ಸಾರಾಂಶ
ಕದನ ವಿರಾಮವೇ ಆಗಬಾರದಿತ್ತು
ಪಾಕಿಸ್ತಾನವನ್ನು 4 ರಾಷ್ಟ್ರವಾಗಿ ಚಿಂದಿ ಚಿಂದಿ ಮಾಡಬೇಕಿತ್ತು । ಇದು ಅಲ್ಪವಿರಾಮವಾಗಲಿ
ವಿಂಗ್ ಕಮಾಂಡರ್ ಸುದರ್ಶನ್
ಸದ್ಯ ಕದನ ವಿರಾಮ ಘೋಷಣೆಯಾಗಿದೆ. ಆದರೆ ಈ ಕಾರ್ಯಾಚರಣೆಯ ಆಶಯ ಈಡೇರಿತೇ ಎಂಬ ಪ್ರಶ್ನೆ ಬರುತ್ತೆ.
ಸಾಮಾನ್ಯವಾಗಿ ಯುದ್ಧ ನಡೆಯುವುದು ಸಂಪತ್ತಿನ ಕೊಳ್ಳೆಗಾಗಿ ಅಥವಾ ಭೂಮಿಗಾಗಿ. ಪಾಕಿಸ್ತಾನದಂಥ ಭಿಕಾರಿ ದೇಶದಲ್ಲಿ ಏನು ಸಂಪತ್ತಿದೆ ಎಂದು ನಾವು ದೋಚಲಿಕ್ಕೆ ಹೋಗಬೇಕು. ಇನ್ನೊಂದು ಭೂಮಿ, ಆ ದೇಶದ ಭೂಮಿಯ ಬಗ್ಗೆ ನಮಗೆ ಆಸಕ್ತಿ ಇಲ್ಲ. ಆದರೆ ನಮಗೆ ನಮ್ಮ ಕಾಶ್ಮೀರ ಬೇಕು, ಶಾಂತಿಯುತ ಬಾಳ್ವೆ ಬೇಕು. ಅಷ್ಟಕ್ಕೂ ಪಹಲ್ಗಾಮ್ನಲ್ಲಿ ನಡೆದದ್ದು ಭಯೋತ್ಪಾದನೆ ಅಲ್ಲ, ಅದು ವ್ಯವಸ್ಥಿತ ಹಿಂದೂ ನರಮೇಧ. ಈ ಹಿಂದಿನ ಮುಂಬೈ ದಾಳಿಯನ್ನಾದರೆ ಭಯೋತ್ಪಾದನೆ ಎನ್ನಬಹುದು. ಆದರೆ ಇಲ್ಲಾದದ್ದು ಪಾಕಿಸ್ತಾನ ಸೈನ್ಯದ ವ್ಯವಸ್ಥಿತ ಕಾರ್ಯಾಚರಣೆ. ಅವರು ಧರ್ಮವನ್ನು ಕೇಳಿ ಹಿಂದೂಗಳನ್ನು ಹೊಡೆದುಹಾಕಿದರು. ನಮ್ಮ ಸ್ತ್ರೀಯರ ಸಿಂದೂರವನ್ನು ಅಳಿಸಿದರು. ಅದನ್ನೇ ಸಾಂಕೇತಿಕವಾಗಿಟ್ಟುಕೊಂಡು ನಮ್ಮವರು ಕಾರ್ಯಾಚರಣೆಗಿಳಿದರು. ಕಣ್ಣೆದುರೇ ಗಂಡ, ತಂದೆ, ಕುಟುಂಬವನ್ನು ಕಳೆದುಕೊಂಡವರಿಗೆ, ನಾವು ನಿಮ್ಮೊಂದಿಗಿದ್ದೇವೆ, ನಿಮಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಮಾಡಿದ ಕಾರ್ಯಾಚರಣೆ ಇದಾಗಿತ್ತು. ಈ ವೇಳೆ ಪಾಕಿಸ್ತಾನದವರು ಎಂದಿನಂತೆ ಎರಡು ಕಾರ್ಡ್ ಬಳಸಿದರು. ಒಂದು ನಮ್ಮಲ್ಲಿ ನ್ಯೂಕ್ಲಿಯರ್ ವೆಪನ್ಸ್ ಇವೆ ಎಂಬ ಬೆದರಿಕೆಯ ಕಾರ್ಡ್. ಇನ್ನೊಂದು ಇದರಲ್ಲಿ ನಮ್ಮನ್ನು ಬಲಿಪಶು ಮಾಡಲಾಗಿದೆ ಎಂಬ ಮೊಸಳೆ ಕಣ್ಣೀರಿನ ಕಾರ್ಡ್.
ಈಗ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಕದನ ವಿರಾಮ ಘೋಷಿಸಲಾಗಿದೆ. ಹಾಗಿದ್ದರೆ ಇಷ್ಟೆಲ್ಲ ಖರ್ಚು, ಸೈನಿಕರ ಬಲಿದಾನಕ್ಕೆ ಏನರ್ಥ? ಈ ಯುದ್ಧ ನಡೆದಿರುವುದು ಭಯೋತ್ಪಾದಕರ ನಿರ್ಮೂಲನೆಗೆ ಮಾತ್ರವಲ್ಲ, ಭಯೋತ್ಪಾದನೆಯ ಮೂಲೋತ್ಪಾಟನೆಗೆ. ಅವರು ರಕ್ತಬೀಜಾಸುರರಂಥವರು. ಕೊಂಚ ಸಮಯ ಸುಮ್ಮನಿರಬಹುದು, ಆದರೆ ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇರುತ್ತಾರೆ.
ನಮಗೆ ಇನ್ನೂ 40 -50 ವರ್ಷ ಶಾಂತಿ ಬೇಕು ಅಂದರೆ ಈಗ ಪಾಕಿಸ್ತಾನವನ್ನು ಸಿಂಧ್, ಬಲೂಚಿಸ್ಥಾನ್ ಮೊದಲಾದ ಪ್ರತ್ಯೇಕ ರಾಷ್ಟ್ರಗಳಾಗಿ 4 ಭಾಗ ಮಾಡಬೇಕಿತ್ತು. ಚಿಂದಿ ಚಿಂದಿ ಮಾಡಿಹಾಕಬೇಕಿತ್ತು. ಇಲ್ಲವೇ ಅಂಥದ್ದೊಂದು ಪ್ರಕ್ರಿಯೆಗೆ ಚಾಲನೆಯನ್ನಾದರೂ ನೀಡಬಹುದಿತ್ತು. ವಿಶ್ವವೇ ನಾಯಕನೆಂದು ಒಪ್ಪಿಕೊಂಡ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವವನ್ನು ನಾವು ಈ ವೇಳೆಯಲ್ಲಿ ಸದ್ಬಳಕೆ ಮಾಡಬೇಕಿತ್ತು. ಸಂಧಾನ ಆಗಬಾರದಿತ್ತು ಎಂದು ನನ್ನ ಭಾವನೆ. ಇರಲಿ, ಇದನ್ನು ಅಲ್ಪ ವಿರಾಮ ಎಂದು ಭಾವಿಸೋಣ.