ಸಾರಾಂಶ
ಬೆಂಗಳೂರು : ಪಾರ್ಕ್ವೊಂದರ ಬಳಿ ಅನ್ಯ ಧರ್ಮೀಯ ಸ್ನೇಹಿತನ ಜತೆ ಮಾತನಾಡುತ್ತಿದ್ದ ಮುಸ್ಲಿಂ ಯುವತಿ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ಗಿರಿ ತೋರಿದ್ದ ಅಪ್ರಾಪ್ತ ಸೇರಿದಂತೆ ಐವರು ಕಿಡಿಗೇಡಿಗಳನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಗಂಗೊಂಡನಹಳ್ಳಿಯ ಮಹೀನ್, ಮನ್ಸೂರ್, ಆಫ್ರೀದಿ ಪಾಷ, ವಾಸೀಂ ಖಾನ್ ಹಾಗೂ ಅಪ್ರಾಪ್ತ ಬಾಲಕ ಬಂಧಿತರು. ಕಳೆದ 3 ದಿನಗಳ ಹಿಂದೆ ಚಂದ್ರಾಲೇಔಟ್ ಬಳಿ ಹಿಂದೂ ಯುವಕನ ಜತೆ ಮುಸ್ಲಿಂ ಸಮುದಾಯದ ಬಿಕಾಂ ವಿದ್ಯಾರ್ಥಿ ಮಾತನಾಡುತ್ತಿದ್ದಳು. ಆ ವೇಳೆ ಅಲ್ಲಿಗೆ ಬಂದ ಆರೋಪಿಗಳು, ಕಾಲೇಜಿಗೆ ಹೋಗದೆ ಯುವಕನ ಜತೆ ಓಡಾಡುತ್ತಿದ್ದೀಯಾ ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದರು. ಈ ನೈತಿಕ ಪೊಲೀಸ್ಗಿರಿ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಬುರ್ಖಾ ನೋಡಿ ಗಲಾಟೆ:
ಗುಜರಿ ಅಂಗಡಿಯಲ್ಲಿ ಮಹೀನ್, ವೆಲ್ಡರ್ಗಳಾಗಿ ಪಾಷ, ವಾಸೀಂ ಹಾಗೂ ಟೈಲರ್ ಆಗಿ ಮನ್ಸೂರ್ ಕೆಲಸ ಮಾಡುತ್ತಿದ್ದರು. ಚಂದ್ರಾಲೇಔಟ್ನ ಉದ್ಯಾನದ ಬಳಿ ಸ್ಕೂಟರ್ ನಿಲ್ಲಿಸಿಕೊಂಡು ಯುವಕನ ಜತೆ ಬುರ್ಖಾ ಧರಿಸಿದ್ದ ಯುವತಿ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಆರೋಪಿಗಳು ತಮ್ಮ ಏರಿಯಾದ ಯುವತಿ ಹುಡುಗನ ಜತೆ ಇರುವುದನ್ನು ಕಂಡು ಆಕ್ಷೇಪಿಸಿದ್ದು, ಕಾಲೇಜಿಗೆ ಚಕ್ಕರ್ ಹಾಕಿ ಈತನ ಜತೆ ಓಡಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿರೋಧ ತೋರಿದ ಆ ಯುವಕನ ಮೇಲೆ ಅವರು ಹಲ್ಲೆ ನಡೆಸಿದ್ದರು. ಈ ದುಂಡಾವರ್ತನೆಗೆ ಆಕ್ಷೇಪಿಸಿದ ಆಕೆ ಕಪಾಳಕ್ಕೆ ಹೊಡೆದು ದಾದಾಗಿರಿ ನಡೆಸಿದ್ದರು. ಈ ಬಗ್ಗೆ ತಿಳಿದ ಪೊಲೀಸರು, ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನನ್ನು ಪತ್ತೆ ಹಚ್ಚಿ ವಿಚಾರಿಸಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಕೋಮು ದ್ವೇಷದಿಂದ ನಡೆದಿಲ್ಲ: ಸ್ಪಷ್ಟನೆ
ಕೋಮು ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿಲ್ಲ. ಹಲವು ವರ್ಷಗಳಿಂದ ವಿದ್ಯಾರ್ಥಿನಿಗೆ ಆ ಯುವಕನ ಪರಿಚಯವಿದ್ದು, ನೆರೆಹೊರೆ ಪ್ರದೇಶದಲ್ಲೇ ಅವರು ನೆಲೆಸಿದ್ದಾರೆ. ಇನ್ನು ಆಕೆಗೆ ಆರೋಪಿಗಳು ಸಹ ಪರಿಚಯಸ್ಥರು. ಹೀಗಾಗಿ ಕಾಲೇಜಿಗೆ ಹೋಗದೆ ತಮ್ಮ ಏರಿಯಾದ ಯುವತಿ ಸುತ್ತಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಆರೋಪಿಗಳು ಗಲಾಟೆ ಮಾಡಿದ್ದಾರೆ. ಆದರೆ ಈ ಕೃತ್ಯಕ್ಕೆ ಕೋಮು ದ್ವೇಷ ಕಾರಣವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.