ಮೊದಲ ಬಾರಿ ಪಿಂಎ ಮೋದಿ ಪ್ರತಿಕ್ರಿಯೆ
ಬನಿಯನ್ ಪ್ರತಿಭಟನೆ ಕೊಳಕು ರಾಜಕೀಯಎಐ ಸಮ್ಮೇಳನ ಬಿಜೆಪಿ ಕಾರ್ಯಕ್ರಮ ಅಲ್ಲಮೇರಠ್: ದೆಹಲಿಯ ಎಐ ಶೃಂಗದ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಕೇವಲ ಬನಿಯನ್ನಲ್ಲಿ ಪ್ರತಿಭಟನೆ ನಡೆಸಿದ ವಿಷಯದ ಬಗ್ಗೆ ಇದೇ ಮೊದಲ ಸಲ ಮೌನ ಮುರಿದು ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ಸಿಗರು ಈಗಾಗಲೇ ದೇಶದ ಮುಂದೆ ನಗ್ನರಾಗಿದ್ದಾರೆ. ಹೀಗಿರುವಾಗ ಅವರು ಮತ್ತೆ ಬಟ್ಟೆ ಬಿಚ್ಚುವ ಅವಶ್ಯಕತೆ ಏನಿತ್ತು’ ಎಂದು ವ್ಯಂಗ್ಯವಾಡಿದ್ದಾರೆ.
ವಿಸ್ತರಿತ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್ನ ವರ್ತನೆಯು ಅವರು ಬೌದ್ಧಿಕವಾಗಿ ಎಷ್ಟು ದಿವಾಳಿಯಾಗಿದ್ದಾರೆ ಮತ್ತು ದಾರಿದ್ರ್ಯವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ತಮ್ಮ ಕೊಳಕು ಮತ್ತು ನಾಚಿಕೆಗೇಡಿನ ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಎಲ್ಲಾ ಮಿತಿಯನ್ನೂ ದಾಟಿದ್ದಾರೆ’ ಎಂದು ಕಿಡಿಕಾರಿದರು.
ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಜನತೆ ಹಗಲೂ, ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಕೆಲವು ರಾಜಕೀಯ ಪಕ್ಷಗಳಿಗೆ ದೇಶದ ಅಭ್ಯುದಯವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಕೆಲವು ವಿಪಕ್ಷಗಳು ಮತ್ತು ದೇಶವ್ಯಾಪಿ ಜನತೆ ಕಾಂಗ್ರೆಸ್ನ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸತ್ಯ ಮತ್ತು ದೇಶದ ಹೆಮ್ಮೆಯ ಜೊತೆಗೆ ನಿಂತ ಅವರನ್ನು ನಾನು ಅಭಿನಂದಿಸುತ್ತೇನೆ’ ಎಂದು ಮೋದಿ ಹೇಳಿದರು.
ಎಐ ಶೃಂಗಕ್ಕೆ 80ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 20ಕ್ಕೂ ಹೆಚ್ಚು ದೇಶಗಳ ಮುಖ್ಯಸ್ಥರು ಆಗಮಿಸಿದ್ದರು. ಆದರೆ ಕಾಂಗ್ರೆಸ್ ಮಾಡಿದ್ದೇನು? ಅವರು ಜಾಗತಿಕ ಕಾರ್ಯಕ್ರಮದ ಸ್ಥಳವನ್ನು ತಮ್ಮ ಕೊಳಕು ಮತ್ತು ನಾಚಿಕೆಗೇಡಿನ ರಾಜಕೀಯದ ವೇದಿಕೆ ಮಾಡಿಕೊಂಡರು. ನಾನು ಕಾಂಗ್ರೆಸ್ ನಾಯಕರನ್ನು ಒಂದು ಪ್ರಶ್ನೆ ಕೇಳಬಯಸುತ್ತೇನೆ. ನೀವು ಈಗಾಗಲೇ ನಗ್ನರಾಗಿದ್ದೀರಿ ಎಂಬುದು ದೇಶಕ್ಕೆ ಗೊತ್ತಿದೆ. ಹೀಗಿರುವಾಗ ನೀವು ಮತ್ತೊಮ್ಮೆ ಬಟ್ಟೆ ಬಿಚ್ಚುವ ಅವಶ್ಯಕತೆ ಏನಿತ್ತು’ ಎಂದು ವ್ಯಂಗ್ಯವಾಡಿದ್ದಾರೆ.
ಜೊತೆಗೆ, ಕಾಂಗ್ರೆಸ್ ನಾಯಕರು ಮೋದಿಯನ್ನು ದ್ವೇಷಿಸುತ್ತಾರೆ. ಅವರು ನನ್ನ ಸಮಾಧಿ ತೋಡಬಯಸುತ್ತಾರೆ. ಅವರು ನನ್ನ ತಾಯಿಯನ್ನು ದೂಷಿಸಲೂ ಹಿಂದೆ ಮುಂದೆ ನೋಡಲ್ಲ. ಅವರು ಬಿಜೆಪಿ, ಎನ್ಡಿಎ ಕೂಟವನ್ನು ದ್ವೇಷಿಸುತ್ತಾರೆ. ಅದು ಅವರ ರಾಜಕೀಯಕ್ಕೆ ಅನಿವಾರ್ಯ. ಅದನ್ನು ನಾವು ಸಹಿಸಿಕೊಳ್ಳುತ್ತೇವೆ. ಆದರೆ ಎಐ ಸಮ್ಮೇಳನ ಬಿಜೆಪಿಯದ್ದಲ್ಲ. ಅದು ದೇಶದ ಯೋಜನೆ ಎಂಬುದನ್ನು ಕಾಂಗ್ರೆಸ್ ಮರೆಯಬಾರದಿತ್ತು ಎಂದು ಕಿವಿ ಮಾತು ಹೇಳಿದರು.