ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್‌ ಮತ್ತು ಇ-ನೋಸ್‌’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ.

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್‌ ಮತ್ತು ಇ-ನೋಸ್‌’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ. 

ಸಚಿವ ಸತ್ಯಕುಮಾರ್‌ ಯಾದವ್‌ ಮಾಹಿತಿ

ಪತ್ರಿಕಾಪ್ರಕಟಣೆ ಮೂಲಕ ಆಂಧ್ರ ಆರೋಗ್ಯ ಸಚಿವ ಸತ್ಯಕುಮಾರ್‌ ಯಾದವ್‌ ಮಾಹಿತಿ ನೀಡಿದ್ದು, ‘ಫ್ರಾನ್ಸ್‌ನಿಂದ ತರಿಸಲಾಗುತ್ತಿರುವ ಇ-ಟಂಗ್‌ ವ್ಯವಸ್ಥೆಯು ತುಪ್ಪದ ರುಚಿ ನೋಡಿ ಗುಣಮಟ್ಟ ಪತ್ತೆ ಮಾಡಲಿದೆ. 

ಕಲಬೆರಕೆಯನ್ನು ಪತ್ತೆಹಚ್ಚಲಾಗುವುದು

ಅಂತೆಯೇ ಇ-ನೋಸ್‌ನಿಂದ ಘಮವನ್ನು ಆಘ್ರಾಣಿಸಿ ಕಲಬೆರಕೆಯನ್ನು ಪತ್ತೆಹಚ್ಚಲಾಗುವುದು. ಈ ಎಲೆಕ್ಟ್ರಾನಿಕ್‌ ಉಪಕರಣಗಳಿಂದ, ತುಪ್ಪದ ಗುಣಮಟ್ಟದಲ್ಲಿ ಸಣ್ಣ ಕೊರತೆಯಾದರೂ ತಿಳಿಯುತ್ತದೆ’ ಎಂದಿದ್ದಾರೆ. 25 ಕೋಟಿ ರು. ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ಲ್ಯಾಬ್‌ ಮುಂದಿನ ತಿಂಗಳಿಂದ ಕಾರ್ಯಾಚರಿಸಲಿದ್ದು, ತುಪ್ಪ, ಒಣಹಣ್ಣು ಸೇರಿ ಪ್ರಸಾದಕ್ಕೆ ಬಳಸುವ ವಸ್ತುಗಳ ಪರೀಕ್ಷೆ ನಡೆಸಲಿದೆ.