ಜಾತಿ ಗಣತಿ ಮಂಡನೆಯಾಗಬೇಕಿದ್ದ ಸಂಪುಟ ಸಭೆ 1 ವಾರ ಮುಂದೂಡಿಕೆ - ಅ.18ಕ್ಕೆ ನಡೆಯಬೇಕಿದ್ದ ಸಭೆ, 25ಕ್ಕೆ ಮುಂದೂಡಿದ ಸರ್ಕಾರ

| Published : Oct 15 2024, 04:47 AM IST / Updated: Oct 15 2024, 04:48 AM IST

Janata Curfew Vidhansoudha

ಸಾರಾಂಶ

ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಮಂಡನೆ ಆಗಲಿರುವ ಕಾರಣಕ್ಕೆ ತೀವ್ರ ನಿರೀಕ್ಷೆ ಹುಟ್ಟು ಹಾಕಿದ್ದ ಸಚಿವ ಸಂಪುಟ ಸಭೆಯು ಅ.18ರ ಬದಲಿಗೆ ಅ.25ರ ಶುಕ್ರವಾರಕ್ಕೆ ಮುಂದೂಡಿಕೆ ಕಂಡಿದೆ.

ಬೆಂಗಳೂರು : ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಮಂಡನೆ ಆಗಲಿರುವ ಕಾರಣಕ್ಕೆ ತೀವ್ರ ನಿರೀಕ್ಷೆ ಹುಟ್ಟು ಹಾಕಿದ್ದ ಸಚಿವ ಸಂಪುಟ ಸಭೆಯು ಅ.18ರ ಬದಲಿಗೆ ಅ.25ರ ಶುಕ್ರವಾರಕ್ಕೆ ಮುಂದೂಡಿಕೆ ಕಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿ ಅನುಷ್ಠಾನದ ಕುರಿತು ಅ.7 ರಂದು ಹಿಂದುಳಿದ ವರ್ಗಗಳ ಸಚಿವರು, ಶಾಸಕರ ಸಭೆ ನಡೆಸಿದ್ದರು. ಸಭೆ ಬಳಿಕ ಅ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೇ ಜಾತಿಗಣತಿ ವರದಿಯನ್ನು ಮಂಡಿಸುತ್ತೇವೆ. ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ವರದಿ ಅನುಷ್ಠಾನದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದರು.

ಅ.17ರಂದೇ ಸಚಿವ ಸಂಪುಟ ಸಭೆ ನಡೆಯಬೇಕು. ಆದರೆ ವಾಲ್ಮೀಕಿ ಜಯಂತಿಯಿಂದಾಗಿ ಅ.18ರಂದು ಸಚಿವ ಸಂಪುಟ ಸಭೆ ನಡೆಸಲಿದ್ದೇವೆ. ಅಂದೇ ಜಾತಿಗಣತಿ ವರದಿ ಸಂಪುಟದಲ್ಲಿ ಮಂಡಿಸಲಿದ್ದೇವೆ. ಇದು ಬರೀ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ. 7 ಕೋಟಿ ಕನ್ನಡಿಗರ ಸಮೀಕ್ಷೆ ಎಂದು ಹೇಳಿದ್ದರು.

ಇದೀಗ ಅ.18 ರಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಅ.25 ರಂದು ನಡೆಯುವಂತೆ ದಿನಾಂಕ ನಿಗದಿಪಡಿಸಿದ್ದು, ಸಭೆ ಸೂಚನಾ ಪತ್ರ ಹೊರಡಿಸಲಾಗಿದೆ. ಜಾತಿಗಣತಿ ಕುರಿತು ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವಾಗಲೇ ಸಚಿವ ಸಂಪುಟ ಸಭೆ ಒಂದು ವಾರಗಳ ಕಾಲ ಮುಂದೂಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಹತ್ತು ವರ್ಷಗಳ ಬಳಿಕ ಮಂಡನೆ:

ಜಾತಿಗಣತಿಗಾಗಿ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಎಚ್. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿತ್ತು. 2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿ ಮುಗಿದರೂ ವರದಿ ಸಿದ್ಧವಾಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕಾಂತರಾಜು ಅವರು ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದರೂ ಕುಮಾರಸ್ವಾಮಿ ಸ್ವೀಕರಿಸಿರಲಿಲ್ಲ ಎಂಬ ಆರೋಪ ಬಂದಿತ್ತು. ಇತ್ತೀಚೆಗೆ ಜಯಪ್ರಕಾಶ್ ಹೆಗ್ಡೆ ಅವರು ವರದಿ ಸಲ್ಲಿಸಿದ್ದು, ಮುಡಾ ಪ್ರಕರಣ ತೀವ್ರ ಗದ್ದಲ ಸೃಷ್ಟಿಸಿರುವ ಮಧ್ಯೆಯೇ ಹತ್ತು ವರ್ಷಗಳ ಬಳಿಕ ಜಾತಿಗಣತಿ ವರದಿ ಮಂಡನೆ ಪ್ರಸ್ತಾಪ ಮುನ್ನೆಲೆಗೆ ಬಂದಿದೆ.