ಸಾರಾಂಶ
ಅಕ್ರಮವಾಗಿ ಪೋಡಿ ಮಾಡಿಕೊಟ್ಟ ಪ್ರಕರಣದಲ್ಲಿ ನಿವೃತ್ತ ಜಿಲ್ಲಾಧಿಕಾರಿ ವಿ.ಶಂಕರ್ ಸೇರಿದಂತೆ ಮತ್ತಿತರ ಸರ್ಕಾರಿ ಅಧಿಕಾರಿಗಳ ವಿರುದ್ಧದ ಪ್ರಾಸಿಕ್ಯೂಷನ್ಗೆ ಸರ್ಕಾರ ನೀಡಿದ್ದ ಪೂರ್ವಾನುಮತಿ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರು : ಸರ್ಕಾರದಿಂದ ಖಾಸಗಿ ವ್ಯಕ್ತಿಗೆ ಮಂಜೂರಾಗಿದ್ದ ಎರಡು ಎಕರೆ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಅವರ ತಾಯಿ ತಾರಾಬಾಯಿ ಮಾರುತಿರಾವ್ ಹೆಸರಿಗೆ ಅಕ್ರಮವಾಗಿ ಪೋಡಿ ಮಾಡಿಕೊಟ್ಟ ಪ್ರಕರಣದಲ್ಲಿ ನಿವೃತ್ತ ಜಿಲ್ಲಾಧಿಕಾರಿ ವಿ.ಶಂಕರ್ ಸೇರಿದಂತೆ ಮತ್ತಿತರ ಸರ್ಕಾರಿ ಅಧಿಕಾರಿಗಳ ವಿರುದ್ಧದ ಪ್ರಾಸಿಕ್ಯೂಷನ್ಗೆ ಸರ್ಕಾರ ನೀಡಿದ್ದ ಪೂರ್ವಾನುಮತಿ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಪ್ರಾಸಿಕ್ಯೂಷನ್ಗೆ ಸರ್ಕಾರ ನೀಡಿದ್ದ ಪೂರ್ವಾನುಮತಿ ರದ್ದು ಕೋರಿ ನಿವೃತ್ತ ಜಿಲ್ಲಾಧಿಕಾರಿ ಅಧಿಕಾರಿ ವಿ.ಶಂಕರ್, ಸರ್ವೇಯರ್ ಡಿ.ಬಿ.ಗಂಗಯ್ಯ, ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ಕೆ. ಜಯಪ್ರಕಾಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಪೀಠ ಆದೇಶಿಸಿದೆ.
ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸರ್ಕಾರದ ಆದೇಶ ಮತ್ತು ನಿಯಮ ಉಲ್ಲಂಘಿಸಿ ನಕಲಿ ದಾಖಲೆ ಸೃಷ್ಟಿಸಿ ಭೂ ದಾಖಲೆಗಳನ್ನು ಬದಲಾಯಿಸಿದ ಆರೋಪ ಅರ್ಜಿದಾರರ ಮೇಲಿದೆ. ವಿವಾದಿತ ಭೂಮಿಗೆ ಸಂಬಂಧಿಸಿದಂತೆ ಪೋಡಿ ಮಾಡಿಕೊಡುವಂತೆ ಮೂಲ ಮಂಜೂರುದಾರರಾಗಲಿ ಹಾಗೂ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಅವರ ತಾಯಿಯಾಗಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿಲ್ಲ. ಆದರೆ, ಮುಖ್ಯ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿ ಸಲ್ಲಿಸಿದ ಅರ್ಜಿ ಆಧರಿಸಿ ತಾರಾಬಾಯಿ ಮಾರುತಿರಾವ್ ಅವರ ಹೆಸರಿಗೆ ಕೇವಲ ಮೂರೇ ತಿಂಗಳಲ್ಲಿ ಪೋಡಿ ಮಾಡಿಕೊಟ್ಟಿರುವುದು ದಾಖಲೆಗಳಿಂದ ತಿಳಿದು ಬಂದಿದೆ. ಮೂರು ತಿಂಗಳಲ್ಲಿ ಪೋಡಿ ಮಾಡಿಕೊಟ್ಟಿರುವುದಕ್ಕೆ ಏಕೈಕ ಉದಾಹರಣೆ ಇದಾಗಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಾಸಿಕ್ಯೂಷನ್ಗೆ ಸರ್ಕಾರ ನೀಡಿರುವ ಅನುಮತಿ ರದ್ದುಪಡಿಸಲಾಗದು ಎಂದು ಪೀಠ ಹೇಳಿದೆ.
ಹಿನ್ನೆಲೆ:
ಆನೇಕಲ್ ತಾಲೂಕಿನ ರಾಮನಾಯಕನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 29ರಲ್ಲಿನ ಎರಡು ಎಕರೆ ಜಮೀನನ್ನು ರಾಮಯ್ಯ ಎಂಬುವರಿಗೆ ಸರ್ಕಾರ ಮಂಜೂರು ಮಾಡಿತ್ತು. ಕಾಲಾನಂತರ ಈ ಜಮೀನು ಕುರಿತಂತೆ ನಕಲಿ ದಾಖಲೆ ಸೃಷ್ಟಿಸಿ ತಾರಾಬಾಯಿ ಅವರ ಹೆಸರಿಗೆ ಅಕ್ರಮವಾಗಿ ಪೋಡಿ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟಾಗಿದೆ ಎಂದು ಆರೋಪಿಸಿ 2019ರಲ್ಲಿ ಸಾಮಾಜಿಕ ಕಾರ್ಯಕರ್ತ ಭಾಸ್ಕರನ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ದಾಖಲಿಸಿದ್ದರು. ಈ ಸಂಬಂಧ ಅರ್ಜಿದಾರರ ವಿರುದ್ಧ 2022ರಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಸರ್ಕಾರ ಆದೇಶಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.