ಹತ್ಯೆಗೂ ಮುನ್ನ 20 ಮಂದಿಯ ಪ್ಯಾಂಟ್‌ ಬಿಚ್ಚಿಸಿದ್ದ ಉಗ್ರರು!

| N/A | Published : Apr 27 2025, 01:32 AM IST / Updated: Apr 27 2025, 07:33 AM IST

ಹತ್ಯೆಗೂ ಮುನ್ನ 20 ಮಂದಿಯ ಪ್ಯಾಂಟ್‌ ಬಿಚ್ಚಿಸಿದ್ದ ಉಗ್ರರು!
Share this Article
  • FB
  • TW
  • Linkdin
  • Email

ಸಾರಾಂಶ

  ಪ್ರವಾಸಿಗರನ್ನು ಹತ್ಯೆ ಮಾಡುವ ಮೊದಲು, ಅವರ ಪ್ಯಾಂಟ್‌ ಬಿಚ್ಚಿಸಿ ಅವರು ಮುಸ್ಲಿಮೇತರರು ಎಂದು ಉಗ್ರರು ಖಚಿತಪಡಿಸಿಕೊಂಡಿದ್ದ ವಿಷಯ  ಖಚಿತಪಟ್ಟಿದೆ.

ನವದೆಹಲಿ: ಬೈಸರನ್‌ ಕಣಿವೆಯಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡುವ ಮೊದಲು, ಅವರ ಪ್ಯಾಂಟ್‌ ಬಿಚ್ಚಿಸಿ ಅವರು ಮುಸ್ಲಿಮೇತರರು ಎಂದು ಉಗ್ರರು ಖಚಿತಪಡಿಸಿಕೊಂಡಿದ್ದ ವಿಷಯ ಮರಣೋತ್ತರ ಪರೀಕ್ಷೆ ಮತ್ತು ಭದ್ರತಾ ಪಡೆಗಳ ಪ್ರಾಥಮಿಕ ತನಿಖೆ ವೇಳೆ ಖಚಿತಪಟ್ಟಿದೆ.  

ಇದರೊಂದಿಗೆ ತಮ್ಮ ಪತಿ, ಪೋಷಕರನ್ನು ಕಳೆದುಕೊಂಡ ಸಂತ್ರಸ್ತರು ಹೇಳಿದ್ದ ವಿಷಯ ಮತ್ತೊಮ್ಮೆ ದೃಢಪಟ್ಟಿದೆ. ಜೊತೆಗೆ ಇಂಥ ಬೆಳವಣಿಗೆಯೇ ನಡೆದಿಲ್ಲ ಎಂದು ಆರೋಪಿಸುವ ಮೂಲಕ ಸಮುದಾಯವೊಂದರ ಪರ ನೇರ ಬೆಂಬಲ ವ್ಯಕ್ತಪಡಿಸಿದ್ದ, ಉಗ್ರರ ಪರ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದ ವಿವಿಧ ರಾಜಕೀಯ ಪಕ್ಷಗಳು, ಧಾರ್ಮಿಕ ನಾಯಕರ ಮೊಂಡಾಟಕ್ಕೆ ಬ್ರೇಕ್‌ ಬಿದ್ದಂತಾಗಿದೆ.

ಘಟನೆ ನಡೆದ ದಿನ ಪ್ರವಾಸಿಗರ ಧರ್ಮ ತಿಳಿಯುವ ನಿಟ್ಟಿನಲ್ಲಿ ಮೊದಲಿಗೆ ಉಗ್ರರು, ಪ್ರವಾಸಿಗರ ಬಳಿ ಗುರುತಿನ ಚೀಟಿ ತೋರಿಸಲು ಹೇಳಿದ್ದರು. ಬಳಿಕ ಅವರ ಬಳಿ ಕಲ್ಮಾ ಹೇಳಿಸಿದ್ದರು. ಜೊತೆಗೆ ಅವರ ಪ್ಯಾಂಟ್‌ ಬಿಚ್ಚಿಸಿ ಜನನಾಂಗ ಪರಿಶೀಲಿಸುವ ಮೂಲಕ ಅವರು ಮುಸ್ಲಿಮರೇ? ಅಥವಾ ಬೇರೆ ಧರ್ಮದವರೇ ಎಂದು ಖಚಿತಪಡಿಸಿಕೊಂಡಿದ್ದರು.

ಬಳಿಕ ಅವರ ಪೈಕಿ ಯಾರು ಮುಸ್ಲಿಮರಲ್ಲ ಎಂದು ಖಚಿತಪಟ್ಟಿತ್ತೋ ಅವರನ್ನೆಲ್ಲಾ ಗುಂಡಿಕ್ಕಿ ಹತ್ಯೆ ಮಾಡಿದ್ದರು ಎಂಬ ವಿಷಯ ಸೇನಾ ಪಡೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸ್ಥಳೀಯ ಸಂಸ್ಥೆಗಳು ನಡೆಸಿದ ಪ್ರಾಥಮಿಕ ತನಿಖೆ ವೇಳೆ ದೃಢಪಟ್ಟಿದೆ. ಜೊತೆಗೆ ಮರಣೋತ್ತರ ಪರೀಕ್ಷೆಗೆ ಕರೆತಂದ ವೇಳೆ 26 ಜನರ ಪೈಕಿ 20 ಜನರ ಶವಗಳು ಪ್ಯಾಂಟ್ ಕಳಚಿದ ಸ್ಥಿತಿಯಲ್ಲಿತ್ತು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಮೊದಲು, ಈ ಬಗ್ಗೆ ಮಾತನಾಡಿದ್ದ ಪ್ರತ್ಯಕ್ಷದರ್ಶಿಗಳು, ‘ಉಗ್ರರು ಪ್ರವಾಸಿಗರ ಬಳಿ ಅವರ ಗುರುತಿನ ದಾಖಲೆಗಳನ್ನು ಕೇಳಿದರು. ಬಳಿಕ ಕಲ್ಮಾ ಪಠಿಸಲು ಸೂಚಿಸಿದರು. ಅಂತೆಯೇ, ಧರ್ಮವನ್ನು ಧೃಡಪಡಿಸಿಕೊಳ್ಳಲು ಪ್ಯಾಂಟ್‌ ಬಿಚ್ಚಿಸಿದರು’ ಎಂದು ಹೇಳಿದ್ದರು.

ಶಂಕೆಗೆ ಬಿತ್ತು ತೆರೆ:

‘ಪಹಲ್ಗಾಂ ದಾಳಿ ಧರ್ಮದ ಆಧಾರದಲ್ಲಿ ನಡೆದಿರಲಿಲ್ಲ. ಬಿಜೆಪಿ ಅದನ್ನು ಆ ರೀತಿ ಬಿಂಬಿಸಲು ಯತ್ನಿಸುತ್ತಿದೆ’ ಎಂದು ಕೆಲ ರಾಜಕೀಯ ನಾಯಕರು ಆರೋಪಿಸಿದ್ದರು. ಇತರೆ ಕೆಲ ಧಾರ್ಮಿಕ ನಾಯಕರು ಕೂಡಾ ಧರ್ಮದ ಆಧಾರದಲ್ಲಿ ದೇಶ ವಿಭಜನೆಗಾಗಿ ಕೇಂದ್ರ ಸರ್ಕಾರ/ ಬಿಜೆಪಿ ಇಂಥ ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಎಂದು ಆರೋಪಿಸಿದ್ದರು.