ಸಾರಾಂಶ
ಇಸ್ಲಾಮಾಬಾದ್: ಭಾರತದ ದಾಳಿಯಲ್ಲಿ ತನ್ನ ಯಾವುದೇ ವಾಯುನೆಲೆಗಳು ಹಾನಿಗೊಳಗಾಗಿಲ್ಲ ಎಂದೆಲ್ಲಾ ಸುಳ್ಳು ಹೇಳಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಕೊನೆಗೂ ದೇಶ ಮತ್ತು ಜಾಗತಿಕ ಸಮುದಾಯದ ಎದುರು ಭಾರತದ ದಾಳಿಗೆ ತನ್ನ ವಾಯುನೆಲೆ ಹಾನಿಗೊಳಗಾಗಿದೆ ಎಂದು ಒಪ್ಪಿಕೊಂಡಿದೆ. ಈ ಹಿಂದಿನ ಹಲವು ದಶಕಗಳಲ್ಲಿ ಭಾರತದಿಂದ ಪಾಕಿಸ್ತಾನ ಹಲವು ಬಾರಿ ಪೆಟ್ಟು ತಿಂದಿದ್ದರೂ, ಎಂದೂ ತಾನು ದಾಳಿಗೆ ಒಳಗಾಗಿದ್ದ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ.
ಭಾರತದ ಮೇಲಿನ ಯುದ್ಧದಲ್ಲಿ ಪಾಕಿಸ್ತಾನ ಜಯ ಸಾಧಿಸಿದೆ ಎಂದು ಸುಳ್ಳೇ ಬೀಗುತ್ತಿರುವ ಪಾಕಿಸ್ತಾನ ಈ ಸಂಭ್ರಮಾಚರಣೆಗೆ ಶನಿವಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಲ್ಲಿ ಮಾತನಾಡಿದ ಶೆಹಬಾಜ್ ಷರೀಫ್, ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ.ಷರೀಫ್ ಹೇಳಿದ್ದೇನು?:
‘ಮೇ 6-7ರ ರಾತ್ರಿ ನನಗೆ ತುರ್ತು ಕರೆ ಮಾಡಿದ್ದ ಸೇನಾ ಮುಖ್ಯಸ್ಥ, ರಾತ್ರಿ 2.30ರ ವೇಳೆ ರಾವಲ್ಪಿಂಡಿಯಲ್ಲಿರುವ ನಮ್ಮ ನೂರ್ ಖಾನ್ ವಾಯುನೆಲೆ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದೆ. ನಾವು ಕೂಡಾ ಪ್ರತಿದಾಳಿ ನಡೆಸಿದ್ದೇವೆ ಎಂದು ಹೇಳಿದರು. ಜೊತೆಗೆ ಪ್ರಧಾನಿಗಳೇ ಭಾರತ ಎಂದೆಂದೂ ಮರೆಯದ ರೀತಿ ದಾಳಿ ನಡೆಸಲು ನನಗೆ ಅನುಮತಿ ಕೊಡಿ ಎಂದರು’ ಎಂದು ಷರೀಫ್ ತಿಳಿಸಿದ್ದಾರೆ.
ಬಳಿಕ ಮೇ 10ರಂದು ನಾನು ನಮಾಜ್ ಮುಗಿಸಿ ಈಜುಕೊಳದಲ್ಲಿ ಈಜಾಡುತ್ತಿದ್ದೆ. ಈ ವೇಳೆ ಸೇನಾ ಮುಖ್ಯಸ್ಥ ಮುನೀರ್ ಕರೆ ಮಾಡಿ ‘ನಾವು ಭಾರೀ ಪ್ರತಿಕ್ರಿಯೆ ನೀಡಿದ ಬಳಿಕ ಭಾರತ ನಮ್ಮ ಮುಂದೆ ಕದನ ವಿರಾಮದ ಪ್ರಸ್ತಾಪ ಇಟ್ಟಿದೆ ಎಂದು ಹೇಳಿದರು.ಆಗ ನಾನು, ಎದುರಾಳಿಯ ತಲೆ ತಿರುಗುವ ರೀತಿಯಲ್ಲಿ ಪೆಟ್ಟುಕೊಟ್ಟು ಅವರು ಕದನ ವಿರಾಮಕ್ಕೆ ಮೊರೆ ಇಡುವ ಸನ್ನಿವೇಶ ನಿರ್ಮಿಸಿದ್ದಕ್ಕಿಂತ ದೊಡ್ಡ ಸಾಧನೆ ಏನಿದೆ? ಆಯಿತು ಹೋಗಿ ಅವರ ಕದನ ವಿರಾಮ ಪ್ರಸ್ತಾಪ ಒಪ್ಪಿಕೊಳ್ಳಿ ಎಂದು ಹೇಳಿದ್ದೆ’ ಎಂದು ಷರೀಫ್ ಹೇಳಿದ್ದಾರೆ.
ಛಿದ್ರಗೊಂಡ ವಾಯುನೆಲೆ ರಿಪೇರಿಗೆ ಟೆಂಡರ್ ಆಹ್ವಾನಿಸಿದ ಪಾಕಿಸ್ತಾನ
ನವದೆಹಲಿ: ಆಪರೇಷನ್ ಸಿಂದೂರದ ವೇಳೆ ಛಿದ್ರವಾಗಿರುವ ತನ್ನ ವಾಯುನೆಲೆಗಳ ದುರಸ್ತಿ ಕಾರ್ಯ ಕೈಗೊಳ್ಳಲು ಪಾಕಿಸ್ತಾನ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ರಾವಲ್ಪಿಂಡಿ, ಕಲ್ಲಾರ್ ಕಹರ್, ರಿಸಲ್ಪುರ್ ಸೇರಿದಂತೆ ವಿವಿಧ ವಾಯುನೆಲೆಗಳ ರಿಪೇರಿಗೆ ಪಾಕಿಸ್ತಾನದ ವಾಯುಪಡೆ ಟೆಂಡರ್ ಆಹ್ವಾನಿಸಿದೆ.ಭಾರತ ಭೀಕರ ದಾಳಿ ನಡೆಸಿದರೂ ತನ್ನ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ. ಬದಲಾಗಿ ತನ್ನ ದಾಳಿಗೆ ಭಾರತದ ವಾಯುನೆಲೆಗಳು ಭಾರೀ ಹಾನಿಗೊಳಗಾಗಿದೆ. ಇನ್ನು ಹಲವು ವರ್ಷಗಳ ಕಾಲ ಅದು ಬಳಕೆಗೆ ಬರುವುದಿಲ್ಲ ಎಂದೆಲ್ಲಾ ಸುಳ್ಳು ಹೇಳಿ ಪಾಕಿಸ್ತಾನ ಸರ್ಕಾರ ತನ್ನ ನಾಗರಿಕರಿಗೆ ಮಂಕುಬೂದಿ ಎರಚಿತ್ತು. ಆದರೆ ಇದೀಗ ಸುಳ್ಳು ಮುಚ್ಚಿಟ್ಟುಕೊಳ್ಳಲಾಗದೇ, ಸೇನಾನೆಲೆಗಳ ದುರಸ್ತಿಗೆ ಮತ್ತು ವಿವಿಧ ಉಪಕರಣಗಳ ಪೂರೈಕೆಗಾಗಿ ಅರ್ಹರಿಂದ ಟೆಂಡರ್ ಅಹ್ವಾನಿಸಿದೆ.
‘ಎಲ್ಲಿ ದಾಳಿ ಮಾಡಿದರೆ ಪಾಕಿಸ್ತಾನಕ್ಕೆ ಅತಿ ಹೆಚ್ಚು ಹಾನಿಯಾಗುವುದೋ ಅಲ್ಲಿಗೆ ಪೆಟ್ಟು ನೀಡಿದ್ದೇವೆ’ ಎಂದು ಆಪರೇಷನ್ ಸಿಂದೂರದ ಬಳಿಕ ವೈರಿರಾಷ್ಟ್ರದ ವಾಯುನೆಲೆಗಳನ್ನು ಉಲ್ಲೇಖಿಸಿ ಭಾರತ ಹೇಳಿತ್ತು. ಬಾಹ್ಯಾಕಾಶ ಚಿತ್ರಗಳಿಂದ ಕೂಡ, ಪಾಕಿಸ್ತಾನದ ವಾಯುನೆಲೆಗಳು ಪೂರ್ಣ ನಾಶವಾಗಿರುವುದು ಕಂಡುಬಂದಿತ್ತು.ಹೆಡ್ ಆಫೀಸ್ ಬದಲು?:
ಈ ನಡುವೆ ರಾವಲ್ಪಿಂಡಿಯನ್ನು ಸೇನೆಯ ಕೇಂದ್ರ ಕಚೇರಿಯ ಬಳಿಯೇ ಭಾರತ ದಾಳಿ ನಡೆಸಿದ್ದರಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ಪಾಕಿಸ್ತಾನ, ತನ್ನ ಸೇನೆಯ ಕೇಂದ್ರ ಕಚೇರಿಯನ್ನೇ ರಾಜಧಾನಿ ಇಸ್ಲಾಮಾಬಾದ್ಗೆ ವರ್ಗಾಯಿಸಲು ಚಿಂತಿಸಿದೆ ಎನ್ನಲಾಗಿದೆ. ರಾವಲ್ಪಿಂಡಿಗೆ ಹೋಲಿಸಿದರೆ ರಾಜಧಾನಿ ಇಸ್ಲಾಮಾಬಾದ್ ವಾಯುರಕ್ಷಣಾ ವ್ಯವಸ್ಥೆ ಸೇರಿದಂತೆ ಹೆಚ್ಚಿನ ರಕ್ಷಣೆ ಹೊಂದಿರುವ ಕಾರಣ ಸರ್ಕಾರ ಇಂಥದ್ದೊಂದು ಚಿಂತನೆ ನಡೆಸಿದೆ ಎನ್ನಲಾಗಿದೆ.