ಗಡಿವಿವಾದಕ್ಕೆ ಇತಿಶ್ರೀ ಹಾಕಲು ಕೇಂದ್ರದ ಚಿಂತನೆ
ಮಣಿಪುರದ ನಾಗರಿಕ ಸಮಾಜ ಗುಂಪುಗಳ ವಿರೋಧನವದೆಹಲಿ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಾಂಗ್ಲಾದೇಶದ ರೀತಿ ಈಗ ನೆರೆಯ ಮ್ಯಾನ್ಮಾರ್ ಜತೆಗೂ ಭಾರತವು ಭೂಭಾಗಗಳ ಪರಸ್ಪರ ವಿನಿಮಯಕ್ಕೆ ಮುಂದಾಗುವ ಕುರಿತು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಮುಖ್ಯವಾಗಿ ಮಣಿಪುರದಲ್ಲಿ 1.4 ಚದರ ಮೈಲಿ ಪ್ರದೇಶವನ್ನು ಪರಸ್ಪರ ವಿವಿಮಮ ಮಾಡಿಕೊಳ್ಳುವ ಪ್ರಸ್ತಾಪವೊಂದು ಕೇಂದ್ರದ ಮುಂದಿದೆ. ಆದರೆ, ಈ ಪ್ರಸ್ತಾಪಕ್ಕೆ ಮಣಿಪುರದ ನಾಗರಿಕ ಸಮಾಜದ ಗುಂಪುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಅಮೆರಿಕದ ಡಿಪ್ಲೋಮ್ಯಾಟ್ ಮ್ಯಾಗಝಿನ್ ವರದಿ ಪ್ರಕಾರ, ಭಾರತವು ಮ್ಯಾನ್ಯಾರ್ ಗಡಿಗೆ ಬೇಲಿ ಹಾಕುವ ಕಾರ್ಯ ತ್ವರಿತಗೊಳಿಸಲು ಮುಂದಾಗಿದೆ. ಅದರಂತೆ ಮಣಿಪುರದಲ್ಲಿ ವಿವಾದಿತ ಪಿಲ್ಲರ್ 65 ಮತ್ತು 68ರ ನಡುವೆ 1.4 ಚದರ ಮೈಲಿಗಳಷ್ಟು ಭೂಪ್ರದೇಶವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪ್ರಸ್ತಾಪದ ಕುರಿತು ಪರಿಶೀಲಿಸುತ್ತಿದೆ. ಈ ಪ್ರದೇಶ ಮಣಿಪುರದ ಚಂಡೇಲ್ ಜಿಲ್ಲೆಯ ವ್ಯಾಪ್ತಿಯಲ್ಲಿದ್ದು, ಮ್ಯಾನ್ಮಾರ್ನ ಕಬಾವ್ ಕಣಿವೆಗೆ ಹೊಂದಿಕೊಂಡಿದೆ.
ಭಾರತ ಮತ್ತು ಮ್ಯಾನ್ಮಾರ್ 1643 ಕಿ.ಮೀ.ನಷ್ಟು ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿದೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ನಡುವೆ ಈ ಗಡಿ ಹಾದುಹೋಗುತ್ತದೆ. ಇದರಲ್ಲಿ ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿರುವ 171 ಕಿ.ಮೀ. ಭೂ ವಿವಾದ ಪರಿಹಾರವಾಗದೆ ಬೇಲಿ ಕಾರ್ಯಕ್ಕೆ ಅಡ್ಡಿಯಾಗಿದೆ. ಒಂದು ವೇಳೆ ಬೇಲಿ ಹಾಕುವ ಕಾರ್ಯಪೂರ್ಣಗೊಂಡರೆ ಮ್ಯಾನ್ಮಾರ್ನಿಂದ ಅಕ್ರಮ ಒಳನುಸುಳುವಿಕೆ ತಡೆಯಲು ಅನುಕೂಲವಾಗಲಿದೆ.