ಸಾರಾಂಶ
ನವದೆಹಲಿ: ಭಾರತದ ಯುವ ಕ್ರಿಕೆಟಿಗರು ದೇಸಿ ಕ್ರಿಕೆಟ್ನಲ್ಲಿ ಆಡುವುದನ್ನು ತಪ್ಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿ) ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದು, ದೇಸಿ ಕ್ರಿಕೆಟ್ಗಿಂತ ಐಪಿಎಲ್ಗೆ ಹೆಚ್ಚಿನ ಆದ್ಯತೆ ನೀಡುವುದು ಬೇಡ ಎಂದು ಖಡಕ್ ಸೂಚನೆ ಕೊಟ್ಟಿದೆ.
ತಪ್ಪಿದರೆ ತೀವ್ರ ಪರಿಣಾಮ ಎದುರಿಸಿ ಎಂಬ ಎಚ್ಚರಿಕೆಯನ್ನೂ ನೀಡಿದೆ.ಈ ಬಗ್ಗೆ ಕಳೆದ ವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಹಲವು ಆಟಗಾರರಿಗೆ ಪತ್ರ ಬರೆದಿದ್ದಾರೆ.
ಕೇಂದ್ರೀಯ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರರನ್ನು ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಿದ್ದರೆ ಅವರು ದೇಸಿ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು.
ತಪ್ಪಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.‘ದೇಸಿ ಕ್ರಿಕೆಟ್ಗಿಂತ ಐಪಿಎಲ್ಗೆ ಆದ್ಯತೆ ನೀಡುವ ಪ್ರವೃತ್ತಿ ಆತಂಕಕ್ಕೆ ಕಾರಣವಾಗಿದೆ.
ಹಲವು ಆಟಗಾರರು ಐಪಿಎಲ್ಗಾಗಿ ದೇಸಿ ಕ್ರಿಕೆಟ್ನಿಂದ ದೂರ ಉಳಿಯುತ್ತಿದ್ದಾರೆ.ಇದು ಸರಿಯಲ್ಲ. ದೇಸಿ ಕ್ರಿಕೆಟ್ ಭಾರತೀಯ ಕ್ರಿಕೆಟ್ನ ಬೆನ್ನೆಲುಬು. ಅದು ತನ್ನ ಮೌಲ್ಯ ಕಳೆದುಕೊಳ್ಳಬಾರದು’ ಎಂದು ಹೇಳಿದ್ದಾರೆ.
ದೇಸಿ ಟೂರ್ನಿಗಳ ಪ್ರದರ್ಶನ ರಾಷ್ಟ್ರೀಯ ತಂಡದ ಆಯ್ಕೆಗೆ ನಿರ್ಣಾಯಕ ಮಾನದಂಡವಾಗಿ ಉಳಿದಿದೆ. ಭಾರತೀಯ ಕ್ರಿಕೆಟ್ಗೆ ಸಂಬಂಧಿಸಿದಂತೆ ನಮ್ಮ ಉದ್ದೇಶ ಸ್ಪಷ್ಟ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕಿದ್ದರೆ ದೇಸಿ ಕ್ರಿಕೆಟ್ನಲ್ಲಿ ಆಡಲೇಬೇಕು ಎಂದು ತಾಕೀತು ಮಾಡಿದ್ದಾರೆ.