ಸಾರಾಂಶ
ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶ, ಪ್ರತಿಭಟನೆಗೆ ಮಣಿದಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು ನಮ್ಮ ಮೆಟ್ರೋದಲ್ಲಿ ‘ಟ್ರೈನ್ ಆಪರೇಟರ್’ ಹುದ್ದೆಗೆ ಆಹ್ವಾನಿಸಿದ್ದ ಅಧಿಸೂಚನೆಯನ್ನು ಸೋಮವಾರ ರಾತ್ರಿ ವಾಪಸ್ ಪಡೆದಿದೆ.
ಬೆಂಗಳೂರು : ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶ, ಪ್ರತಿಭಟನೆಗೆ ಮಣಿದಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು ನಮ್ಮ ಮೆಟ್ರೋದಲ್ಲಿ ‘ಟ್ರೈನ್ ಆಪರೇಟರ್’ ಹುದ್ದೆಗೆ ಆಹ್ವಾನಿಸಿದ್ದ ಅಧಿಸೂಚನೆಯನ್ನು ಸೋಮವಾರ ರಾತ್ರಿ ವಾಪಸ್ ಪಡೆದಿದೆ.
ಎಲ್ಲಕ್ಕಿಂತ ಮೊದಲು ಮಾ.16ರಂದು ‘ಕನ್ನಡಪ್ರಭ’ ‘ಮೆಟ್ರೋ ಹುದ್ದೆಯಲ್ಲಿ ಅನ್ಯಭಾಷಿಕರಿಗೆ ಪ್ರಾಶಸ್ತ್ಯ?’ ಶೀರ್ಷಿಕೆಯಡಿ ಮೆಟ್ರೋದ ನಿಬಂಧನೆಯಿಂದ ಕನ್ನಡಿಗರಿಗೆ ಆಗುವ ಅನ್ಯಾಯದ ಕುರಿತು ವರದಿ ಪ್ರಕಟಿಸಿತ್ತು.
ಪರಿಣಾಮ ಕರವೇ ಸೇರಿ ಸಾಕಷ್ಟು ಸಂಘಟನೆಗಳು ನಿಗಮದ ಧೋರಣೆ ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದವು. ಸೋಮವಾರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಿಎಂಆರ್ಸಿಎಲ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಈ ಸಂಬಂಧ ಕ್ರಮ ವಹಿಸುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ನಿಗಮವು ಅಧಿಸೂಚನೆ ಹಿಂಪಡೆದಿರುವುದಾಗಿ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.