ನೀಟ್‌ ಹೋರಾಟದ ಬಳಿಕ ಕಾಕ್ರೋಚ್‌ ಪಾರ್ಟಿಯ ಮುಂದಿನ ಹಾದಿ ಏನು ಎಂಬ ಪ್ರಶ್ನೆಗಳ ನಡುವೆಯೇ ಜಿರಳೆ ಪಕ್ಷ ತನ್ನ ಮುಂದಿನ ಹಾದಿ ಕುರಿತು ಚರ್ಚಿಸಲು ಆ.5ರಂದು ಸಭೆ ಸೇರಲಿದೆ.

- ಭವಿಷ್ಯದ ಹೋರಾಟಗಳ ಬಗ್ಗೆ ಸಮಾಲೋಚನೆ

- ದೀಪ್ಕೆ ದಿಪ್ಕೆ ಮನೆಯಲ್ಲಿ ಸಿಜೆಪಿ ಮಹತ್ವದ ಸಭೆ

ಮುಂಬೈ: ನೀಟ್‌ ಹೋರಾಟದ ಬಳಿಕ ಕಾಕ್ರೋಚ್‌ ಪಾರ್ಟಿಯ ಮುಂದಿನ ಹಾದಿ ಏನು ಎಂಬ ಪ್ರಶ್ನೆಗಳ ನಡುವೆಯೇ ಜಿರಳೆ ಪಕ್ಷ ತನ್ನ ಮುಂದಿನ ಹಾದಿ ಕುರಿತು ಚರ್ಚಿಸಲು ಆ.5ರಂದು ಸಭೆ ಸೇರಲಿದೆ.

ಛತ್ರಪತಿ ಸಂಭಾಜಿನಗರದಲ್ಲಿರುವ ಪಕ್ಷದ ಸಂಸ್ಥಾಪಕ ಅಭಿಜಿತ್‌ ದಿಪ್ಕೆ ಅವರ ಮನೆಯಲ್ಲಿ ನಡೆಯಲಿರುವ ಈ ಪಕ್ಷದ ಪ್ರಮುಖರ ಸಭೆಯಲ್ಲಿ, ಸಿಜೆಪಿ ಮುಂದಿನ ಅಜೆಂಡಾ, ಹೋರಾಟಗಳ ಕುರಿತು ಚರ್ಚೆ ನಡೆಯಲಿದೆ.

ಮೂಲಗಳ ಪ್ರಕಾರ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಒಂದು ತಿಂಗಳಷ್ಟು ಸುದೀರ್ಘ ಹೋರಾಟದ ಬಳಿಕ ಸಿಜೆಪಿ ಕಾರ್ಯಕರ್ತರು ಹಾಗೂ ಸ್ವಯಂಸೇವಕರಿಗೆ ಕೆಲ ಸಮಯ ಕುಟುಂಬದೊಂದಿಗೆ ಕಳೆಯಲು ಸೂಚಿಸಲಾಗಿತ್ತು. ಸಭೆಗೆ ಹಾಜರಾಗುವ ಮುನ್ನ ಪಕ್ಷದ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಪ್ರಮುಖರು ಚರ್ಚೆ ನಡೆಸಬೇಕು. ಅವರ ಸಲಹೆ, ಅಭಿಪ್ರಾಯಗಳನ್ನು ಸಭೆಯಲ್ಲಿ ಮಂಡಿಸಬೇಕು ಎಂದು ಮನವಿ ಮಾಡಲಾಗಿದೆ.

ಸಭೆ ಬಳಿಕ ಪಕ್ಷವು ಪತ್ರಿಕಾಗೋಷ್ಠಿ ಕರೆಯಲಿದ್ದು, ತನ್ನ ಮುಂದಿನ ನಡೆ ಬಗ್ಗೆ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ದಿಪ್ಕೆ ಅವರು ಪಕ್ಕದ ಜಿಲ್ಲೆಯ ಕೆಲ ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ಸಂದರ್ಶಕರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದು, ಮಕ್ಕಳ ಜತೆಗೆ ಸ್ನೇಹ ದಿನವನ್ನೂ ಆಚರಿಸಿಕೊಂಡಿದ್ದಾರೆ.

==

ದೀಪ್ಕೆ ವಿದೇಶಿ ಶಿಕ್ಷಣದ ಹಣದ

ಮೂಲ ತನಿಖೆ ನಡೆಸಲು ಆಗ್ರಹ

- ಆರ್‌ಟಿಐ ಕಾರ್ಯಕರ್ತನಿಂದ ಮಹಾ ಸರ್ಕಾರಕ್ಕೆ ಒತ್ತಾಯ

- ಸಿಜೆಪಿ ಹಣದ ಮೂಲದ ತನಿಖೆಗೂ ಕಾರ್ಯಕರ್ತ ಆಗ್ರಹ

ನವದೆಹಲಿ: ಜಿರಳೆ ಪಕ್ಷ (ಸಿಜೆಪಿ)ದ ಹಣಕಾಸು ಮೂಲ ಹಾಗೂ ಪಕ್ಷದ ಸಂಸ್ಥಾಪಕ ಅಭಿಜಿತ್‌ ದಿಪ್ಕೆ ಅವರ ತಂದೆ ತಮ್ಮ ಪುತ್ರನಿಗೆ ಅಮೆರಿಕದಲ್ಲಿ ಶಿಕ್ಷಣ ಕೊಡಿಸಲು ಯಾವ ರೀತಿ ಹಣ ಒದಗಿಸಿದರು ಎಂಬ ಕುರಿತು ತನಿಖೆ ನಡೆಸುವಂತೆ ಆರ್‌ಟಿಐ ಕಾರ್ಯಕರ್ತರೊಬ್ಬರು ಮಹಾರಾಷ್ಟ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಬಳಿಕ ಬಂಧನ ಹಾಗೂ ವಶಕ್ಕೆ ಪಡೆಯಲಾದ ಪ್ರತಿಭಟನಾಕಾರರ ಕಾನೂನು ನೆರವಿಗಾಗಿ 1 ಕೋಟಿ ರು. ನಿಧಿ ಘೋಷಿಸಿದ ಬೆನ್ನಲ್ಲೇ ಸೂರತ್‌ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿತ್‌ ತಿವಾರಿ ಈ ಒತ್ತಾಯ ಮಾಡಿದ್ದಾರೆ.

ಸಿಜೆಪಿ ನೋಂದಣಿಯಾಗದ ರಾಜಕೀಯ ಪಕ್ಷವಾಗಿದ್ದು, ಅದಕ್ಕೆ 1 ಕೋಟಿ ನಿಧಿ ನೀಡಿದ್ದರೆ ಜನಪ್ರತಿನಿಧಿಗಳ ಕಾಯ್ದೆ 1951ರ 29ಎ ಪ್ರಕಾರ ನೋಂದಣಿಯಾಗಿದೆಯೇ, ಇಲ್ಲವೇ ಎಂಬುದನ್ನು ಚುನಾವಣಾ ಆಯೋಗ ಪರಿಶೀಲಿಸಬೇಕಿದೆ. ಅದೇ ರೀತಿ ಕಪಿಲ್‌ ಸಿಬಲ್‌ ದೇಣಿಗೆಗಾಗಿ ಶೇ.18ರಷ್ಟು ಜಿಎಸ್ಟಿ ಪಾವತಿಸಲಿದ್ದಾರೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.ಮಹಾ ಸರ್ಕಾರಕ್ಕೆ ಆಗ್ರಹ:

ಮಹಾರಾಷ್ಟ್ರ ಸರ್ಕಾರದಲ್ಲಿ ಜೂನಿಯರ್‌ ಎಂಜಿನಿಯರ್‌ ಆಗಿದ್ದ ಭಗವಾನ್‌ ರಾವ್‌ ದಿಪ್ಕೆ ಮಾಸಿಕ 60,000-65,000 ರು. ವೇತನ ಪಡೆಯುತ್ತಿದ್ದು, ಇಷ್ಟಾದರೂ ಬೋಸ್ಟನ್‌ ವಿವಿಯಲ್ಲಿ ಓದುತ್ತಿರುವ ಪುತ್ರ ಅಭಿಜಿತ್‌ ದಿಪ್ಕೆ ಶಿಕ್ಷಣಕ್ಕೆ ಹೇಗೆ ಹಣ ಹೊಂದಿಸಿದ್ದಾರೆಂಬ ಬಗ್ಗೆ ತನಿಖೆ ಆಗಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

==

ವಿದ್ಯಾರ್ಥಿಗಳ ಮೇಲೆ ಹಲ್ಲೆ:

ಇಂದು ಸುಪ್ರೀಂ ವಿಚಾರಣೆ

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಖಂಡಿಸಿ ಪ್ರತಿಭಟಿಸುತ್ತಿದ್ದ ದೆಹಲಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಸೋಮವಾರ ವಿಚಾರಣೆ ನಡೆಯಲಿದೆ. ಪ್ರತಿಭಟನಾಕಾರರು ಮತ್ತು ಪೆಲೆಟ್‌ ಗನ್ ಸಂತ್ರಸ್ತರು ಮಾಡಿರುವ ಆರೋಪಗಳ ತನಿಖೆ ಹಾಗೂ ಪೊಲೀಸರ ಮೇಲಿನ ಹಲ್ಲೆ ಹಿಂದೆ ದುಷ್ಕೃತ್ಯ ಅಡಗಿದೆಯೇ ಎಂಬುದರ ತನಿಖೆಗೆ ಸುಪ್ರೀಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ರಚಿಸಬಹುದೇ ಎಂಬುದರ ತನಿಖೆಗೆ ಸಿಜೆಐ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.