ಮಹಾರಾಜ ಟ್ರೋಫಿ ಟಿ20: ಇಂದು ಆಟಗಾರರ ಬಹುನಿರೀಕ್ಷಿತ ಹರಾಜು

| Published : Jul 25 2024, 01:16 AM IST

ಸಾರಾಂಶ

ಅದೃಷ್ಟ ಪರೀಕ್ಷೆಗಿಳಿದ ರಾಜ್ಯದ 240 ಆಟಗಾರರು. ಯುವ ಪ್ರತಿಭೆಗಳ ಖರೀದಿಗೆ 6 ತಂಡ ಸಜ್ಜು. ಮಯಾಂಕ್‌, ಮನೀಶ್‌, ಪಡಿಕ್ಕಲ್‌ ಸೇರಿ ಸ್ಟಾರ್‌ಗಳನ್ನು ರೀಟೈನ್‌ ಮಾಡಿಕೊಂಡಿರುವ ತಂಡಗಳು

ಕನ್ನಡಪ್ರಭ ವಾರ್ತೆ ಬೆಂಗಳೂರುಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ನಡೆಯಲಿದೆ. ಕರ್ನಾಟಕದ ಯುವ, ಪ್ರತಿಭಾವಂತ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ಬಂಪರ್‌ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.ಟೂರ್ನಿಯಲ್ಲಿ ಕಣದಲ್ಲಿರುವ 6 ತಂಡಗಳು ಈಗಾಗಲೇ ತಲಾ ನಾಲ್ವರು ಆಟಗಾರರನ್ನು ರೀಟೈನ್‌ ಮಾಡಿಕೊಂಡಿವೆ. ಮಯಾಂಕ್‌ ಅಗರ್‌ವಾಲ್‌(ಬೆಂಗಳೂರು ಬ್ಲಾಸ್ಟರ್ಸ್‌), ದೇವದತ್‌ ಪಡಿಕ್ಕಲ್‌(ಗುಲ್ಬರ್ಗಾ ಮಿಸ್ಟಿಕ್ಸ್‌), ಮನೀಶ್‌ ಪಾಂಡೆ(ಹುಬ್ಬಳ್ಳಿ ಟೈಗರ್ಸ್‌), ಕರುಣ್‌ ನಾಯರ್‌(ಮೈಸೂರು ವಾರಿಯರ್ಸ್‌) ಸೇರಿ ಪ್ರಮುಖರನ್ನು ತಂಡಗಳು ತಮ್ಮಲ್ಲೇ ಉಳಿಸಿಕೊಂಡಿವೆ. 240 ಮಂದಿ: ಆಟಗಾರರ ಹರಾಜಿಗೆ 1400ಕ್ಕೂ ಹೆಚ್ಚು ಆಟಗಾರರು ಹೆಸರು ನೋಂದಾಯಿಸಿದ್ದರು. ಅಂತಿಮವಾಗಿ 240 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ತಂಡಗಳು ಕನಿಷ್ಠ 16, ಗರಿಷ್ಠ 20 ಆಟಗಾರರನ್ನು ಖರೀದಿಸಬಹುದಾಗಿದೆ.ಹರಾಜು ಪಟ್ಟಿಯನ್ನು 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ಪರ ಹಾಗೂ ಐಪಿಎಲ್‌ನಲ್ಲಿ ಆಡಿದ ಆಟಗಾರರು ‘ಎ’ ವಿಭಾಗದಲ್ಲಿದ್ದು, ರಣಜಿ, ವಿಜಯ್‌ ಹಜಾರೆ, ಸೈಯದ್‌ ಮುಷ್ತಾಕ್‌ ಅಲಿ ಟೂರ್ನಿಗಳಲ್ಲಿ ಆಡಿರುವ ಆಟಗಾರರು ‘ಬಿ’, ಬಿಸಿಸಿಐನ ಇತರ ಟೂರ್ನಿಗಳಲ್ಲಿ ಆಡಿದವರು ‘ಸಿ’ ಮತ್ತು ಕೆಎಸ್‌ಸಿಎ ನೋಂದಾಯಿತ ಇತರ ಆಟಗಾರರು ‘ಡಿ’ ಗುಂಪಿನಲ್ಲಿದ್ದಾರೆ. ಈ ಬಾರಿ ಟೂರ್ನಿ ಆ.15ರಿಂದ ಸೆ.1ರ ವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.ಪ್ರಸಿದ್ಧ್‌, ಗೋಪಾಲ್‌, ಗೌತಮ್‌ ಆಕರ್ಷಣೆ

ಹರಾಜಿನಲ್ಲಿ ಪ್ರಸಿದ್ಧ್‌ ಕೃಷ್ಣ, ಶ್ರೇಯಸ್‌ ಗೋಪಾಲ್‌, ಕೃಷ್ಣಪ್ಪ ಗೌತಮ್‌, ಬಿ.ಆರ್‌.ಶರತ್‌, ಕೆ.ಸಿ.ಕಾರ್ಯಪ್ಪ, ಜೆ.ಸುಚಿತ್‌ ಸೇರಿದಂತೆ ತಾರಾ ಆಟಗಾರರಿದ್ದು, ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.ಮಂಗ್ಳೂರು ತಂಡದ ಬಳಿ ಗರಿಷ್ಠ ಮೊತ್ತ

ಪ್ರತಿ ಫ್ರಾಂಚೈಸಿಗೆ ಕಳೆದ ಬಾರಿ ಹರಾಜಿಗೂ ತಲಾ ಗರಿಷ್ಠ 50 ಲಕ್ಷ ರು. ಬಳಸಲು ಅವಕಾಶ ನೀಡಲಾಗಿತ್ತು. ಪ್ರತಿ ತಂಡಗಳು ಈಗಾಗಲೇ ತಲಾ 4 ಆಟಗಾರರನ್ನು ರೀಟೈನ್ ಮಾಡಿಳ್ಳಲು ಸ್ವಲ್ಪ ಹಣ ಬಳಿಸಿಕೊಂಡಿವೆ. ಹೀಗಾಗಿ ಸದ್ಯ ಮಂಗಳೂರು ತಂಡ ಬಳಿ ಗರಿಷ್ಠ ಅಂದರೆ 34.40 ಲಕ್ಷ ರು. ಇದೆ. ಉಳಿದಂತೆ ಬೆಂಗಳೂರು ₹30.95 ಲಕ್ಷ, ಹುಬ್ಬಳ್ಳಿ ₹30 ಲಕ್ಷ, ಮೈಸೂರು ₹29.50 ಲಕ್ಷ, ಶಿವಮೊಗ್ಗ ₹25.90 ಲಕ್ಷ, ಗುಲ್ಬರ್ಗಾ ಬಳಿ ₹23.95 ಲಕ್ಷ ಇದೆ.