ಕೋಲ್ಕತಾ: ಪಶ್ಚಿಮ ಬಂಗಾಳದ ಬದುರಿಯಾದಲ್ಲಿರುವ ತೃಣಮೂಲ ಕಾಂಗ್ರೆಸ್ ಕಚೇರಿ ಬಳಿ ಭೂಗತವಾಗಿ ಹಲವು ಚೀಲಗಳಲ್ಲಿ ತುಂಬಿಡಲಾಗಿದ್ದ 500 ರು. ಮುಖಬೆಲೆಯ ನೋಟುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸರ್ಕಾರದ ಪರಿಹಾರ ಯೋಜನೆಯಲ್ಲಿ ಅವ್ಯವಹಾರ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಟಿಎಂಸಿ ಹಿರಿಯ ನಾಯಕ ಮತ್ತು ಬದುರಿಯಾ ಪುರಸಭೆ ಅಧ್ಯಕ್ಷ ದೀಪಂಕರ್ ಭಟ್ಟಾಚಾರ್ಯ ಬಂಧನ ಬಳಿಕ ನಡೆದ ಶೋಧ ಕಾರ್ಯಾಚರಣೆ ವೇಳೆ ಹಣದ ಚೀಲಗಳು ಪತ್ತೆಯಾಗಿವೆ.ಮಂಗಳವಾರ ತಡರಾತ್ರಿ ಪಕ್ಷದ ಕಚೇರಿ ಸಮೀಪ ಅನುಮಾನಸ್ಪದ ಚಟುವಟಿಕೆ ಕಂಡುಬಂದ ಹಿನ್ನೆಲೆ ಬುಧವಾರ ಪೊಲೀಸರು ಟಿಎಂಸಿ ಕಚೇರಿ ಬಳಿ ಶೋಧ ನಡೆಸಿದ್ದಾರೆ. ಈ ವೇಳೆ ಹೂತಿಟ್ಟಿದ್ದ 500 ರು.ನೋಟುಗಳ ಬಂಡಲ್ಗಳನ್ನು ಪತ್ತೆಹಚ್ಚಿದ್ದು, 4 ದೊಡ್ಡ ಚೀಲಗಳನ್ನು ಪೊಲೀಸರು ಹೊತ್ತುಕೊಂಡು ಹೋಗುತ್ತಿರುವ ದೃಶ್ಯಗಳು ಸೆರೆಯಾಗಿದೆ. ಕೋಟ್ಯಂತರ ಹಣವಿರುವ ಶಂಕೆ ವ್ಯಕ್ತವಾಗಿದ್ದು, ನಿಖರ ಮೊತ್ತ ಪತ್ತೆಯಾಗಿಲ್ಲ.