ಸಾರಾಂಶ
ಉದ್ಯಮಿಯೊಬ್ಬರು ಕುಟುಂಬ ಸಮೇತ ತಿರುಪತಿ ಪ್ರವಾಸಕ್ಕೆ ಹೋಗಿದ್ದ ವೇಳೆ ನೇಪಾಳ ಮೂಲದ ಕಾವಲುಗಾರ ದಂಪತಿ ನಗ-ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ಉದ್ಯಮಿಯೊಬ್ಬರು ಕುಟುಂಬ ಸಮೇತ ತಿರುಪತಿ ಪ್ರವಾಸಕ್ಕೆ ಹೋಗಿದ್ದ ವೇಳೆ ನೇಪಾಳ ಮೂಲದ ಕಾವಲುಗಾರ ದಂಪತಿ ನಗ-ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಸ್ತ್ರಿ ನಗರದ ರಿಯಲ್ ಎಸ್ಟೇಟ್ ಉದ್ಯಮಿ, ಬಿಜೆಪಿಯ ರಮೇಶ್ ಬಾಬು ಅವರ ಮನೆಯಲ್ಲಿ ಎರಡು ಕೆಜಿ ಚಿನ್ನ, 10 ಲಕ್ಷ ರು. ನಗದು ಹಾಗೂ ಪರವಾನಿಗೆ ಹೊಂದಿದ್ದ ಪಿಸ್ತೂಲ್ ಕಳ್ಳತನವಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಅವರ ಮನೆ ಕಾವಲುಗಾರ ರಾಜ್ ಹಾಗೂ ದೀಪಾ ದಂಪತಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕಳೆದ ಮೂರು ತಿಂಗಳಿಂದ ರಾಜ್ ದಂಪತಿ ಮನೆಕೆಲಸಕ್ಕಿದ್ದರು. ಮೇ 27 ರಂದು ತಿರುಪತಿಗೆ ಶ್ರೀ ವೆಂಕಟೇಶ್ವರಸ್ವಾಮಿ ದರ್ಶನಕ್ಕೆ ತೆರಳಿದ್ದಾಗ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ವಿದ್ಯುತ್ ಹಾಗೂ ಸಿಸಿಟಿವಿ ಸಂಪರ್ಕ ಸ್ಥಗಿತಗೊಳಿಸಿ ಈ ಕೃತ್ಯ ಎಸಗಿದ್ದಾರೆ. ಪ್ರವಾಸ ಮುಗಿಸಿ ಮರಳಿದಾಗ ಘಟನೆ ಗೊತ್ತಾಯಿತು ಎಂದು ರಮೇಶ್ಬಾಬು ಪುತ್ರ ಮಹೇಶ್ ತಿಳಿಸಿದ್ದಾರೆ.
ನೇಪಾಳಿಗರ ಮೇಲೆ ನಂಬಿಕೆ ಹೋಗಿದೆ. ಅವರ ಪೂರ್ವಾಪರ ಮಾಹಿತಿ ಸರಿಯಾಗಿ ಸಂಗ್ರಹಿಸದೆ ತಪ್ಪು ಮಾಡಿದ್ದೇವೆ. ಈ ಪ್ರಮಾದವನ್ನು ಬೇರೆ ಯಾರೂ ಮಾಡಬಾರದು. ಮನೆಯಿಂದ ಹೊರಟ ಬಳಿಕ ತಮ್ಮ ಸ್ನೇಹಿತರನ್ನು ಕರೆಸಿ ರಾಜ್ ದಂಪತಿ ಕಳ್ಳತನ ಮಾಡಿದ್ದಾರೆ ಎಂದು ಮಹೇಶ್ ಹೇಳಿದರು.