ಜೆಡಿಎಸ್ ಎಲ್ಲಿದೆ ಎಂದವರಿಗೆ ಉತ್ತರ ಸಿಕ್ಕಿದೆ

| Published : Jun 06 2024, 12:30 AM IST

ಸಾರಾಂಶ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಾಧನೆ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದಕ್ಕೆ ಹೊರಟಿದ್ದು, ಬಡವರ ಪರವಾಗಿ, ರೈತರ ಪರವಾಗಿ ಕೆಲಸ ಮಾಡಲಿಲ್ಲ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಜೆಡಿಎಸ್ ಎಲ್ಲಿದೆ ಎಲ್ಲಿದೆ ಎಂದು ಕೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಸಭಾ ಚುನಾವಣೆ ಮೂಲಕ ಉತ್ತರ ಕೊಟ್ಟಿದ್ದೇವೆ ಎಂದು ಶಾಸಕ ಮೇಲೂರು ರವಿಕುಮಾರ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ತಾಲೂಕಿನ ಮೇಲೂರು ಗ್ರಾಮದ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರ ಮತ್ತು ಮಂಡ್ಯ ಎರಡು ಕ್ಷೇತ್ರಗಳಲ್ಲಿ ಬಹುಮತದಿಂದ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಮಲ ದೇವರ ಪಾದದಲ್ಲಿದ್ದರೆ ಚಂದ, ತೆನೆ ಕಣದಲ್ಲಿದ್ದರೆ ಬಡವವರ ಹಸಿವನ್ನು ನೀಗಿಸುತ್ತದೆ. ಅದೇ ಕೈ ಅಧಿಕಾರದಲ್ಲಿದ್ದರೆ ನಕಲಿ ಸಹಿಗಳನ್ನು ಹಾಕುವಲ್ಲಿ ಎತ್ತಿದ ಕೈ ಆಗಿರುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದರು. ರಾಜ್ಯದಲ್ಲಿ 19 ಸ್ಥಾನ ಗೆದ್ದಿದ್ದೇವೆ

ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ. ಮಲ್ಲೇಶ್ ಬಾಬು ಅವರು 6,91,481 ಮತಗಳು ಪಡೆದು 71388 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆ.ಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಸೂಚನೆ ಮೇರೆಗೆ ಈ ಬಾರಿ ಚುನಾವಣೆ ಎದುರಿಸಿದ್ದೆವು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 19 ಎನ್.ಡಿ.ಎ ಮೈತ್ರಿ ಅಭ್ಯರ್ಥಿಗಳಿಗೆ ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ ಎಂದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಾಧನೆ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದಕ್ಕೆ ಹೊರಟಿದ್ದು, ಬಡವರ ಪರವಾಗಿ, ರೈತರ ಪರವಾಗಿ ಕೆಲಸ ಮಾಡಲಿಲ್ಲ. ಸಿದ್ದರಾಮಯ್ಯ ಅವರಿಗೆ ಗರ್ವಭಂಗ ಮಾಡಬೇಕೆಂದು ದೇವೇಗೌಡರು ಸೂಚನೆ ನೀಡಿದಂತೆ ನಾವು ಕೆಲಸ ಮಾಡಿದ್ದೇವೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದೇವೆ ಎಂದರು.

ಗ್ಯಾರಂಟಿ ತಿರಸ್ಕರಿಸಿದ ಮತದಾರ

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿಗಳಿಗೆ ಜನ ಮಣೆ ಹಾಕಲಿಲ್ಲ. ವಾಲ್ಮೀಕಿ ಸಮುದಾಯದ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ಹಗರಣವಾಗಿದೆ. ಡಿಕೆ ಶಿವಕುಮಾರ್ ಹೇಳುತ್ತಿದ್ದ ಮಾತು ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿ ಇರಬೇಕು ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳುತ್ತಿದ್ದರು. ಈಗ ನಾವು ಹೇಳುತ್ತೇವೆ. ಕೈ ಅಧಿಕಾರದ್ದಲ್ಲಿದ್ದರೆ ನಕಲಿ ಸಹಿ ಮಾಡಿ ಲೂಟಿ ಹೊಡೆಯಲು ಚೆಂದ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಂಕ್ ಮುನಿಯಪ್ಪ, ಜೆಡಿಎಸ್ ಅಧ್ಯಕ್ಷ ವೆಂಕಟೇಶಪ್ಪ, ಪಿ.ಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರ, ಹುಜಗೂರು ರಾಮಣ್ಣ, ಸದಾಶಿವ, ಮೇಲೂರು ಮಂಜುನಾಥ್, ಗಂಜಿಗುಂಟೆ ನರಸಿಂಹಮೂರ್ತಿ, ಶಿವಣ್ಣ, ನಗರಸಭೆ ಸದಸ್ಯರಾದ ರಾಘವೇಂದ್ರ, ಸುರೇಶ್, ಮುಖಂಡರಾದ ಎಸ್.ಎಂ. ರಮೇಶ್, ಬಾಲಕೃಷ್ಣ, , ನವೀನ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಇತರರು ಹಾಜರಿದ್ದರು.