ಸಾರಾಂಶ
ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಕರೆತಂದಿರುವ ಚೀತಾಗಳ ಮೇಲೆ ಜನರು ಕಲ್ಲು ತೂರಾಟ ನಡೆಸಿರುವ ಘಟನೆ ಸೋಮವಾರ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಶಿಯೋಪುರ/ನವದೆಹಲಿ: ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಕರೆತಂದಿರುವ ಚೀತಾಗಳ ಮೇಲೆ ಜನರು ಕಲ್ಲು ತೂರಾಟ ನಡೆಸಿರುವ ಘಟನೆ ಸೋಮವಾರ ಮಧ್ಯ ಪ್ರದೇಶದಲ್ಲಿ ನಡೆದಿದೆ.
ನಿಗಾ ಘಟಕದಿಂದ ಅರಣ್ಯಕ್ಕೆ ಬಿಟ್ಟಂತಹ ಹೆಣ್ಣು ಚೀತಾ ಜ್ವಾಲಾ ಮತ್ತು ಅದರ 4 ಮರಿಗಳು ಸೋಮವಾರ ಕಾಡಿನಿಂದ ನಾಡಿಗೆ ನುಗ್ಗಿ ಬೆಳಗ್ಗೆ 9 ಗಂಟೆಗೆ ಶಿಯೋಪುರ ಜಿಲ್ಲೆಯ ಬೆಹರ್ದಾ ಹಳ್ಳಿಗೆ ಹಸುವಿನ ಕರುವನ್ನು ಬೇಟೆಯಾಡಲು ತೆರಳಿದ್ದವು. ಇದನ್ನು ಗಮನಿಸಿದ ಸ್ಥಳೀಯರು, ಕೈಯಲ್ಲಿ ಕೋಲು ಹಿಡಿದು, ಬೆದರಿಸಲು ಯತ್ನಿಸಿದ್ದಾರೆ. ಈ ವೇಳೆ ಕೆಲವರು ಚೀತಾಗಳ ಮೇಲೆ ಕಲ್ಲುತೂರಿ ಬೆದರಿಸಿ ದೂರ ಅಟ್ಟಿದ್ದಾರೆ. ಅರಣ್ಯ ಸಿಬ್ಬಂದಿ ಜನರಿಂದ ಚೀತಾಗಳನ್ನು ರಕ್ಷಿಸಿದ್ದಾರೆ.ಇದರ ಬೆನ್ನಲ್ಲೇ ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.