ನವದೆಹಲಿ: ಇಂಡಿಯನ್ ಸೂಪರ್‌ ಲೀಗ್ ಬಿಕ್ಕಟ್ಟಿನ ವಿಚಾರವನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತರಬೇಕು ಹಾಗೂ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್‌(ಎಐ್‌ಎಫ್‌ಎಫ್‌)ಗೆ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನ 11 ಕ್ಲಬ್‌ಗಳು ಮನವಿ ಮಾಡಿವೆ.

ಎಐಎಫ್‌ಎಫ್‌ ಹಾಗೂ ಐಎಸ್‌ಎಲ್‌ ಆಯೋಜಕರಾದ ಎಫ್‌ಸಿಡಿಲ್‌ ನಡುವಿನ ಬಿಕ್ಕಟ್ಟಿನಿಂದಾಗಿ ಈ ಬಾರಿ ಐಎಸ್‌ಎಲ್‌ ಟೂರ್ನಿ ಅತಂತ್ರವಾಗಿದೆ. ಈ ಬಗ್ಗೆ ಪತ್ರ ಬರೆದಿರುವ ಐಎಸ್‌ಎಲ್‌ ಕ್ಲಬ್‌ಗಳು, ‘ಎಐಎಫ್‌ಎಫ್‌ ನಮ್ಮ ಕೋರಿಕೆಯ ರೀತಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ, ಕಾನೂನಿನ ಮೊರೆ ಹೋಗುವುದು ಬಿಟ್ಟು ಬೇರೆ ಆಯ್ಕೆಯಿಲ್ಲ. ಸದ್ಯದ ಬಿಕ್ಕಟ್ಟಿನ ಬಗ್ಗೆ ಗೌರವಾನ್ವಿತ ಕೋರ್ಟ್‌ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದಿವೆ.

ಒಟ್ಟು 13 ಐಎಸ್‌ಎಲ್ ಕ್ಲಬ್‌ಗಳ ಪೈಕಿ ಮೋಹನ್‌ ಬಗಾನ್ ಸೂಪರ್‌ ಜೈಂಟ್ಸ್‌ ಮತ್ತು ಈಸ್ಟ್‌ ಬೆಂಗಾಲ್ ಫುಟ್ಬಾಲ್ ಕ್ಲಬ್ ಹೊರತುಪಡಿಸಿ ಉಳಿದ 11 ತಂಡಗಳು ಪತ್ರಕ್ಕೆ ಸಹಿ ಹಾಕಿವೆ.