ಜಿಎಸ್ಟಿ ಕಡಿತದ ಮೊದಲ ದಿನವೇ ಖರೀದಿ ಭರಾಟೆ

| Published : Sep 23 2025, 01:03 AM IST

ಜಿಎಸ್ಟಿ ಕಡಿತದ ಮೊದಲ ದಿನವೇ ಖರೀದಿ ಭರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್‌ಟಿ 2.0 ಸುಧಾರಣೆ ದಸರಾ ಹಬ್ಬದ ಆರಂಭದ ದಿನವಾದ ಸೋಮವಾರ ದೇಶಾದ್ಯಂತ ಜಾರಿಗೆ ಬಂದಿದೆ. ದಿನಬಳಕೆ ವಸ್ತುಗಳು, ಕಾರು, ಸ್ಕೂಟರ್‌, ವಾಷಿಂಗ್‌ಮೆಷಿನ್ ಸೇರಿ 375 ವಸ್ತುಗಳ ತೆರಿಗೆ ಇಳಿಕೆಯಾಗಿದ್ದು, ಮೊದಲ ದಿನವೇ ಖರೀದಿ ಭರಾಟೆ ದೇಶಾದ್ಯಂತ ಕಂಡುಬಂದಿದೆ. ಈ ಮೂಲಕ ಈ ಸಲದ ನವರಾತ್ರಿ ಉಳಿತಾಯದ ಹಬ್ಬವಾಗಿ ಪರಿಣಮಿಸಿದೆ.

- ದೇಶಾದ್ಯಂತ ಅಗತ್ಯ ವಸ್ತು ಸೇರಿ ವಿವಿಧ ಉತ್ಪನ್ನ ದರ ಇಳಿಕೆ

- ಭರ್ಜರಿ ಸೇಲ್‌ । ಹಬ್ಬದ ಖರೀದಿ ವೇಳೆ ಹಣ ಉಳಿಸಿದ ಖುಷಿ

- ಶೇ.13ರಷ್ಟು ಮನೆ ಖರ್ಚು ಉಳಿತಾಯ: ಕೇಂದ್ರ ಸರ್ಕಾರ ವಿಶ್ಲೇಷಣೆ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್‌ಟಿ 2.0 ಸುಧಾರಣೆ ದಸರಾ ಹಬ್ಬದ ಆರಂಭದ ದಿನವಾದ ಸೋಮವಾರ ದೇಶಾದ್ಯಂತ ಜಾರಿಗೆ ಬಂದಿದೆ. ದಿನಬಳಕೆ ವಸ್ತುಗಳು, ಕಾರು, ಸ್ಕೂಟರ್‌, ವಾಷಿಂಗ್‌ಮೆಷಿನ್ ಸೇರಿ 375 ವಸ್ತುಗಳ ತೆರಿಗೆ ಇಳಿಕೆಯಾಗಿದ್ದು, ಮೊದಲ ದಿನವೇ ಖರೀದಿ ಭರಾಟೆ ದೇಶಾದ್ಯಂತ ಕಂಡುಬಂದಿದೆ. ಈ ಮೂಲಕ ಈ ಸಲದ ನವರಾತ್ರಿ ಉಳಿತಾಯದ ಹಬ್ಬವಾಗಿ ಪರಿಣಮಿಸಿದೆ.

ಜಿಎಸ್‌ಟಿ ಇಳಿಕೆಗಾಗಿ ಕೆಲ ದಿನಗಳಿಂದ ಕಾಯುತ್ತಿದ್ದ ಗ್ರಾಹಕರು ಎಲೆಕ್ಚ್ರಾನಿಕ್ ಸ್ಟೋರ್‌ಗಳು, ಸೂಪರ್‌ ಮಾರ್ಕೆಟ್‌ಗಳು, ಕಾರು, ಬೈಕ್‌ ಶೋಂಗಳಿಗೆ ಸೋಮುವಾರವೇ ತೆರಳಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದರು.

ಹಾಗೆ ನೋಡಿದರೆ ದೇಶಾದ್ಯಂತ ಸಣ್ಣಪುಟ್ಟ ಅಂಗಡಿಗಳಲ್ಲಿ ಕೆಲವು ಹಳೆಯ ದರದಲ್ಲೇ ವಸ್ತುಗಳನ್ನು ಮಾರಾಟ ಮಾಡಿದರೆ, ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು ಮಾತ್ರ ಜಿಎಸ್ಟಿ ಕಡಿತಗೊಳಿಸಿ ವಸ್ತುಗಳನ್ನು ಮಾರಾಟ ಮಾಡಲು ಆರಂಭಿಸಿದ್ದು ಕಂಡುಬಂತು.

ಈ ಖದೀದಿ ಭರಾಟೆ ಇಷ್ಟಕ್ಕೇ ನಿಲ್ಲದು. ದಸರೆ ಮುಗಿವವರೆಗೆ ಹಾಗೂ ನಂತರದ ದಿನಗಳಲ್ಲೂ ಮುಂದುವರಿಯಲಿದೆ ಎಂದು ವ್ಯಾಪಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶೇ.13ರಷ್ಟು ಮನೆ ಖರ್ಚು ಉಳಿತಾಯ:

ಈ ನಡುವೆ, ಕೇಂದ್ರ ಸರ್ಕಾರವು ಜಿಎಸ್‌ಟಿ ಕಡಿತದಿಂದಾಗಿ ಪ್ರತಿ ಕುಟುಂಬಕ್ಕೆ ದಿನನಿತ್ಯದ ವಸ್ತುಗಳ ಮೇಲೆ ಶೇ.13ರಷ್ಟು ಉಳಿತಾಯ ಆಗಲಿದೆ. ಸಣ್ಣ ಕಾರು ಖರೀದಿದಾರರಿಗೆ 70 ಸಾವಿರ ರು. ವರೆಗೆ ಉಳಿತಾಯ ಆಗಲಿದೆ ಎಂದು ಹೇಳಿದೆ.

ಕಾಂಗ್ರೆಸ್‌-ಬಿಜೆಪಿ ವಾಕ್ಸಮರ:

ಆದರೆ ಜಿಎಸ್ಟಿ ಇಳಿಕೆ ಶ್ರೇಯಸ್ಸಿನ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡವೆ ವಾಕ್ಸಮರ ಆರಂಭವಾಗಿದೆ.

‘ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಅಧಿಕಾರಾವಧಿಯಲ್ಲೇ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿತ್ತು. ಯುಪಿಎ ಅವಧಿಯಲ್ಲಿ ಗಬ್ಬರ್‌ ಸಿಂಗ್‌ನ ಅಜ್ಜನ ರೀತಿಯಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈಗ ಜಿಎಸ್ಟಿ ಕಡಿತವು ದೇಶಾದ್ಯಂತ ಜನರಲ್ಲಿ ಸಂತೋಷದ ಅಲೆ ಸೃಷ್ಟಿಸಿದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್ ಇದಕ್ಕೆ ತಿರುಗೇಟು ನೀಡಿ, ‘4 ಸ್ತರದ ಜಿಎಸ್‌ಟಿ ಸರಿಯಲ್ಲ ಎಂದಿದ್ದೇ ಕಾಂಗ್ರೆಸ್. ಈಗ 4 ಸ್ತರದ ಜಿಎಸ್ಟಿಯನ್ನು ಕಾಂಗ್ರೆಸ್ ಆಗ್ರಹದಂತೆ 2 ಸ್ತರಕ್ಕೆ ಇಳಿಸಿರುವ ಮೋದಿ, ಅದರ ಶ್ರೇಯವನ್ನು ತಾವು ಪಡೆದಿದ್ದು ಸರಿಯೇ?’ ಎಂದಿದ್ದಾರೆ.

ಅಲ್ಲದೆ, ‘ಮೊದಲು ಕಾಂಗ್ರೆಸ್ ಸಲಹೆಯನ್ನು ಮೋದಿ ನಿರ್ಲಕ್ಷಿಸಿದರು. ಆದರೆ, ಇದೀಗ ಅಮೆರಿಕವು ಭಾರತದ ವಸ್ತುಗಳ ಮೇಲೆ ಸುಂಕ ವಿಧಿಸುತ್ತಿದ್ದಂತೆ ಈ ಸರ್ಕಾರಕ್ಕೆ ತೆರಿಗೆ ಸ್ತರದಲ್ಲಿನ ಸುಧಾರಣೆಯ ಅಗತ್ಯ ಮನವರಿಕೆಯಾಗಿದೆ. ಮೋದಿ ಸರ್ಕಾರದ ಜಿಎಸ್ಟಿ ಕಡಿತದ ಲಾಭ ಜನರಿಗೆ ತಲುಪುತ್ತಿದೆಯೇ, ಇಲ್ಲವೇ ಎಂಬುದನ್ನು ನೋಡಬೇಕಿದೆ’ ಎಂದಿದ್ದಾರೆ.

==ಪ್ರತಿ ವರ್ಗಕ್ಕೂ ಜಿಎಸ್‌ಟಿ ಸುಧಾರಣೆ ಪ್ರಯೋಜನ: ಜನರಿಗೆ ಮೋದಿ ಪತ್ರ

- ಸ್ವದೇಶಿ ಉತ್ಪನ್ನ ಖರೀದಿಸಿ, ಮಾರಾಟ ಮಾಡಿ

- ಇನ್ನು ‘ಜಿಎಸ್‌ಟಿ ಉಳಿತಾಯ ಉತ್ಸವ’ ಆರಂಭ

ಜಿಎಸ್ಟಿ ಸ್ತರ ಇಳಿಕೆ, 370ಕ್ಕೂ ಹೆಚ್ಚು ವಸ್ತುಗಳ ದರ ಕಡಿತ ಜಾರಿಗೆ ಬಂದ ಬೆನ್ನಲ್ಲೇ ದೇಶದ ಜನತೆಗೆ ಪ್ರಧಾನಿ ಮೋದಿ ಬಹಿರಂಗ ಪತ್ರಹೊಸ ತಲೆಮಾರಿನ ಜಿಎಸ್ಟಿ ಜಾರಿ ಉಳಿತಾಯ ಉತ್ತೇಜಿಸಿ, ಸಮಾಜದ ಪ್ರತಿ ವರ್ಗಕ್ಕೂ ನೇರ ಲಾಭ ತರಲಿದೆ ಎಂದು ಪ್ರಧಾನಿ ವಿಶ್ವಾಸ

ತೆರಿಗೆ ಕಡಿತಕ್ಕೂ ಮೊದಲು, ಬಳಿಕದ ದರ ಕುರಿತು ವ್ಯಾಪಾರಿಗಳು ಫಲಕ ಹಾಕಿದ್ದನ್ನು ನೋಡುವುದಕ್ಕೆ ಸಂತಸವಾಗುತ್ತಿದೆ ಎಂದ ಪ್ರಧಾನಿ=

ಪಿಟಿಐ ನವದೆಹಲಿ‘ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆ ಉಳಿತಾಯವನ್ನು ಉತ್ತೇಜಿಸಲಿದೆ ಮತ್ತು ಸಮಾಜದ ಪ್ರತಿ ವರ್ಗಕ್ಕೂ ನೇರವಾಗಿ ಪ್ರಯೋಜನವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸೋಮವಾರ ಎಕ್ಸ್‌ ಖಾತೆಯ ಮೂಲಕ ದೇಶವಾಸಿಗಳಿಗೆ ಬಹಿರಂಗ ಪತ್ರ ಬರೆದಿರುವ ಅವರು, ಹೊಸ ಜಿಎಸ್‌ಟಿ ನೀತಿಯ ಲಾಭಗಳನ್ನು ವಿವರಿಸಿದ್ದಾರೆ.‘ಸೆ.22ರಿಂದ, ಮುಂಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಅಸ್ತಿತ್ವಕ್ಕೆ ಬಂದಿವೆ. ಇದು ಉಳಿತಾಯ ಉತ್ಸವದ ಆರಂಭವನ್ನು ಸೂಚಿಸುತ್ತದೆ. ಜಿಎಸ್‌ಟಿ ಸುಧಾರಣೆ ಉಳಿತಾಯವನ್ನು ಹೆಚ್ಚಿಸುತ್ತದೆ. ರೈತರು, ಮಹಿಳೆಯರು, ಯುವಕರು, ಬಡವರು, ಮಧ್ಯಮ ವರ್ಗ ಅಥವಾ ವ್ಯಾಪಾರಿಗಳು- ಹೀಗೆ ಸಮಾಜದ ಪ್ರತಿಯೊಂದು ವರ್ಗಕ್ಕೂ ನೇರವಾಗಿ ಪ್ರಯೋಜನ ನೀಡುತ್ತದೆ. ಹೆಚ್ಚಿನ ಬೆಳವಣಿಗೆ ಮತ್ತು ಹೂಡಿಕೆಗಳನ್ನು ಪ್ರೋತ್ಸಾಹಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಆಹಾರ, ಔಷಧಿ, ಸೋಪ್, ಟೂತ್‌ಪೇಸ್ಟ್, ವಿಮೆ ಮತ್ತು ಇನ್ನೂ ಅನೇಕ ವಸ್ತುಗಳು ಈಗ ತೆರಿಗೆ ಮುಕ್ತವಾಗಿವೆ ಅಥವಾ ಶೇ.5ರ ತೆರಿಗೆ ಸ್ತರಕ್ಕೆ ಇಳಿದಿವೆ. ಈ ಹಿಂದೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಸರಕುಗಳು ಈಗ ಬಹುತೇಕ ಶೇ.5ಕ್ಕೆ ಬದಲಾಗಿವೆ. ವ್ಯಾಪಾರಿಗಳು ಜಿಎಸ್‌ಟಿ ಸುಧಾರಣೆಗಳ ಮೊದಲು ಮತ್ತು ನಂತರದ ತೆರಿಗೆಗಳನ್ನು ಸೂಚಿಸುವ ಫಲಕ ಹಾಕುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ’ ಎಂದಿದ್ದಾರೆ.‘2047ರ ವೇಳೆಗೆ ವಿಕಸಿತ ಭಾರತದ ಸಾಮೂಹಿಕ ಗುರಿಯನ್ನು ಸಾಧಿಸಲು ಸ್ವಾವಲಂಬನೆಯ ಹಾದಿಯಲ್ಲಿ ನಡೆಯುವುದು ಅತ್ಯಗತ್ಯ. ನಾವು ಖರೀದಿಸುವುದು ಸ್ವದೇಶಿ, ನಾವು ಮಾರಾಟ ಮಾಡುವುದು ಸ್ವದೇಶಿ ಎಂದು ಹೆಮ್ಮೆಯಿಂದ ಹೇಳೋಣ. ಜಿಎಸ್‌ಟಿ ಉಳಿತಾಯ ಉತ್ಸವವನ್ನು ಆಚರಿಸೋಣ’ ಎಂದು ಕರೆ ನೀಡಿದ್ದಾರೆ.