ಸಾರಾಂಶ
ಬೆಂಗಳೂರು : ವಿದೇಶಿ ಹಣ ಪರಿವರ್ತನೆ ನೆಪದಲ್ಲಿ ಉದ್ಯಮಿಯೊಬ್ಬರಿಂದ ಎರಡು ಕೋಟಿ ರು. ಹಣ ದೋಚಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಗೇರಿ ಉಪನಗರ ನಿವಾಸಿ ಶ್ರೀಹರ್ಷ ಅವರಿಗೆ ವಂಚನೆಗೊಳಗಾಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ಬೆಂಜಮಿನ್ ಹರ್ಷ ಹಾಗೂ ಆತನ ಸಹಚರರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಹಣ ಪರಿವರ್ತನೆ ಸಲುವಾಗಿ ಎಂ.ಎಸ್.ಪಾಳ್ಯಕ್ಕೆ ಕರೆಸಿಕೊಂಡು ಹರ್ಷ ಅವರಿಂದ ಆರೋಪಿಗಳು ಹಣ ದೋಚಿದ್ದಾರೆ.
ನಾನು ಕುಟುಂಬದ ಜತೆ ಕೆಂಗೇರಿ ಉಪನಗರದಲ್ಲಿ ನೆಲೆಸಿದ್ದೇನೆ. ಹಲವು ವರ್ಷಗಳಿಂದ ಏರಿವಾನ್ ಆಕ್ಸಿಜನ್ ಪ್ರೈ (Aerivon Oxygen Pvt) ಎಂಬ ಕಂಪನಿಯನ್ನು ನಡೆಸುತ್ತಿದ್ದೇನೆ. ಕೋಲ್ಡ್ ಪ್ರೆಸ್ಸೆಡ್ ಆಯಿಲ್ ಉದ್ಯಮವನ್ನು ಆರಂಭಿಸುವ ಸಲುವಾಗಿ ಸ್ನೇಹಿತರಿಂದ 2 ಕೋಟಿ ರು. ನಗದು ಸಾಲ ಪಡೆದಿದ್ದೆ. ಜರ್ಮನಿ ದೇಶದಿಂದ ಯಂತ್ರೋಪಕರಣ ಖರೀದಿಗೆ ಆ ದೇಶದ ಕರೆನ್ಸಿಗೆ (ಯುಎಸ್ಟಿಡಿ)ಗೆ ಪರಿವರ್ತನೆಗೆ ಸಂಬಂಧ ಸ್ನೇಹಿತ ಪ್ರಕಾಶ್ ಅಗರ್ವಾಲ್ ಹಾಗೂ ರಕ್ಷಿತ್ ಅವರಿಗೆ ತಿಳಿಸಿದ್ದೆ. ಬಳಿಕ ಈ ಗೆಳೆಯರ ಮೂಲಕ ನಾರಾಯಣ್ ಭರತ್ ಎಂಬಾತ ಪರಿಚಿಯವಾಯಿತು. ಆನಂತರ ನನಗೆ ಬೆಂಜಮಿನ್ ಹರ್ಷ ಸಂಪರ್ಕ ಬೆಳೆಯಿತು ಎಂದು ದೂರಿನಲ್ಲಿ ಹರ್ಷ ವಿವರಿಸಿದ್ದಾರೆ.
ಜೂ.25 ರಂದು ಹಣ ಪರಿವರ್ತನೆ ಸಲುವಾಗಿ ಬೆಂಜಮಿನ್ ಅವರ ಭೇಟಿಗೆ ಪೂರ್ವನಿಗದಿಯಂತೆ ವಿದ್ಯಾರಣ್ಯಪುರದ ಎಂ.ಎಸ್.ಪಾಳ್ಯ ಸರ್ಕಲ್ ಬಳಿಗೆ ತೆರಳಿದ್ದೆ. ತದನಂತರ ಬೆಂಜಮಿನ್ ಅವರಿಗೆ ನಾವು ನೀಡಿದ ಹಣವನ್ನು ಎಣಿಕೆ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಏಳೆಂಟು ಜನರು ನುಗ್ಗಿ ಹಣವನ್ನು ಕೊಡುವಂತೆ ಬೆದರಿಸಿದರು. ಇದಕ್ಕೆ ವಿರೋಧಿಸಿದಾಗ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಹಣ ದೋಚಿ ಪರಾರಿಯಾದರು. ಅದೇ ವೇಳೆ ನಮ್ಮ ಜತೆ ಇದ್ದ ಬೆಂಜಮಿನ್ ಹಾಗೂ ಆತನ ಸ್ನೇಹಿತರು ಸಹ ಓಡಿ ಹೋದರು ಎಂದು ದೂರಿದ್ದಾರೆ.