ಸಾರಾಂಶ
ಬೆಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ ಕ್ಯಾಡ್ರೆ ಲೀಡರ್ಸ್ ಟ್ರೈನಿಂಗ್ ಕ್ಯಾಂಪ್(ನಾಯಕರಿಗೆ ತರಬೇತಿ ಶಿಬಿರ)ಕಾರ್ಯಕ್ರಮವು ರಾಜ್ಯಧ್ಯಕ್ಷ ಸುಫಿಯಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಗುಲಿಸ್ತಾನ್ ಶಾದಿ ಮಹಲ್ ಶಿವಾಜಿನಗರದಲ್ಲಿ ನಡೆಯಿತು.
ಸಯ್ಯದ್ ಮುಹಮ್ಮದ್ ಸಹಲ್ ಅಲ್ ಹೈದ್ರೋಸಿ ತಂಗಳರು ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಿದರು. ಕೇರಳ ರಾಜ್ಯ ಎಸ್ಸೆಸ್ಸೆಫ್ ದಅವಾ ಕಾರ್ಯದರ್ಶಿ ಅನಸ್ ಅಮಾನಿ ಪುಷ್ಪಗಿರಿ ತರಗತಿ ನಡೆಸಿಕೊಟ್ಟರು.ಸಂಘಟನಾ ಕಾರ್ಯಾಚರಣೆಯಲ್ಲಿ ವೈಯಕ್ತಿಕತೆಯನ್ನು ಬಿಟ್ಟು ಅರ್ಪಣಾ ಮನೋಭಾವದೊಂದಿಗೆ ಕಾರ್ಯಾಚರಿಸುವುದರ ಮೂಲಕ ಸಮಾಜದಲ್ಲಿ ಒಳಿತನ್ನು ಪಸರಿಸುವಲ್ಲಿ ನಾವು ಮುಂದಾಳುಗಳಾಗಬೇಕೆಂದು ಸಲಹೆ ನೀಡಿದರು.
ಮೈಸೂರಿನಲ್ಲಿ ನಡೆಯುವ ಕ್ಯಾಂಪಸ್ ವಿದ್ಯಾರ್ಥಿಗಳ ಕ್ಯಾಂಪಸ್ ಕಾನ್ಫೆರನ್ಸ್ನ ಬಗ್ಗೆ ಮಾಹಿತಿ ನೀಡಿ, ಕಾರ್ಯಕ್ರಮದ ಯಶಸ್ವಿಗೆ ಸರ್ವರೂ ಸಹಕರಿಸಬೇಕೆಂದು ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ ಕರೆ ನೀಡಿದರು. ರಾಜ್ಯ ನಾಯಕ ಮುಸ್ತಫಾ ನಈಮಿಯವರ ಭಾಷಣದಲ್ಲಿ ಕ್ಯಾಡ್ರೆ ಕ್ಯಾಂಪ್ ನ ಮಹತ್ವವನ್ನು ವಿವರಿಸಿದರು. ರಾಜ್ಯ ಸಮಿತಿ ಸಂಘಟನಾ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಲು 5 ಫ್ಲಾಟ್ಪಾರಂಗಳನ್ನು ಸಿದ್ದಪಡಿಸಿದ್ದು ಅದರಲ್ಲಿ ಬೆಂಗಳೂರು ಕೇಂದ್ರೀಕೃತ ತವಕ್ಕಲ್ ಫ್ಲಾಟ್ಪಾರಂ ನ ಪೋಸ್ಟರನ್ನು ಕ್ಯಾಂಪ್ನಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು, ಕೊಡಗು ಜಿಲ್ಲೆಯಿಂದ ಆಯ್ದ ಸುಮಾರು 250ಕ್ಕೂ ಹೆಚ್ಚು ಎಸ್ಸೆಸ್ಸೆಫ್ ಕಾರ್ಯಕರ್ತರು ಭಾಗವಹಿಸಿದ್ದರು.ಬೆಂಗಳೂರು ಜಿಲ್ಲಾ ಎಸ್ಸೆಸ್ಸೆಫ ಪ್ರಧಾನ ಕಾರ್ಯದರ್ಶಿ ಶಬೀಬ್ ಸ್ವಾಗತಿಸಿ, ಜಿಲ್ಲಾ ಕ್ಯೂಡಿ ಕಾರ್ಯದರ್ಶಿ ಫಾರೂಕ್ ಅಮಾನಿ ವಂದಿಸಿದರು.