ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರಸಭೆ ವ್ಯಾಪ್ತಿಯಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯುಜಿಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಕೆಲ ದಿನಗಳಲ್ಲಿಯೇ ಕಾಮಗಾರಿ ಕೂಡ ಪ್ರಾರಂಭಗೊಂಡು ಯುಜಿಡಿ ಸಮಸ್ಯೆಗೆ ಮುಕ್ತಿ ದೊರಕಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು.ನಗರದ ಹಲವೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆಯೇ ಯುಜಿಡಿ ಕಾಮಗಾರಿ ಪ್ರಾರಂಭಗೊಂಡು ಮುಕ್ತಾಯವಾಗಬೇಕಿತ್ತಾದರೂ ಕೆಲ ತಾಂತ್ರಿಕ ಕಾರಣ ಹಾಗೂ ಹಣಕಾಸಿನ ಮುಗ್ಗಟ್ಟಿನಿಂದ ಸ್ವಲ್ಪ ತಡವಾಗಿದ್ದು, ಆದಷ್ಟು ಬೇಗ ಯುಜಿಡಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ನಗರದ ಪ್ರತಿ ವಾರ್ಡ್ನಲ್ಲೂ ₹೧ ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳನ್ನು ಪ್ರಾರಂಭ ಮಾಡುತ್ತಿದ್ದು ಇಂದು ೬, ೯ ಮತ್ತು ೩೦ನೇ ವಾರ್ಡ್ಗಳಲ್ಲಿ ಕಾಮಗಾರಿಗೆ ಚಾಲನೆ ನೀಡುತ್ತಿರುವುದಾಗಿ ತಿಳಿಸಿದರು.ಚನ್ನಪಟ್ಟಣ ನಗರಕ್ಕೆ ಪೂರಕವಾದ ಏನೆಲ್ಲಾ ಕೆಲಸ ಕಾಮಗಾರಿಗಳು ಆಗಬೇಕೋ ಅವುಗಳೆಲ್ಲವನ್ನೂ ಮಾಡುತ್ತಿದ್ದು, ನಗರದ ಎಲ್ಲಾ ಸ್ಟ್ರಾಮ್ ವಾಟರ್ ಡ್ರೈನೇಜ್ ಹೊರಕ್ಕೆ ಹೋಗುವಂತೆ ಮಾಡಲು ಸರ್ವೇ ಮಾಡಿದ್ದು, ಇದನ್ನು ಕಾವೇರಿ ನೀರಾವರಿ ನಿಗಮದ ಮುಖೇನ ₹೬೦ ರಿಂದ ₹೭೦ ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದರು.
ಬಸ್ ನಿಲ್ದಾಣ ಸಮಸ್ಯೆಗೂ ಮುಕ್ತಿ:
ಕಳೆದ ಹತ್ತಾರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ನಗರದ ಖಾಸಗಿ ಬಸ್ ನಿಲ್ದಾಣದ ಸಮಸ್ಯೆಗೂ ಮುಕ್ತಿ ನೀಡಲು ಸರ್ವ ರೀತಿಯ ಪ್ರಯತ್ನ ಮಾಡುತ್ತಿದ್ದು, ಹೈಕೋರ್ಟ್ ಮೆಟ್ಟಿಲೇರಿದ್ದ ಗುತ್ತಿಗೆದಾರ ಅಲ್ಲಿ ತೀರ್ಪು ತನ್ನ ಪರವಾಗಿ ಬಂದಿಲ್ಲವೆಂದು ಇದೀಗ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದಾರೆ. ಆತ ಏನಾದರೂ ಮಾಡಲಿ, ಅದು ರಾಮನಗರ- ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಿಎಂಆರ್ಡಿಎ ವಿಚಾರ, ಅದಕ್ಕೂ ನಮಗೂ ಸಂಬಂಧವಿಲ್ಲ, ಜಾಗ ನಮ್ಮದು, ಹಾಗಾಗಿ ನಮ್ಮ ಸುಪರ್ದಿಗೆ ಬಿಡುವಂತೆ ಡಿಸಿಎಂರವರಿಗೂ ಮತ್ತು ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಬಸ್ ನಿಲ್ದಾಣದ ಜಾಗ ನಗರಸಭೆಗೆ ವರ್ಗಾವಣೆಯಾಗುವ ಮೂಲಕ ಈ ಸಮಸ್ಯೆ ಕೂಡ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೆಟ್ಟಿಹಳ್ಳಿ ಕೆರೆ ಕಾಮಗಾರಿ ವೀಕ್ಷಣೆ:ನಗರದ ಹೃದಯ ಭಾಗದಲ್ಲಿ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಶೆಟ್ಟಿಹಳ್ಳಿ ಕೆರೆಯ ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು, ಕೆರೆಯ ಕೆಳಭಾಗದಲ್ಲಿ ವ್ಯರ್ಥ ನೀರು ಹರಿದು ಹೋಗಲು ಮಾಡಿರುವ ಸಣ್ಣ ಪೈಪ್ಲೈನ್ ಕಂಡು ಕುಪಿತ ಗೊಂಡರು. ಇಷ್ಟು ದೊಡ್ಡ ಕೆರೆಯು ಮಳೆ ಬಂದು ತುಂಬಿದರೆ, ಹೆಚ್ಚಿನ ನೀರು ಶೇಖರಣೆಯಾದರೆ ಹೇಗೆ ಸರಾಗವಾಗಿ ನೀರು ಹರಿದುಹೋಗುತ್ತದೆಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಣ್ಣ ಹೋಲ್ ಮೂಲಕ ಎಷ್ಟು ನೀರು ಹರಿಯಲು ಸಾಧ್ಯ, ಇದರಿಂದ ಕೆರೆಯ ಮೇಲ್ಭಾಗದಲ್ಲಿ ಸಮಸ್ಯೆಯಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಾಗ ಕೆಳ ಭಾಗದ ಮನೆಗಳಿಗೆಲ್ಲಾ ನುಗ್ಗಲಿದ್ದು, ಈ ಬಗ್ಗೆ ಗಮನಹರಿಸಿ ದೊಡ್ಡದಾಗಿ ಪೈಪ್ಗಳನ್ನು ಅಳವಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕೆಂದು ಸೂಚಿಸಿದರು.ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ವಾಸೀಲ್ ಅಲಿಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆ ಚಂದ್ರಶೇಖರ್, ಪ್ಲೇವುಡ್ ಬಾಬು, ರಾಂಪುರ ಲೋಕೇಶ್, ಮುಖಂಡರಾದ ಕೋಟೆ ಸ್ವಾಮಿ, ಸೋಮಸುಂದರ್, ದೇವೇಗೌಡ, ಸೇರಿದಂತೆ ಹಲವರು ಹಾಜರಿದ್ದರು.
