ಸಾರಾಂಶ
ಬೆಂಗಳೂರು : ಯುದ್ಧ ಮತ್ತು ಹಿಂಸೆಯಿಂದ ನರಳುತ್ತಿರುವ ಜಗತ್ತಿಗೆ ಇಂದು ಭಗವಾನ್ ಮಹಾವೀರರ ಶಾಂತಿಯ ಸಂದೇಶ ಅತ್ಯಂತ ಅವಶ್ಯಕವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪ್ರತಿಪಾದಿಸಿದರು.
ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀ ಮಹಾವೀರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಹಲವೆಡೆ ಇಂದು ಹಿಂಸೆಯ ವಾತಾವರಣವಿದೆ. ಯುದ್ಧಗಳೂ ನಡೆಯುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಭಗವಾನ್ ಮಹಾವೀರರು ಅನುಸರಿಸಿದ ಅಹಿಂಸಾ ಮಾರ್ಗ ಅನುಸರಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನರಸಿಂಹರಾಜ ಪುರದ ಸಿಂಹನಗದ್ದೆ ಜೈನಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ, ಪತ್ರಕರ್ತ ಪದ್ಮರಾಜ ದಂಡಾವತಿ, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಉಪಸ್ಥಿತರಿದ್ದರು.
ಜೈನರ ಕುರಿತು ತಪ್ಪು ತಿಳುವಳಿಕೆ: ಸುಧಾಕರ್
ಜೈನ ಸಮುದಾಯದವರು ಎಂದರೆ ಬಿಜೆಪಿಗೆ ಮತ ನೀಡುತ್ತಾರೆ ಎಂದು ಕೆಲ ಕಾಂಗ್ರೆಸ್ ಮುಖಂಡರು ತಿಳಿದುಕೊಂಡಿದ್ದಾರೆ. ಇದನ್ನು ತೊಡೆದುಹಾಕಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ತಿಳಿಸಿದರು. ಜೈನ ಸಮುದಾಯ ಬಿಜೆಪಿ ಬೆಂಬಲಿಸುತ್ತದೆ ಎಂಬ ಮನೋಭಾವ ಹೋಗಬೇಕು. ನಾಡಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಅವರು ಜೈನ ಸಮುದಾಯಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ.
ಜೈನ ಧರ್ಮದಲ್ಲಿ ಜನಿಸುವುದೇ ಒಂದು ಪುಣ್ಯವಾಗಿದೆ. ಜೈನ ಸಮುದಾಯದ ಅಭಿವೃದ್ಧಿಗೆ ಬಜೆಟ್ನಲ್ಲಿ ₹100 ಕೋಟಿ ಮೀಸಲಿಡಲಾಗಿದೆ. ಮುಂಬರುವ ಬಜೆಟ್ ಮಂಡನೆಯೊಳಗೆ ಜೈನ ನಿಗಮ ಸ್ಥಾಪನೆಯಾಗಲಿದೆ ಎಂದು ಭರವಸೆ ನೀಡಿದರು.