ಸಾರಾಂಶ
ಮಂಡ್ಯ : ಜಿಲ್ಲೆಯ ಕೆರಗೋಡು ಮತ್ತು ಶ್ರೀರಂಗಪಟ್ಟಣದಲ್ಲಿ ಎರಡು ಬಾಲ್ಯ ವಿವಾಹಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಈ ಬಾಲ್ಯ ವಿವಾಹಗಳು ಆಯಾ ಭಾಗದ ದೇವಸ್ಥಾನಗಳಲ್ಲಿ ನಡೆದಿವೆ. ಈ ಸಂಬಂಧ ಮಂಡ್ಯ ತಾಲೂಕಿನ ಬಸರಾಳು ಮತ್ತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.
ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯ ಕಾರೇಕಟ್ಟೆ ಗ್ರಾಮದ 16 ವರ್ಷ 5 ತಿಂಗಳು ವಯಸ್ಸಿನ ಹುಡುಗಿಯನ್ನು ಕಿರಣ, ನಾಗಮ್ಮ, ಅಂದಾನಿ, ದಿವ್ಯ, ಶೈಲಜಾ, ಶಿವಕುಮಾರ, ಅಂದಾನಿ ಇತರರು ಅಪಹರಿಸಿ ಮದುವೆ ಮಾಡಿಸಿದ್ದಾರೆ ಎಂದು ಬಾಲಕಿಯ ಅಜ್ಜಿ ದೂರು ನೀಡಿದ್ದಾರೆ.
ಮೇ 21ರಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಅಜ್ಜಿ ಅವರ ಸೊಸೆ ತಮ್ಮ ಮಗಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಮತ್ತೆ ಮಧ್ಯಾಹ್ನ1 ಗಂಟೆಗೆ ಬಂದು ನೋಡಿದಾಗ ಮಗಳು ಮನೆಯಲ್ಲಿರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಮಗಳು ಸಿಗಲಿಲ್ಲ ಎಂದು ತಿಳಿಸಿದ್ದಾರೆ.
ಮೇ 22 ರ ರಾತ್ರಿ 9 ಗಂಟೆಯವರರೆಗೆ ಹುಡುಕಿದರೂ ಸಿಗಲಿಲ್ಲ. ಆಕೆ ಇರುವಿಕೆಯ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಮೇ 22 ರಂದೇ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಚಾಕನಹಳ್ಳಿಯ ಶ್ರೀಬೊರೇದೇವರ ದೇವಸ್ಥಾನದಲ್ಲಿ ಕಿರಣ ಎಂಬಾತನೊಂದಿಗೆ ವಿವಾಹ ಮಾಡಿಸಿರುವುದಾಗಿ ಗೊತ್ತಾಗಿದೆ. ಬಾಲ್ಯ ವಿವಾಹಕ್ಕೆ ಕಾರಣರಾದ ಎಂಟು ಮಂದಿ ವಿರುದ್ಧ ಬಸರಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕಿ ಇಷ್ಟಕ್ಕೆ ವಿರುದ್ಧವಾಗಿ ಮದುವೆ:
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ರಾಂಪುರ ಗ್ರಾಮದ ಬಾಲಕಿಯೊಬ್ಬಳು ತನ್ನ ಇಷ್ಟಕ್ಕೆ ವಿರುದ್ಧವಾಗಿ ಬಾಲ್ಯ ವಿವಾಹ ಮಾಡಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಬಾಲಕಿಗೆ 16 ವರ್ಷ 5 ತಿಂಗಳಾಗಿದ್ದು, ಕೆ.ಆರ್.ಪೇಟೆ ತಾಲೂಕು ನಾಟನಹಳ್ಳಿ ಗ್ರಾಮದ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಬಾಲಕಿಯ ಅಕ್ಕನಿಗೆ ಈ ಮದುವೆ ಇಷ್ಟವಿಲ್ಲದೆ ಮನೆಬಿಟ್ಟು ಹೊರಟುಹೋಗಿದ್ದರು ಎನ್ನಲಾಗಿದೆ. ಈ ಮದುವೆ ನಿಂತರೆ ಮರ್ಯಾದೆ ಹೋಗುತ್ತದೆ ಎಂದು ಹೇಳಿ ಬಾಲಕಿಯನ್ನು ಆವ್ಯಕ್ತಿಗೆ ಕೊಟ್ಟು ಮದುವೆ ಮಾಡಲು ತೀರ್ಮಾನಿಸಿದ್ದರು.
ಬಾಲಕಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಆಕೆ ತಾನಿನ್ನೂ ಓದಬೇಕು, ಈಗಲೇ ನನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿದರೂ ತಾಯಿ ಒಪ್ಪಲಿಲ್ಲ. ತಂದೆಯ ಆರೋಗ್ಯ ಸರಿಯಿಲ್ಲದಿರುವುದರಿಂದ ಮದುವೆ ನಂತರ ಗಂಡನ ಮನೆಯವರೇ ನಿನ್ನನ್ನು ಓದಿಸಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ಹೇಳಿ ಬಾಲಕಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಒಪ್ಪಿಸಿದರು.
ಮೇ 23 ರಂದು ಬೆಳಗ್ಗೆ 10.30 ಗಂಟೆಗೆ ರಾಂಪುರ ಗ್ರಾಮದ ಶಿವನ ದೇವಸ್ಥಾನದಲ್ಲಿ ಆವ್ಯಕ್ತಿಯೊಂದಿಗೆ ಮದುವೆ ಮಾಡಿಸಲಾಯಿತು. ನನ್ನ ತಾಯಿ, ದೊಡ್ಡಮ್ಮ ರೂಪಾ, ದೊಡ್ಡಪ್ಪ ದೇವರಾಜು, ಅಜ್ಜಿ ಸುಶೀಲಾ, ಅಣ್ಣ ಸಂಜಯ್, ಚಿಕ್ಕಮ್ಮ ರತ್ನ, ಚಿಕ್ಕಪ್ಪ ಮಹೇಶ್ ಅವರು ಹಾಗೂ ಹುಡುಗನ ಪರವಾಗಿ ತಾಯಿ ಪಾರ್ವತಮ್ಮ, ಅಕ್ಕ ಪಾರ್ವತಿ ಮತ್ತು ಭಾವ ಅವರುಗಳು ಸೇರಿ ಬಾಲ್ಯವಿವಾಹ ಮಾಡಿದ್ದಾರೆ ಎಂದು ದೂರಿನಲ್ಲಿ ಬಾಲಕಿ ತಿಳಿಸಿದ್ದಾಳೆ.