಂತ್ರ, ಕುತಂತ್ರವೂ ಫಲ ನೀಡಿಲ್ಲ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಜನರ ಮನಸ್ಸಿನಲ್ಲಿ ಎಚ್‌ಡಿಕೆ ಗಳಿಸಿರುವ ಶಾಶ್ವತ ಸ್ಥಾನವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಲ್ಲದೇ, ಮಾಜಿ ಸಚಿವ ಕೆ.ಸಿನಾರಾಯಣಗೌಡರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮದಿಂದಾಗಿ ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ ಎಂದರು.ಕುಮಾರಸ್ವಾಮಿಗೆ ಆಡಳಿತದ ಅನುಭವವಿದೆ ಮತ್ತು ದೇವೇಗೌಡರ ಮಾಗದರ್ಶನದಲ್ಲಿ ಕೆಲಸ ಮಾಡಲಿದ್ದಾರೆ. ಇದು ರಾಜ್ಯದ ಅಭಿವೃದ್ಧಿಗೆ ಖಂಡಿತವಾಗಿಯೂ ನೆರವಾಗಲಿದೆ. ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಗುಣಗಳುಳ್ಳ ನಾಯಕರಾಗಿದ್ದಾರೆ. ಪ್ರಧಾನ ಮೋದಿ ಅವರ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನ ಪಡೆಯುವುದು ನಿಶ್ಚಿತ.

- ಎಚ್.ಟಿ.ಮಂಜು, ಶಾಸಕ