ಸಾರಾಂಶ
ಇಸ್ಲಾಮಾಬಾದ್ : ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ತನ್ನ ಮೇಲೆ ದಾಳಿ ನಡೆಸುವುದು ಖಚಿತ ಎಂದು ಬೆಚ್ಚಿಬಿದ್ದಿರುವ ಪಾಕಿಸ್ತಾನ, ‘ಇದೀಗ ನಿಮ್ಮ ಪ್ರಭಾವ ಬಳಸಿ ಭಾರತ ಯುದ್ಧ ಮಾಡದಂತೆ ತಡೆಯಿರಿ’ ಎಂದು ಮುಸ್ಲಿಂ ದೇಶಗಳಿಗೆ ದುಂಬಾಲು ಬಿದ್ದಿದೆ. ಇಂಥದ್ದೇ ಮನವಿಯೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮಾಡಿದ ಮರುದಿನವೇ, ಯುದ್ಧ ತಡೆಯಲು ತನ್ನೆಲ್ಲಾ ಶಕ್ತಿ ಬಳಸಲು ಪಾಕ್ ಮುಂದಾಗಿದೆ.
ಭಾರತಕ್ಕೂ ಮಿತ್ರದೇಶಗಳಾಗಿರುವ ಸೌದಿ ಅರೇಬಿಯಾ, ಯುಎಇ, ಕುವೈತ್ನ ಪಾಕಿಸ್ತಾನದಲ್ಲಿರುವ ರಾಯಭಾರಿಗಳನ್ನು ಶುಕ್ರವಾರ ಭೇಟಿಯಾಗಿದ್ದ ಪ್ರಧಾನಿ ಶೆಹಬಾಜ್ ಶರೀಫ್ ಇಂಥದ್ದೊಂದು ಮನವಿ ಮಾಡಿದ್ದಾರೆ.
‘ದಕ್ಷಿಣ ಏಷ್ಯಾ ಭಾಗದಲ್ಲಿ ಶಾಂತಿ ಹಾಗೂ ಸ್ಥಿರತೆ ಸ್ಥಾಪನೆ ಪಾಕಿಸ್ತಾನದ ಆಸೆ. ಕಳೆದ 15 ತಿಂಗಳಿನಿಂದ ನಿಮ್ಮ ನೆರವಿನಿಂದ ಪಾಕಿಸ್ತಾನವು ಮಾಡಿರುವ ಸಾಧನೆಗಳನ್ನು ಅಪಾಯಕ್ಕೆ ಸಿಲುಕಿಸುವುದು ನನಗೆ ಇಷ್ಟವಿಲ್ಲ. ನಾವು ಬೇಜವಾಬ್ದಾರಿಯಿಂದ ವರ್ತಿಸುವುದು ಊಹಿಸಲೂ ಸಾಧ್ಯವಿಲ್ಲ’ ಎಂದಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಜೊತೆಗೆ, ‘ಪಹಲ್ಗಾಂ ಘಟನೆ ಕುರಿತು ಮೂರನೇ ತಟಸ್ಥ ದೇಶವೊಂದರಿಂದ ಪಾರದರ್ಶಕ ಮತ್ತು ನ್ಯಾಯಸಮ್ಮತ ತನಿಖೆಗೆ ಪಾಕಿಸ್ತಾನ ಈಗಲೂ ಸಿದ್ಧ’ ಎಂದೂ ಶೆಹಬಾಜ್ ಮೂರೂ ದೇಶಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಶೆಹಬಾಜ್ ಮೊರೆಗೆ ಪ್ರತಿಯಾಗಿ ಮೂರೂ ರಾಯಭಾರಿಗಳು, ‘ನಮ್ಮ ದೇಶಗಳು ಪ್ರಾದೇಶಿಕ ಶಾಂತಿ ಮತ್ತು ಭದ್ರತೆ ಕಾಪಾಡಲು ಪಾಕಿಸ್ತಾನದೊಂದಿಗೆ ಕೆಲಸ ಮಾಡಲಿವೆ’ ಎಂಬ ಭರವಸೆ ನೀಡಿದ್ದಾರೆ.
ಈಗ ಹೈವೇ ಮೇಲೆ ಭಾರತದ ಯುದ್ದ ವಿಮಾನ ತಾಲೀಮು
ನವದೆಹಲಿ: ಭಾರತ-ಪಾಕಿಸ್ತಾನದ ನಡುವಿನ ಬಿಗುವಿನ ವಾತಾವರಣ ನಡುವೆಯೇ ಉತ್ತರಪ್ರದೇಶದ ಗಂಗಾ ಎಕ್ಸ್ಪ್ರೆಸ್ ಮಾರ್ಗದಲ್ಲಿ ಭಾರತೀಯ ವಾಯುಪಡೆ ಶುಕ್ರವಾರ ಯುದ್ಧವಿಮಾನಗಳ ಟೇಕ್ ಆಫ್, ಲ್ಯಾಂಡಿಂಗ್ ಅಭ್ಯಾಸ ನಡೆಸಿದೆ.---
ಪಹಲ್ಗಾಂ ದಾಳಿಗೆಸಂಚು ರೂಪಿಸಿದ್ದೇಪಾಕ್ ಸೇನೆ: ಎನ್ಐಎನವದೆಹಲಿ: ಪಹಲ್ಗಾಂ ದಾಳಿ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ, ಪಾಕ್ ಸೇನೆ ಹಾಗೂ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಜಂಟಿ ಸಂಚಾಗಿತ್ತು. ದಾಳಿಗೆ ಕಾಶ್ಮೀರದ 20 ಸ್ಥಳೀಯರು ನೆರವು ನೀಡಿದ್ದರು ಎಂದು ದಾಳಿ ತನಿಖೆ ನಡೆಸುತ್ತಿರುವ ಎನ್ಐಎ ಹೇಳಿದೆ.
ಪಾಕ್ಗಿದೆ ಉಗ್ರ ಇತಿಹಾಸ: ಈಗ ಭುಟ್ಟೋ ಒಪ್ಪಿಗೆ
ಇಸ್ಲಾಮಾಬಾದ್: ‘ಪಾಕಿಸ್ತಾನವು ಉಗ್ರವಾದಕ್ಕೆ ಬೆಂಬಲ ನೀಡಿಕೊಂಡು ಬಂದ ಸುದೀರ್ಘ ಇತಿಹಾಸವಿದೆ. ನಾವು ಅಮೆರಿಕ ಸೇರಿ ಪಾಶ್ಚಾತ್ಯ ದೇಶಗಳ ಕೈಗೊಂಬೆಯಾಗಿ ಕೆಲಸ ಮಾಡಿದ್ದೆವು’ ಎಂದು ಪಾಕ್ ಮಾಜಿ ಸಚಿವ ಬಿಲಾವಲ್ ಭುಟ್ಟೋ ಕೂಡ ಒಪ್ಪಿಕೊಂಡಿದ್ದಾರೆ.===