ಕನ್ನಡಪ್ರಭ ವಾರ್ತೆ ಮದ್ದೂರು
ಒಡಿಶಾ ರಾಜ್ಯದಿಂದ ಮಂಡ್ಯ ಜಿಲ್ಲೆಗೆ ಕಾರಿನಲ್ಲಿ ಅಪಾರ ಪ್ರಮಾಣದ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಆಂಧ್ರ ಮೂಲದ ಕಾರು ಚಾಲಕನನ್ನು ತಾಲೂಕಿನ ಕೆಸ್ತೂರು ಠಾಣೆ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.ಕೆಸ್ತೂರು ಸಮೀಪದ ತುಮಕೂರು- ಮದ್ದೂರು ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಸಿಲ್ವರ್ ಬಣ್ಣದ ಶಿಫ್ಟ್ ಕಾರಿಲ್ಲಿ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ರಾತ್ರಿ7.45ರ ಸುಮಾರಿಗೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಕೆಸ್ತೂರು ಆಸ್ಪತ್ರೆ ಬಳಿ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ 111 ಕೆ.ಜಿ. ಗಾಂಜಾ ಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಕಾರು ಚಾಲಕ ಆಂಧ್ರಪ್ರದೇಶದ ವೀರಾಂಜನಾಪುರದ ಶ್ರೀನಿವಾಸಲು ಎಂಬುವವನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.ಒಡಿಶಾದಿಂದ ಬಂದಿದ್ದ ಗಾಂಜಾವನ್ನು ತುಮಕೂರಿನಲ್ಲಿ ಪಡೆಯಲು ವ್ಯಕ್ತಿಯೊಬ್ಬ ಬರದ ಕಾರಣ ಕಾರು ಚಾಲಕ ಶ್ರೀನಿವಾಸಲು ಮಂಡ್ಯ ಜಿಲ್ಲೆಗೆ ವಿತರಿಸಲು ಬರುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತು ಎಸ್ಪಿ ಶೋಭರಾಣಿ, ಎಎಸ್ಪಿ ತಿಮ್ಮಯ್ಯ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐಗಳಾದ ನಾರಾಯಣಿ, ನವೀನ್, ಕೆ.ಎಂ.ದೊಡ್ಡಿ ಕೊಪ್ಪ, ಬೆಸಗರಹಳ್ಳಿ, ಕೆಸ್ತೂರು ಠಾಣೆ ಪಿಎಸ್ಐಗಳಾದ ಭೀಮಪ್ಪ ಬಾಣಸಿ, ಪ್ರಕಾಶ್, ನಿಂಗರಾಜು, ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಗಾಂಜಾ ಸಾಗಾಣಿಕೆ ಪ್ರಕರಣ ಪತ್ತೆ ಮಾಡಿದ್ದಾರೆ.
ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಕಾರು ನಾಗಮಂಗಲ ಮೂಲಕ್ಕೆ ಸೇರಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಒಡಿಶಾದಿಂದ ಬಂದಿದ್ದ ಗಾಂಜಾವನ್ನು ಎಲ್ಲಿ ದಾಸ್ತಾನು ಮಾಡಲಾಗಿತ್ತು. ನಂತರ ಎಲ್ಲೆಲ್ಲಿಗೆ ಸಾಗಾಣಿಕೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಪ್ರಕರಣದಲ್ಲಿ ಇನ್ಯಾರು ಭಾಗಿಗಳಾಗಿದ್ದಾರೆ ಎನ್ನುವುದನ್ನು ಪೊಲೀಸರು ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಎನ್ಡಿಡಿಬಿ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.