ಸರ್ಕಾರ- ಪಕ್ಷದಲ್ಲಿ ಸಮನ್ವಯತೆ ಇಲ್ಲ: ಮಿಸ್ತ್ರಿಗೆ ನಾಯಕರಿಂದ ದೂರು

| Published : Jul 13 2024, 01:31 AM IST / Updated: Jul 13 2024, 05:52 AM IST

Congress Flag
ಸರ್ಕಾರ- ಪಕ್ಷದಲ್ಲಿ ಸಮನ್ವಯತೆ ಇಲ್ಲ: ಮಿಸ್ತ್ರಿಗೆ ನಾಯಕರಿಂದ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಪಕ್ಷ ಹಾಗೂ ಸರ್ಕಾರದ ನಡುವೆ ತೀವ್ರ ಸಮನ್ವಯ ಕೊರತೆಯಿದೆ. ಇದರಿಂದ ಪಕ್ಷ ಹಾಗೂ ಸರ್ಕಾರ ಎರಡಕ್ಕೂ ನಷ್ಟ ಉಂಟಾಗುತ್ತಿದ್ದು, ಎರಡರ ನಡುವೆ ಸಮನ್ವಯ ಸಾಧಿಸಲು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಐಸಿಸಿ ಸತ್ಯಶೋಧನಾ ಸಮಿತಿ ಎದುರು ರಾಜ್ಯ ಕಾಂಗ್ರೆಸ್‌ ನಾಯಕರು ಮನವಿ ಮಾಡಿದ್ದಾರೆ.

  ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ಸರ್ಕಾರದ ನಡುವೆ ತೀವ್ರ ಸಮನ್ವಯ ಕೊರತೆಯಿದೆ. ಇದರಿಂದ ಪಕ್ಷ ಹಾಗೂ ಸರ್ಕಾರ ಎರಡಕ್ಕೂ ನಷ್ಟ ಉಂಟಾಗುತ್ತಿದ್ದು, ಎರಡರ ನಡುವೆ ಸಮನ್ವಯ ಸಾಧಿಸಲು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಐಸಿಸಿ ಸತ್ಯಶೋಧನಾ ಸಮಿತಿ ಎದುರು ರಾಜ್ಯ ಕಾಂಗ್ರೆಸ್‌ ನಾಯಕರು ಮನವಿ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನಿರೀಕ್ಷಿತ ಸ್ಥಾನ ಗಳಿಸದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಪರಾಮರ್ಶಿಸಲು ಮಧುಸೂದನ್‌ ಮಿಸ್ತ್ರಿ ಅಧ್ಯಕ್ಷತೆಯಲ್ಲಿ ಎಐಸಿಸಿ ಸತ್ಯಶೋಧನಾ ಸಮಿತಿ ರಾಜ್ಯಕ್ಕೆ ಆಗಮಿಸಿದೆ. ಸತತ ಎರಡನೇ ದಿನವಾದ ಶುಕ್ರವಾರವೂ ವಿವಿಧ ಹಂತದ ನಾಯಕರೊಂದಿಗೆ ಸರಣಿ ಸಭೆ ನಡೆಸಿದ ಮಿಸ್ತ್ರಿ ಅವರು ಸೋಲಿಗೆ ಕಾರಣಗಳನ್ನು ಕೇಳಿ ವಿವರಣೆ ಪಡೆದರು.

ಶುಕ್ರವಾರ ಬೆಳಗ್ಗೆಯಿಂದ ಕ್ರಮವಾಗಿ ಕೆಪಿಸಿಸಿ ಪದಾಧಿಕಾರಿಗಳು, 2024ರ ಲೋಕಸಭಾ ಅಭ್ಯರ್ಥಿಗಳು, 2023ರ ವಿಧಾನಸಭೆ ಅಭ್ಯರ್ಥಿಗಳು, ಮುಂಚೂಣಿ ಘಟಕ, ವಿಭಾಗಗಳ ಅಧ್ಯಕ್ಷರು, ನಿಗಮ-ಮಂಡಳಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು.

ಈ ವೇಳೆ ಹಲವರು ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ಕೊರತೆ ಉಂಟಾಗಿರುವುದು ನೀರಸ ಫಲಿತಾಂಶಕ್ಕೆ ಕಾರಣ. ಸರ್ಕಾರವು ಪಕ್ಷದ ಕಾರ್ಯಕರ್ತರನ್ನು ಸೂಕ್ತವಾಗಿ ನಡೆಸಿಕೊಂಡಿಲ್ಲ. ಇದರಿಂದ ಗ್ಯಾರಂಟಿ ಯೋಜನೆ ಜಾರಿಯಾಗಿದ್ದರೂ ಇವುಗಳನ್ನು ಮನೆ-ಮನೆಗೆ ತಲುಪಿಸಿ ಇದು ಸರ್ಕಾರದ ಸಾಧನೆ ಎಂದು ಬಿಂಬಿಸಲು ಪಕ್ಷದ ಕಾರ್ಯಕರ್ತರು ಹಿಂದೇಟು ಹಾಕಿದರು. ಹೀಗಾಗಿ ಸಮನ್ವಯತೆ ಸಾಧಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬೇಕು ಎಂದು ಮನವಿ ಸಲ್ಲಿಸಿದರು ಎನ್ನಲಾಗಿದೆ.

ಇನ್ನು ಹೊಂದಾಣಿಕೆ ರಾಜಕೀಯ, ಸಚಿವರ ನಿರ್ಲಕ್ಷ್ಯ, ಶಾಸಕರು ವಿಧಾನಸಭೆ ಚುನಾವಣೆಯಲ್ಲಿ ಮಾಡಿದಷ್ಟು ಗಂಭೀರವಾಗಿ ಕೆಲಸ ಮಾಡದಿರುವುದು ಸೇರಿದಂತೆ ಹಲವು ಕಾರಣಗಳನ್ನು ರಾಜ್ಯ ನಾಯಕರು ಸಮಿತಿ ಮುಂದಿಟ್ಟರು ಎಂದು ಹೇಳಲಾಗಿದೆ.

20ಕ್ಕೂ ಹೆಚ್ಚು ಸಚಿವರ ಖಾತೆ ಬದಲಿಸಿ: ಇನ್ನು ಕೆಲ ಸಚಿವರು ತಮಗೆ ನೀಡಿರುವ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿನ ಪಕ್ಷದ ಸೋಲಿನ ಬಳಿಕವೂ ಸಚಿವರ ಕಾರ್ಯವೈಖರಿ ಬದಲಾಗಿಲ್ಲ. ಹೀಗಾಗಿ 20ಕ್ಕೂ ಹೆಚ್ಚು ಸಚಿವರ ಖಾತೆಗಳನ್ನು ಅದಲು-ಬದಲು ಮಾಡಿ. ಸಚಿವರಿಗೆ ಚುರುಕು ಮುಟ್ಟಿಸದಿದ್ದರೆ ಪಕ್ಷ ಹಾಗೂ ಸರ್ಕಾರಕ್ಕೆ ಹಾನಿ ಕಟ್ಟಿಟ್ಟ ಬುತ್ತಿ ಎಂದು ಹಳೆ ಮೈಸೂರು ಭಾಗದ ಕೆಲ ಶಾಸಕರು ದೂರಿದ್ದಾರೆ ಎನ್ನಲಾಗಿದೆ.

ಎ.ಸಿ. ಶ್ರೀನಿವಾಸ್‌ಗೆ ಮಿಸ್ತ್ರಿ ಶಹಬ್ಬಾಸ್‌ಗಿರಿ: 2023ರ ವಿಧಾನಸಭೆ ಚುನಾವಣೆಯಲ್ಲಿ ತಾವು ಪಡೆದ ಲೀಡ್‌ಗಿಂತ ಹೆಚ್ಚು ಲೀಡ್‌ ಅನ್ನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಕೊಡಿಸಿರುವ ಪುಲಕೇಶಿನಗರ ಶಾಸಕ ಎ.ಸಿ. ಶ್ರೀನಿವಾಸ್‌ ಅವರನ್ನು ಮಧುಸೂದನ್‌ ಮಿಸ್ತ್ರಿ ಅಭಿನಂದಿಸಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ 62,210 ಲೀಡ್‌ ಪಡೆದು ಗೆದ್ದಿದ್ದ ಎ.ಸಿ. ಶ್ರೀನಿವಾಸ್‌ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜೀವ್‌ಗೌಡ ಅವರಿಗೆ ಶೋಭಾ ಕರಂದ್ಲಾಜೆ ವಿರುದ್ಧ 87,795 ಲೀಡ್‌ ಕೊಡಿಸಿದ್ದಾರೆ. ಹೀಗಾಗಿ ಮಿಸ್ತ್ರಿ ಅಭಿನಂದಿಸಿದರು ಎಂದು ತಿಳಿದುಬಂದಿದೆ.

ಚಲುವರಾಯಸ್ವಾಮಿ ನೇತೃತ್ವದ ತಂಡ ಭೇಟಿ: ಮಂಡ್ಯ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ನೇತೃತ್ವದ ಮಂಡ್ಯ ಜಿಲ್ಲಾ ಕಾಂಗ್ರೆಸ್‌ ನಾಯಕರ ತಂಡವು ಶುಕ್ರವಾರ ಎಐಸಿಸಿ ಸತ್ಯ ಶೋಧನಾ ಸಮಿತಿ ನಾಯಕರನ್ನು ಭೇಟಿ ಮಾಡಿದ್ದು, ಈ ವೇಳೆ ಮಂಡ್ಯ ಸೋಲಿಗೆ ಕಾರಣಗಳ ಬಗ್ಗೆ ವಿವರಣೆ ನೀಡಿದೆ.

ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ, ಲೋಕಸಭೆ ಪರಾಜಿತ ಅಭ್ಯರ್ಥಿ ಸ್ಟಾರ್‌ ಚಂದ್ರು (ವೆಂಕಟರಮಣಗೌಡ) ಅವರನ್ನು ಒಳಗೊಂಡ ತಂಡವು, ಮಂಡ್ಯ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಪದವೀಧರ ಕ್ಷೇತ್ರದ ಚುನಾವಣೆ, ಕಳೆದ ವಿಧಾನಸಭಾ ಚುನಾವಣೆಯಲ್ಲೂ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಇಷ್ಟಾದರೂ ಈ ಲೋಕಸಭೆ ಚುನಾವಣೆಯಲ್ಲಿ ಸೋಲಲು ತಮ್ಮದೇ ಆದ ಕೆಲವು ಕಾರಣಗಳನ್ನು ಸಚಿವರು ಸಮಿತಿಯ ಮುಂದಿಟ್ಟರು.