ಸಾರಾಂಶ
ಮಹದಾಯಿ ಯೋಜನೆಯಿಂದ ಗೋವಾಕ್ಕೆ ಅಪಾಯ ಇಲ್ಲ ಎಂದಿದ್ದ ವರದಿ
ಸಂಶೋಧನೆ ನಡೆಸಲು ರಾಜ್ಯ ಸರ್ಕಾರ ಕೇಳಿಕೊಂಡಿರಲಿಲ್ಲ: ಸಿಎಂ
ಪಣಜಿ: ಮಹದಾಯಿ ನದಿ ತಿರುವು ಯೋಜನೆ ಕುರಿತು ಸಿಎಸ್ಐಆರ್ ಮತ್ತು ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ ನೀಡಿರುವ ವರದಿಯು, ಇದೇ ಪ್ರಕರಣದ ಕುರಿತು ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಯ ಮೇಲೆ ಯಾವುದೇ ಪರಿಣಾಮ ಬೀರದು. ಪ್ರಕರಣದಲ್ಲಿ ನಮ್ಮ ವಾದದಲ್ಲಿ ಯಾವುದೇ ಬದಲಾವಣೆಯಾಗದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಕರ್ನಾಟಕ-ಗೋವಾ ನಡುವೆ ದಶಕಗಳಿಂದ ಕಿತ್ತಾಟಕ್ಕೆ ಕಾರಣವಾಗಿರುವ ಮಹದಾಯಿ ಯೋಜನೆ ಕುರಿತು ಕೇಂದ್ರ ಸರ್ಕಾರದ ಅಧೀನದ ಸಂಸ್ಥೆ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಅದರ ಪ್ರಕಾರ, ಕರ್ನಾಟಕದ ಕಳಸ-ಬಂಡೂರಿ ಯೋಜನೆಯಡಿ ಮಹದಾಯಿ ನದಿ ನೀರನ್ನು ಮಲಪ್ರಭ ನದಿಯ ಕಡೆ ತಿರುಗಿಸುವುದರಿಂದ ಗೋವಾಕ್ಕೆ ಹೆಚ್ಚಿನ ಸಮಸ್ಯೆಯಾಗದು ಎನ್ನಲಾಗಿತ್ತು.
ಈ ಬಗ್ಗೆ ಮಾತನಾಡಿರುವ ಸಾವಂತ್, ‘ಸಮುದ್ರಶಾಸ್ತ್ರ ಸಂಸ್ಥೆಗೆ ಸಂಶೋಧನೆ ನಡೆಸುವಂತೆ ನಮ್ಮ ರಾಜ್ಯ ಸರ್ಕಾರ ಕೇಳಿಕೊಂಡಿರಲಿಲ್ಲ. ಅದರ ಹೊರತಾಗಿಯೂ ಮಾಡಲಾಗಿದೆಯೆಂದರೆ ಅವರ ಸ್ವ ಇಚ್ಛೆಯಿಂದ ಮಾಡಲಾಗಿದೆ. ಅದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಆ ವರದಿಯಿಂದಾಗಿ, ಸುಪ್ರೀಂ ಅಂಗಳದಲ್ಲಿರುವ ಕೇಸ್ ಕುರಿತ ನಮ್ಮ ವಾದ ಬದಲಾಗದು’ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಹುಟ್ಟುವ ಮಹದಾಯಿ ಮಹಾರಾಷ್ಟ್ರದ ಮೂಲಕ ಗೋವಾಗೆ ಹೋಗಿ, ಅಲ್ಲಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ಕಳಸಾ-ಬಂಡೂರಿ ಯೋಜನೆ ಕಾರ್ಯರೂಪಕ್ಕೆ ಬಂದರೆ, ತಮಗೆ ಸಿಗುವ ಮಹದಾಯಿಯ ಪಾಲು ಕಡಿಮೆಯಾಗುತ್ತದೆ ಎಂಬುದು ಗೋವಾದ ವಾದ.