ಸಾರಾಂಶ
ಪಂಡಿತ್ ಎಂ. ವೆಂಕಟೇಶ್ ಕುಮಾರ್, ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ್, ಗಿರೀಶ್ ಕಾಸರವಳ್ಳಿ, ಚಿತ್ರಕಲಾವಿದ ಪ.ಸ.ಕುಮಾರ್ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು 2025ನೇ ಸಾಲಿನ ‘ಕನ್ನಡಪ್ರಭ’ ಹಾಗೂ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಯುಗಾದಿ ಸಂಭ್ರಮದ ‘ಯುಗಾದಿ ಪುರಸ್ಕಾರ’ಕ್ಕೆ ಭಾಜನ
ಬೆಂಗಳೂರು (ಮಾ.30): ಗಾನ ಗಾರುಡಿಗ ಪಂಡಿತ್ ಎಂ. ವೆಂಕಟೇಶ್ ಕುಮಾರ್, ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ್, ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಚಿತ್ರಕಲಾವಿದ ಪ.ಸ.ಕುಮಾರ್ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು 2025ನೇ ಸಾಲಿನ ‘ಕನ್ನಡಪ್ರಭ’ ಹಾಗೂ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಯುಗಾದಿ ಸಂಭ್ರಮದ ‘ಯುಗಾದಿ ಪುರಸ್ಕಾರ’ಕ್ಕೆ ಭಾಜನರಾದರು.
‘ಗುಬ್ಬಿಗೂಡು’ ಪ್ರಾಯೋಜಿತ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ‘ಯುಗಾದಿ ಸಂಭ್ರಮ’ ಕಾರ್ಯಕ್ರಮದಲ್ಲಿ ಈ ಸಾಧಕರಿಗೆ ಖ್ಯಾತ ನಿರ್ದೇಶಕರಾದ ಟಿ.ಎನ್. ಸೀತಾರಾಮ್, ಬಿ.ಎಸ್.ಲಿಂಗದೇವರು, ಪ್ರಧಾನ ಸಂಪಾದಕ ರವಿ ಹೆಗಡೆ, ಗುಬ್ಬಿಗೂಡು ಸಂಸ್ಥೆಯ ಮಾಲೀಕ ಮಹೇಶ್ ಹಾಗೂ ಪುರವಣಿ ಸಂಪಾದಕ ಜೋಗಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹ 25,000 ಮೊತ್ತ, ಸ್ಮರಣಿಕೆ, ಪ್ರಮಾಣಪತ್ರ ಒಳಗೊಂಡಿದೆ.
ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ‘ಎಷ್ಟೋ ಬಾರಿ ನಾವು ಯಾರಿಗಾಗಿ, ಯಾಕಾಗಿ ಸಿನಿಮಾ ಮಾಡುತ್ತೇವೆ ಎಂಬ ಅನುಮಾನಗಳು ಮೂಡುತ್ತವೆ. ನಮ್ಮ ಸಿನಿಮಾಗಳು ಎಷ್ಟೋ ಬಾರಿ ದೊಡ್ಡದಾಗಿ ರಿಲೀಸ್ ಆಗಲ್ಲ, ಹಲವು ಮಂದಿ ನೋಡಲ್ಲ. ಆದರೆ, ಇಂತಹ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿ ಪುರಸ್ಕಾರ ನೀಡಿ ಸನ್ಮಾನಿಸಿದಾಗ, ಬೆನ್ನು ತಟ್ಟಿದಾಗ ಸ್ಫೂರ್ತಿ ಮೂಡುತ್ತದೆ, ಜವಾಬ್ದಾರಿ ಹೆಚ್ಚಾಗುತ್ತದೆ. ಅದಕ್ಕಾಗಿ ‘ಕನ್ನಡಪ್ರಭ’ದ ಕಾರ್ಯ ಶ್ಲಾಘನೀಯ’ ಎಂದರು. ಪಂಡಿತ್ ಎಂ. ವೆಂಕಟೇಶ್ ಕುಮಾರ್, ‘ಪ್ರಾಮಾಣಿಕ ಮನುಷ್ಯ ಏನನ್ನೂ ಬಯಸದೆ ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತ ಹೊರಡುತ್ತಾನೆ.
ಸನ್ಮಾನ, ಸತ್ಕಾರ ಆಗಬೇಕು, ಪ್ರಶಸ್ತಿ ಸಿಗಬೇಕು ಎಂದು ಆಸೆ ಪಡಲ್ಲ. ಹಾಗೆ ಆಸೆ ಪಟ್ಟರೆ ಆತನ ಕೆಲಸ ಸರಿಯಾಗಿ ಆಗುವುದಿಲ್ಲ. ಸಿದ್ಧಿ ಇದ್ದರೆ ಪ್ರಸಿದ್ಧಿ ತಾನಾಗಿಯೇ ಬರುತ್ತದೆ. ಪ್ರಾಮಾಣಿಕತನಕ್ಕೆ ಯಾವಾಗಲೂ ಕಿಮ್ಮತ್ತು ಇರುತ್ತದೆ. ‘ಕನ್ನಡಪ್ರಭ’, ‘ಏಷ್ಯಾನೆಟ್ ಸುವರ್ಣನ್ಯೂಸ್’ನ ಈ ಪ್ರಶಸ್ತಿ ಪ್ರದಾನ ಕಾರ್ಯ ಮುಂದಿನ ಪೀಳಿಗೆಗೆ ಸ್ಫೂರ್ತಿ ಅಗಲಿದೆ’ ಎಂದು ಹೇಳಿದರು. ಕವಿ ಬಿ.ಆರ್.ಲಕ್ಷ್ಮಣರಾವ್, ‘ನಮ್ಮ ಪಾಡಿಗೆ ನಾವು ಸಾಹಿತ್ಯ ರಚಿಸಿಕೊಂಡು ಬಂದವರು. ನಾವು ಬರೆದ ಕವನಗಳು ನಮ್ಮ ಜೀವನದ ಸಹ ಉತ್ಪನ್ನಗಳಿದ್ದಂತೆ. ಇದನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ದೊಡ್ಡ ವಿಚಾರ. ಪ್ರಶಸ್ತಿಯನ್ನು ನಾವು ಯಾರ ಜೊತೆ ತೆಗೆದುಕೊಳ್ಳುತ್ತಿದ್ದೇವೆ ಎಂಬುದು ಮುಖ್ಯ. ಹಿರಿಯ ಸಾಧಕರ ಜೊತೆ ವೇದಿಕೆ ಹಂಚಿಕೊಂಡು ಈ ಪುರಸ್ಕಾರ ಪಡೆದಿರುವುದು ಸಂತೋಷ ತಂದಿದೆ’ ಎಂದರು.
ಹಿರಿಯ ಚಿತ್ರಕಲಾವಿದ ಪ.ಸ.ಕುಮಾರ್, ‘ನಮ್ಮ ಕ್ಷೇತ್ರದ ಕೆಲಸವನ್ನು ನಾವು ಸರಿಯಾಗಿ ಮಾಡಬೇಕು. ಹತ್ತು ಅಡಿ ಕಂದಕವನ್ನು ನಾವು ದಾಟಬೇಕಾದರೆ ನಾವು ಅದಕ್ಕಿಂತ ಹೆಚ್ಚಿನ ಶಕ್ತಿಯನ್ನು ಸಂಪಾದಿಸಿರಬೇಕು. ಹತ್ತು ಅಡಿಗೆ ಒಂದು ಇಂಚು ಕಡಿಮೆ ಹಾರಿದರೂ ನಾವು ಕಂದಕಕ್ಕೆ ಬೀಳುತ್ತೇವೆ ಎಂಬ ‘ಕನ್ನಡಪ್ರಭ’ದ ವೈಎನ್ಕೆ ಮಾತು ಜೀವನದಲ್ಲಿ ಹೆಚ್ಚು ಪರಿಣಾಮ ಬೀರಿತು. ವೃತ್ತಿಯ ಗೆಳೆಯರಿಂದ ಸಾಕಷ್ಟು ಕಲಿತಿದ್ದೇವೆ. ಇವೆಲ್ಲ ನಮ್ಮ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದರು. ನಟಿ ಅಕ್ಷತಾ ಪಾಂಡವಪುರ ಮಾತನಾಡಿ, ‘ಇದು ನನ್ನ ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಸಿಗುತ್ತಿರುವ ಮೊದಲ ಪ್ರಶಸ್ತಿ ಇದಾಗಿದೆ. ಪ್ರಶಸ್ತಿ ಎಷ್ಟು ತೂಕ ಇದೆಯೋ ಅದಕ್ಕಿಂತ ಹೆಚ್ಚಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.
ಶ್ರೋತೃಗಳ ಗಮನ ಸೆಳೆದ ಗಾಯನ: ಯುಗಾದಿ ಪುರಸ್ಕಾರ ಸ್ವೀಕರಿಸಿದ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಅವರು ಶ್ರೋತೃಗಳ ಬಯಕೆಯಂತೆ, ‘ತೊರೆದು ಜೀವಿಸಬಹುದೇ..’ ಹಾಡು ಹಾಗೂ ‘ಪ್ರಣತಿಯಿದೆ, ಬತ್ತಿಯಿದೆ..’ ಎಂಬ ವಚನ ಹಾಡಿದರು. ಅವರ ಗಾಯನ ಪ್ರೇಕ್ಷಕರ ಮನಸೂರೆಗೊಳಿಸಿತು. ಪುಟ್ಟರಾಜ ಗವಾಯಿಗಳು ‘ಸಂಗೀತವನ್ನು ಸುಮ್ಮನೆ ಕಲಿಯಿರಿ, ಅಧ್ಯಯನ ಮಾಡಿ ಸತ್ಕಾರ ಅರಸಬೇಡಿ. ಸಿದ್ಧಿ ಮಾಡಿಕೊಳ್ಳಿ, ಪ್ರಸಿದ್ಧಿ ಆಮೇಲೆ ಬರುತ್ತದೆ’ ಎನ್ನುತ್ತಿದ್ದರು ಎಂದು ಸ್ಮರಿಸಿದರು. [5:52 am, 30/3/2025] Sujata: ಥ್ಯಾಂಕ್ಯೂ [5:52 am, 30/3/2025] Sujata: ಫೋಟೊ ಇದ್ಯಾ [5:53 am, 30/3/2025] Govindaraj Shetty 🔥: ಸಿನಿಮಾಗಳನ್ನು ಮಾರ್ಕೆಟಿಂಗ್ ಮಾಡಬೇಕು - ಕನ್ನಡದಲ್ಲಿನ ಅತ್ಯುತ್ತಮ ಸಿನಿಮಾಗಳನ್ನು ಪ್ರೇಕ್ಷಕರ ಮುಂದಿಡಬೇಕು । ಯುಗಾದಿ ಸಂಭ್ರಮದಲ್ಲಿ ಸಿನಿಮಾ ಸಂವಾದ ಬೆಂಗಳೂರು
‘ಕನ್ನಡದಲ್ಲಿನ ಅತ್ಯುತ್ತಮ ಸಿನಿಮಾಗಳನ್ನು ಪ್ರೇಕ್ಷಕರ ಮುಂದಿಡಬೇಕಿದೆ. ಸಿನಿಮಾ ಮಾಡುವ ಜತೆಗೆ ಮಾರ್ಕೆಟಿಂಗ್ ಮಾಡುವತ್ತ, ಸಿನಿಮಾ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಮೂಲಸೌಲಭ್ಯ ಬೆಳೆಸುವತ್ತ ಲಕ್ಷ್ಯವಹಿಸುವುದು ಅಗತ್ಯ. ಸಿನಿಮಾ ನಿರ್ಮಾತೃಗಳು-ಪ್ರೇಕ್ಷಕರ ನಡುವಿನ ಕಂದಕ ನಿವಾರಿಸಬೇಕು.’
ಇದು ‘ಗುಬ್ಬಿಗೂಡು’ ಸಹಭಾಗಿತ್ವದಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ‘ಯುಗಾದಿ ಸಂಭ್ರಮ’ದ ‘ಮಾತುಕತೆ; ನಾನು ನನ್ನ ಸಿನಿಮಾ’ ಸಂವಾದದ ಹೂರಣ.
ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ‘ಕನ್ನಡದಲ್ಲಿ ಒಳ್ಳೆಯ ಸಿನಿಮಾ ಆಗುತ್ತಿಲ್ಲ ಎಂಬ ವಾದವನ್ನು ಸಂಪೂರ್ಣವಾಗಿ ಒಪ್ಪಲಾಗಲ್ಲ. ಮೊದಲಿನಿಂದಲೂ ಕನ್ನಡದಲ್ಲಿ ಅತ್ಯುತ್ತಮ ಸಿನಿಮಾಗಳು ಆಗುತ್ತಿವೆ. ಜಾಗತಿಕ ಮಟ್ಟದ ಸಿನಿಮಾ ಉತ್ಸವಗಳಲ್ಲಿ ನಮ್ಮ ಸಿನಿಮಾಗಳು ಸದ್ದು ಮಾಡಿವೆ. ಆದರೆ, ಅದನ್ನು ಜನರೆದುರು ಸಮರ್ಪಕವಾಗಿ ಇಡುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು’ ಎಂದರು.
‘ಕೇರಳ ಸರ್ಕಾರ ಸಿನಿಮಾವನ್ನು ತೋರಿಸಲೇಬೇಕು ಎಂಬಂತಹ ಆದೇಶ ಹೊರಡಿಸುತ್ತೆ. ಮಿನಿ ಥಿಯೇಟರ್, ಓಟಿಟಿ ರೂಪಿಸುವಂತಹ ಕೆಲಸ ಮಾಡಿದೆ. ಸಿನಿಮಾ ಕುರಿತ ಶಿಕ್ಷಣ ಸಿಗುತ್ತದೆ. ನಮ್ಮಲ್ಲಿ ಬೆಂಗಳೂರನ್ನು ದಾಟಿ ಸಿನಿಮಾ ಹೋಗುವುದು ಕಷ್ಟವಾಗಿದೆ. ಉತ್ತಮ ಸಿನಿಮಾಗಳನ್ನು ಜನರೆದುರು ಇಡುವ ಅವಕಾಶವನ್ನು ಸೃಷ್ಟಿಸಬೇಕು. ಇದಕ್ಕೆ ಕನ್ನಡ ಸಿನಿಮಾ ಉದ್ಯಮ, ಸರ್ಕಾರ, ಮಾಧ್ಯಮ ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದರು.
‘ಇನ್ನು, ಸಿನಿಮಾ ಸಾಹಿತ್ಯವನ್ನೇ ಆಧರಿಸಬೇಕಾಗಿಲ್ಲ. ಸಿನಿಮಾ ಒಂದು ಸಂಕೀರ್ಣ ಕಲೆ. ಅದನ್ನು ಸಾಹಿತ್ಯದ ವಿಸ್ತರಿತ ಭಾಗವಾಗಿ ನೋಡುವುದು ತಪ್ಪು. ಸಿನಿಮಾ ಒಂದು ಸ್ವತಂತ್ರ ಕಲಾಭಾಷೆ. ನಾವು ಆರಿಸಿಕೊಂಡ ಕತೆ ಈಗಿನ ಆಗುಹೋಗಿಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ನೋಡಬೇಕು ಹಾಗೂ ಒಂದು ವ್ಯಕ್ತಿಯ ಮೂಲಕ ನಾವು ತೋರಿಸುವ ಕತೆ ಸಾರ್ವತ್ರಿಕ, ಸಾರ್ವಕಾಲಿಕ ಆಗಬೇಕು’ ಎಂದರು.
ಬಿ.ಎಸ್. ಲಿಂಗದೇವರು ಮಾತನಾಡಿ, ‘ಒಬ್ಬ ನಿರ್ದೇಶಕನಿಗೆ ಪ್ರತಿಕ್ಷಣವೂ ಕಿವಿ ಕಣ್ಣು ಎಚ್ಚರವಾಗಿರಬೇಕು. ಇವತ್ತಿನ ಸಿನಿಮಾದ ಸ್ಥಿತಿಗತಿ ನಮ್ಮನ್ನು ಅಲುಗಾಡಿಸುತ್ತಿದೆ. ಇವತ್ತು ಕೂಡ ನಾವು ಪಥೇರ್ ಪಾಂಚಾಲಿ, ಘಟಶ್ರಾದ್ಧ ಕುರಿತೇ ಮಾತನಾಡಬೇಕಿದೆ. ಪ್ರಸ್ತುತ ಮೌಢ್ಯವನ್ನು ಬಿತ್ತುವ, ಹಿಂಸೆಯನ್ನು ವೈಭವೀಕರಿಸುವ ಸಿನಿಮಾಗಳು ಹಣ ಮಾಡುತ್ತಿವೆ. ಈಗಿನ ಮೂರು ದಿನಗಳ ಸಿನಿಮಾ ಕ್ಲಾಸಿಕ್ ಸಿನಿಮಾವನ್ನು ಕೊಂದು ಹಾಕುತ್ತಿವೆ. ಸಿನಿಮಾ ಸಂಸ್ಕೃತಿ ಬೆಳೆಯಬೇಕು ಎಂದರೆ ಅದಕ್ಕೆ ತಕ್ಕ ಮಾರ್ಕೆಟಿಂಗ್ ಅನ್ನು ಕೂಡ ನಾವು ಕಟ್ಟಿಕೊಂಡು ಹೋಗಬೇಕಾಗುತ್ತದೆ’ ಎಂದು ಹೇಳಿದರು.
ಗೋಪಾಲಕೃಷ್ಣ ಪೈ. ಮಾತನಾಡಿ, ‘ಓದು ಖಂಡಿತ ಸಿನಿಮಾಕ್ಕೆ ನೆರವಾಗುತ್ತದೆ. ಏನನ್ನೂ ಓದದೆ ಕೇವಲ ಅನುಭವವನ್ನು ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾ ಮಾಡುವ ಇಚ್ಛೆಯುಳ್ಳವರು ಸಿನಿಮಾಕ್ಕೆ ಸಂಬಂಧಿಸಿದ ಪುಸ್ತಕಗಳನ್ನೇ ಓದಬೇಕು. ಬೇರೆಡೆ ಹೋಲಿಸಿದಾಗ ಕನ್ನಡದಲ್ಲಿ ಸಿನಿಮಾ ಸಂಸ್ಕೃತಿ ಇನ್ನೂ ಬೆಳೆದಿಲ್ಲ. ಸಿನಿಮಾ ಕುರಿತಂತೆ ಜನರ ತಿಳಿವಳಿಕೆ ಹೆಚ್ಚಬೇಕಾಗಿದೆ. ನಾವಿನ್ನೂ 70ರ ದಶಕದ ಮಟ್ಟದಲ್ಲಿ ಕತೆಗಳನ್ನು ಈಗ ಹೇಳಿಕೊಂಡು ಹೋಗುವುದು ಸಮರ್ಪಕವೇ’ ಎಂದು ಪ್ರಶ್ನಿಸಿದರು.
ಸಂವಾದ ನಡೆಸಿಕೊಟ್ಟ ನಟಿ ರಂಜನಿ ರಾಘವನ್ ಮಾತನಾಡಿ, ‘ಕನ್ನಡ ಭಾಷೆಯ ಸಿನಿಮಾಗಳನ್ನು ನಾವು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅನ್ನಿಸುವುದು ಶೋಚನೀಯ ವಿಚಾರ. ಪ್ರೇಕ್ಷಕ ಆರ್ಥಿಕವಾಗಿ ಅನುಕೂಲಸ್ಥನಾಗುತ್ತಿದ್ದಂತೆ ಹಾಗೂ ಒಟಿಟಿಯಂತ ವೇದಿಕೆಗೆ ಬಂದಾಗ ಭಾಷಾ ಆಯ್ಕೆ ಹೆಚ್ಚಾಗಿ ಲಭ್ಯವಾಗಿ ಅವರು ಬೇರೆ ಭಾಷೆಗಳತ್ತ ಹೋಗಿದ್ದಾರೆ. ಆ ದೊಡ್ಡ ವರ್ಗದ ಪ್ರೇಕ್ಷಕರನ್ನು ಕನ್ನಡ ಸಿನಿಮಾ ಕಳೆದುಕೊಂಡಿದೆ. ಹೊಸ ಸಿನಿಮಾ ನಿರ್ಮಾತೃರಿಗೆ ಪ್ರೇಕ್ಷಕರನ್ನು ಅರ್ಥಮಾಡಿಕೊಂಡು ಮುನ್ನಡೆಯುವುದು ಸವಾಲಾಗಿದೆ’ ಎಂದರು.