ಸಾರಾಂಶ
ಬೆಂಗಳೂರು : ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹59.54 ಕೋಟಿ ಮೌಲ್ಯದ 10.29 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.
ಆನೇಕಲ್ ತಾಲೂಕು ಅತ್ತಿಬೆಲೆ ಹೋಬಳಿಯ ಹೆಬ್ಬಗೋಡಿಯಲ್ಲಿ ₹24.34 ಕೋಟಿ ಮೌಲ್ಯದ 7.14 ಗುಂಟೆ ಸರ್ಕಾರಿ ಗೋಮಾಳ, ಜಿಗಣಿ ಹೋಬಳಿ ಹಾರಗದ್ದೆ ಗ್ರಾಮದಲ್ಲಿ ಒತ್ತುವರಿಯಾಗಿದ್ದ 0.03 ಎಕರೆ ರಸ್ತೆ, ಸರ್ಜಾಪುರ ಹೋಬಳಿಯ ತಿಗಳಚೌಡೇನಹಳ್ಳಿಯಲ್ಲಿ ರಾಜಕಾಲುವೆ ಮತ್ತು ಸೋಂಪುರದಲ್ಲಿ ಒಟ್ಟು 3.50 ಕೋಟಿ ಮೌಲ್ಯದ 0.35 ಗುಂಟೆ ರಾಜಕಾಲುವೆ ಮತ್ತು ಮರಸೂರು ಗ್ರಾಮ ಮತ್ತು ಚಿಕ್ಕನಹಳ್ಳಿಯಲ್ಲಿ 0.31 ಗುಂಟೆ ಜಮೀನು ಒತ್ತುವರಿ ತೆರವು ಮಾಡಲಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ದೊಡ್ಡಗುಬ್ಬಿ ಗ್ರಾಮದಲ್ಲಿ ₹3.25 ಕೋಟಿ ಮೌಲ್ಯದ 0.07 ಎಕರೆ ಗುಂಡುತೋಪು ಮತ್ತು ಕಾಲುವೆ, ಮಂಡೂರು ಗ್ರಾಮದಲ್ಲಿ 0.03 ಎಕರೆ ಸ್ಮಶಾನ ಹಾಗೂ ಕೆ.ಆರ್ ಪುರ ಹೋಬಳಿ ಥಣಿಸಂದ್ರ ಗ್ರಾಮದಲ್ಲಿ ₹25 ಕೋಟಿ ಮೌಲ್ಯದ 0.16 ಎಕರೆ ಗುಂಡು ತೋಪು ಒತ್ತುವರಿ ತೆರವು ಮಾಡಲಾಗಿದೆ.
ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್ ಹಾಗೂ ಸಂಬಂಧಿಸಿದ ತಾಲೂಕುಗಳ ತಹಸೀಲ್ದಾರ್, ಯೋಜನಾ ನಿರ್ದೇಶಕರು ಮತ್ತು ಇತರ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡರು.