ಸಾರಾಂಶ
ಭಯೋತ್ಪಾದಕರು ತಮ್ಮ ಅಮಾನವೀಯ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಧರ್ಮವನ್ನು ಕುತಂತ್ರದಿಂದ ದುರುಪಯೋಗಪಡಿಸಿಕೊಳ್ಳುತ್ತಾರೆ
ಭಯೋತ್ಪಾದಕರು ತಮ್ಮ ಅಮಾನವೀಯ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಧರ್ಮವನ್ನು ಕುತಂತ್ರದಿಂದ ದುರುಪಯೋಗಪಡಿಸಿಕೊಳ್ಳುತ್ತಾರೆ. ಧರ್ಮದ ಮುಸುಕಿನ ಹಿಂದೆ ಅಡಗಿಕೊಂಡು, ಭಯೋತ್ಪಾದಕರು ತಾವು ಎತ್ತಿಹಿಡಿಯುತ್ತೇವೆ ಎಂದು ಹೇಳಿಕೊಳ್ಳುವ ನಂಬಿಕೆಯನ್ನೇ ಗಂಭೀರವಾಗಿ ಹಾನಿಗೊಳಿಸುತ್ತಾರೆ. ಧರ್ಮದ ಈ ದುರ್ಬಳಕೆ ಆಕಸ್ಮಿಕವಲ್ಲ ಅಥವಾ ಕ್ಷಣಿಕ ಆವೇಶದಿಂದ ಕೂಡಿದ್ದಲ್ಲ; ಇದು ಉದ್ದೇಶಪೂರ್ವಕ ತಂತ್ರ, ಕ್ರೌರ್ಯಗಳಿಗೆ ಸುಳ್ಳು ನ್ಯಾಯಸಮ್ಮತತೆಯನ್ನು ಒದಗಿಸಲು ಎಚ್ಚರಿಕೆಯಿಂದ ರೂಪಿಸಲಾದ ತಂತ್ರಗಾರಿಕೆ.
-ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವರು.
ಭಯೋತ್ಪಾದನೆಯು ಮಾನವಕುಲಕ್ಕೆ ಒಂದು ಶಾಪವಾಗಿದೆ, ನಾಗರಿಕ ಸಮಾಜದ ಪಾಲಿಸಬೇಕಾದ ಮೌಲ್ಯಗಳಿಗೆ ವಿರುದ್ಧವಾಗಿದೆ. ಇದು ಕ್ರಾಂತಿ, ಹುತಾತ್ಮತೆ ಮತ್ತು ಹಿಂಸೆಯ ಕುರಿತಾದ ತಪ್ಪಾದ ಕಲ್ಪನೆಗಳು ಹಾಗೂ ರೊಮ್ಯಾಂಟಿಕ್ ದೃಷ್ಟಿಕೋನಗಳ ಮೇಲೆ ಬೆಳೆಯುತ್ತದೆ. ‘ಒಬ್ಬನ ಸ್ವಾತಂತ್ರ್ಯ ಹೋರಾಟಗಾರ ಮತ್ತೊಬ್ಬನಿಗೆ ಭಯೋತ್ಪಾದಕ’ ಎಂಬ ವಾದವು ಅಪಾಯಕಾರಿ ತಪ್ಪು ಅಭಿಪ್ರಾಯವಾಗಿದೆ – ಏಕೆಂದರೆ ನಿಜವಾದ ಸ್ವಾತಂತ್ರ್ಯವನ್ನು ಎಂದಿಗೂ ಭಯ ಮತ್ತು ರಕ್ತಪಾತದ ಅಡಿಪಾಯದ ಮೇಲೆ ನಿರ್ಮಿಸಲು ಸಾಧ್ಯವಿಲ್ಲ.
ಭಯೋತ್ಪಾದನೆ ಮತ್ತು ಭಯೋತ್ಪಾದಕರ ನಿಜವಾದ ಆಯುಧವೇ ಭಯ. ಆದಾಗ್ಯೂ, ಆ ಭಯವನ್ನು ಹರಡುವ ಪ್ರಯತ್ನದಲ್ಲಿಯೂ ಸಹ, ಅವರು ಜನರಲ್ಲಿ ನಿರಾಶಾವಾದದ ಭಾವನೆಯನ್ನು ಬಿತ್ತಲು ವಿಫಲರಾಗಿದ್ದಾರೆ. ಇದಕ್ಕೆ ಭಾರತವೇ ಜೀವಂತ ಸಾಕ್ಷಿ. ಅದು 26/11ರ ಮುಂಬೈ ದಾಳಿಯಾಗಿರಲಿ, 2001ರ ಭಾರತೀಯ ಸಂಸತ್ತಿನ ಮೇಲಿನ ಆಕ್ರಮಣವಾಗಿರಲಿ, ಅಥವಾ ಇತ್ತೀಚಿನ ಪಹಲ್ಗಾಂ ದಾಳಿಯಾಗಿರಲಿ, ಪ್ರತಿ ಬಾರಿಯೂ ಭಾರತ ಇನ್ನಷ್ಟು ಎತ್ತರವಾಗಿ, ಇನ್ನಷ್ಟು ಬಲಿಷ್ಠವಾಗಿ ಮತ್ತು ಎಂದಿಗಿಂತಲೂ ಹೆಚ್ಚು ದೃಢಸಂಕಲ್ಪದಿಂದ ನಿಂತಿದೆ.
ಒಗ್ಗಟ್ಟಾಗಿ ನಿಂತಿರುವ ಭಾರತದ ಮುಂದೆ, ಭಯೋತ್ಪಾದನೆಯು ತನ್ನ ವಿಕೃತ ಸಿದ್ಧಾಂತ ಮತ್ತು ವಿಕಾರ ಮನಸ್ಥಿತಿಯಿಂದಾಗಿ ತನ್ನಿಂತಾನೇ ಪತನ ಹೊಂದುವುದು ನಿಶ್ಚಿತ. ಅದರ ಅಸ್ತಿತ್ವ, ಕೇವಲ ಒಂದು ದಿನದ್ದಾದರೂ, ನಮ್ಮ ಸಮಷ್ಟಿ ಪ್ರಜ್ಞೆ ಮತ್ತು ಶಾಂತಿಯೆಡೆಗಿನ ಬದ್ಧತೆಗೆ ಒಂದು ಗಂಭೀರ ಸವಾಲು. ಆದುದರಿಂದ, ಶಾಂತಿಯನ್ನು ಬಯಸುವ ಎಲ್ಲಾ ರಾಷ್ಟ್ರಗಳು ಮತ್ತು ಪ್ರಜೆಗಳು ಒಗ್ಗೂಡಿ ಈ ಪಿಡುಗನ್ನು ಸಮಗ್ರವಾಗಿ ನಿರ್ಮೂಲನೆ ಮಾಡಬೇಕಿದೆ.
ಇದನ್ನು ಹೇಗೆ ಮಾಡಬಹುದು ಎಂಬುದನ್ನು ಭಾರತ ತೋರಿಸಿದೆ.
ದಾಳಿ ಹಿಂದೆ ಪಾಕ್ ದುರುದ್ದೇಶ
ದಶಕಗಳಿಂದಲೂ ಭಾರತವು, ಪಾಕಿಸ್ತಾನ ಪ್ರೇರಿತ ಗಡಿಯಾಚೆಗಿನ ಭಯೋತ್ಪಾದನೆಗೆ ಬಲಿಯಾಗುತ್ತಾ ಬಂದಿದೆ. ಇತ್ತೀಚಿನ ಪಹಲ್ಗಾಂ ಮೇಲಿನ ದಾಳಿಯು, ಭಾರತದ ಅಖಂಡತೆಯನ್ನು ಛಿದ್ರಗೊಳಿಸಿ, ಜನರಲ್ಲಿ ಭೀತಿಯನ್ನು ಬಿತ್ತುವ ಒಂದು ಅಮಾನವೀಯ ಮತ್ತು ವಿಫಲ ಹುನ್ನಾರವಾಗಿತ್ತು. ಪ್ರವಾಸಿಗರನ್ನು ಹತ್ಯೆಗೈಯುವ ಮುನ್ನ, ಉಗ್ರರು ಅವರ ಧರ್ಮವನ್ನು ಕೇಳಿ ಖಚಿತಪಡಿಸಿಕೊಂಡ ರೀತಿನೀತಿಯಲ್ಲೇ ಅವರ ಕ್ರೂರ ಉದ್ದೇಶ ಸ್ಪಷ್ಟವಾಗಿತ್ತು. ಭಾರತದ ಸೌಹಾರ್ದತೆಗೆ ಕುಂದುಂಟು ಮಾಡುವ ಇದೇ ತೆರನಾದ ಪ್ರಯತ್ನ, ಪಾಕಿಸ್ತಾನವು ವಿವಿಧ ಧರ್ಮಗಳ ಪೂಜಾಸ್ಥಳಗಳ ಮೇಲೆ ಡ್ರೋನ್ ಮತ್ತು ಫಿರಂಗಿಗಳಿಂದ ದಾಳಿ ಮಾಡಿದಾಗಲೂ ವ್ಯಕ್ತವಾಗಿತ್ತು.
ಯಾವುದೇ ಧರ್ಮವೂ ಇಂತಹ ಹೇಯ ಕೃತ್ಯಗಳನ್ನು ಅನುಮೋದಿಸಲು ಸಾಧ್ಯವಿಲ್ಲ. ಭಯೋತ್ಪಾದಕರು ತಮ್ಮ ಅಮಾನವೀಯ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಧರ್ಮವನ್ನು ಕುತಂತ್ರದಿಂದ ದುರುಪಯೋಗಪಡಿಸಿಕೊಳ್ಳುತ್ತಾರೆ. ಧರ್ಮದ ಮುಸುಕಿನ ಹಿಂದೆ ಅಡಗಿಕೊಂಡು, ಭಯೋತ್ಪಾದಕರು ತಾವು ಎತ್ತಿಹಿಡಿಯುತ್ತೇವೆ ಎಂದು ಹೇಳಿಕೊಳ್ಳುವ ನಂಬಿಕೆಯನ್ನೇ ಗಂಭೀರವಾಗಿ ಹಾನಿಗೊಳಿಸುತ್ತಾರೆ. ಧರ್ಮದ ಈ ದುರ್ಬಳಕೆ ಆಕಸ್ಮಿಕವಲ್ಲ ಅಥವಾ ಕ್ಷಣಿಕ ಆವೇಶದಿಂದ ಕೂಡಿದ್ದಲ್ಲ; ಇದು ಉದ್ದೇಶಪೂರ್ವಕ ತಂತ್ರ, ಕ್ರೌರ್ಯಗಳಿಗೆ ಸುಳ್ಳು ನ್ಯಾಯಸಮ್ಮತತೆಯನ್ನು ಒದಗಿಸಲು ಎಚ್ಚರಿಕೆಯಿಂದ ರೂಪಿಸಲಾದ ತಂತ್ರಗಾರಿಕೆ.
ಭಯೋತ್ಪಾದನೆಯ ವಿಷಯದಲ್ಲಿ ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ ಎಂದು ಭಾರತವು ಸ್ಪಷ್ಟಪಡಿಸಿದೆ. ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ. ಪಾಕಿಸ್ತಾನದೊಂದಿಗಿನ ಯಾವುದೇ ಭವಿಷ್ಯದ ಮಾತುಕತೆಯು ಕೇವಲ ಭಯೋತ್ಪಾದನೆ ಮತ್ತು ಪಾಕ್-ಆಕ್ರಮಿತ ಕಾಶ್ಮೀರದ ಮೇಲೆ ಮಾತ್ರ ಕೇಂದ್ರೀಕೃತವಾಗಿರುತ್ತದೆ. ಅಲ್ಲದೆ, ಪಾಕಿಸ್ತಾನವು ಈ ವಿಷಯದಲ್ಲಿ ಗಂಭೀರವಾಗಿದ್ದರೆ, ನ್ಯಾಯವನ್ನು ಖಚಿತಪಡಿಸಲು ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅವರಂತಹ ವಿಶ್ವಸಂಸ್ಥೆಯಿಂದ ಘೋಷಿತರಾದ ಭಯೋತ್ಪಾದಕರನ್ನು ಹಸ್ತಾಂತರಿಸಬೇಕು.
ದೀರ್ಘಕಾಲದವರೆಗೆ, ನಾವು ಭಯೋತ್ಪಾದಕ ಕೃತ್ಯಗಳಿಗೆ ಕೇವಲ ಪ್ರತಿಕ್ರಿಯಿಸುತ್ತಾ ಬಂದಿದ್ದೆವು, ಆದರೆ ದೀರ್ಘಕಾಲೀನ ದೃಷ್ಟಿ ಮತ್ತು ಕಾರ್ಯತಂತ್ರಕ್ಕಾಗಿ ಹುಡುಕುತ್ತಿದ್ದೆವು. ನಮ್ಮ ಸಶಸ್ತ್ರ ಪಡೆಗಳಿಗೆ ಈ ಹಿಂದೆ ಕೇವಲ ರಕ್ಷಣಾತ್ಮಕ ಕ್ರಮಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ, ಸರ್ಜಿಕಲ್ ಸ್ಟ್ರೈಕ್ಗಳು (2016), ಬಾಲಾಕೋಟ್ ಸ್ಟ್ರೈಕ್ಗಳು (2019) ಮತ್ತು ಈಗ ಆಪರೇಷನ್ ಸಿಂದೂರ (2025) ಮೂಲಕ, ಭಾರತವು ಭಯೋತ್ಪಾದಕರು ಮತ್ತು ಪಾಕಿಸ್ತಾನದಲ್ಲಿರುವ ಅವರ ಪೋಷಕರ ಬಗೆಗಿನ ತನ್ನ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದಿದೆ.
ನಮಗೆ ಈಗ ಸ್ಪಷ್ಟವಾಗಿದೆ, ಕೇವಲ ನೈತಿಕ ಮತ್ತು ರಾಜಕೀಯ ಖಂಡನೆ ಹಾಗೂ ರಕ್ಷಣಾತ್ಮಕ ನಿಲುವು ಸಾಕಾಗುವುದಿಲ್ಲ ಎಂದು. ಭಯೋತ್ಪಾದಕರು ಎಲ್ಲಿದ್ದರೂ ಅವರನ್ನು ಮೊದಲೇ ನಿರ್ಮೂಲನೆ ಮಾಡುವುದು ಈಗ ನಮ್ಮ ನೀತಿಯಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯವನ್ನು ಈಗ ಯುದ್ಧದ ಕೃತ್ಯ ಎಂದು ಪರಿಗಣಿಸಲಾಗುತ್ತದೆ. ಭಾರತದ ಮೇಲೆ ಭಯೋತ್ಪಾದಕ ದಾಳಿಯಾದರೆ, ಭಯೋತ್ಪಾದನೆಗೆ ಬೆಂಬಲ ನೀಡುವ ಸರ್ಕಾರ ಮತ್ತು ಭಯೋತ್ಪಾದಕರ ನಡುವೆ ಯಾವುದೇ ಭೇದವಿಲ್ಲದೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯನಿರ್ವಹಿಸುವ ಭಯೋತ್ಪಾದಕರನ್ನು ನಿಯಂತ್ರಿಸಲು ವಿಫಲವಾದರೆ, ಆ ಅಸಮರ್ಥತೆಗೆ ಬೆಲೆ ತೆರಬೇಕಾಗುತ್ತದೆ.
ಜಗತ್ತಿಗೆ ಭಾರತದ ಸ್ಪಷ್ಟ ಸಂದೇಶ
ದೆಹಲಿಯಲ್ಲಿ ನಡೆದ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಗಟ್ಟುವ ಕುರಿತ 3ನೇ ‘ನೋ ಮನಿ ಫಾರ್ ಟೆರರ್’ ಸಚಿವರ ಸಮ್ಮೇಳನದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ‘ಒಂದೇ ಒಂದು ದಾಳಿ ಹೆಚ್ಚು, ಒಂದೇ ಒಂದು ಜೀವ ಹೋದರೂ ಹೆಚ್ಚು ಎಂದು ನಾವು ಪರಿಗಣಿಸುತ್ತೇವೆ. ಆದ್ದರಿಂದ, ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವವರೆಗೂ ನಾವು ವಿಶ್ರಮಿಸುವುದಿಲ್ಲ’ ಎಂದು ಹೇಳಿದರು. ಆಪರೇಷನ್ ಸಿಂದೂರ ಮೂಲಕ, ಭಾರತ ಸರ್ಕಾರ ಮತ್ತು ಸಶಸ್ತ್ರ ಪಡೆಗಳು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಇಡೀ ಜಗತ್ತಿಗೆ ಪ್ರದರ್ಶಿಸಿವೆ. ‘ಕೇಂದ್ರೀಕೃತ, ‘ಕೇಂದ್ರೀಕೃತ, ಅಳೆದು-ತೂಗಿದ ಮತ್ತು ಉದ್ವಿಗ್ನತೆ ಹೆಚ್ಚಿಸದ’ ಕಾರ್ಯಾಚರಣೆಯ ಮೂಲಕ, ಭಾರತದ ವಿರುದ್ಧದ ಭಯೋತ್ಪಾದಕ ದಾಳಿಗಳನ್ನು ಸಂಘಟಿಸಲಾದ ಮತ್ತು ನಿರ್ದೇಶಿಸಲಾದ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ.
ಸೈನಿಕ ಕಾರ್ಯಾಚರಣೆಗಳು ಭಯೋತ್ಪಾದನೆಯ ವಿರುದ್ಧ ಅವಶ್ಯಕವಾದರೂ, ಅವು ಮಾತ್ರ ಸಾಲದು ಎಂದು ನಮಗೆ ತಿಳಿದಿದೆ. ಭಯೋತ್ಪಾದಕ ಮೂಲಸೌಕರ್ಯದ ಅಡಿಪಾಯಗಳನ್ನೇ ನಾಶಪಡಿಸುವುದು ಅತ್ಯಗತ್ಯ. ಪಾಕಿಸ್ತಾನವು ಭಯೋತ್ಪಾದನೆಯನ್ನು ಒಂದು ಸಾಧನವಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ, ಭಾರತವು ಅದನ್ನು ರಾಜತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಯಶಸ್ವಿಯಾಗಿ ಪ್ರತ್ಯೇಕಿಸಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ವಿಶ್ವಾಸಾರ್ಹವಾಗಿ ಮತ್ತು ಶಾಶ್ವತವಾಗಿ ತ್ಯಜಿಸುವವರೆಗೂ ನಾವು ಸಿಂಧೂ ನದಿ ಒಪ್ಪಂದವನ್ನು ‘ಸ್ಥಗಿತಗೊಳಿಸಿದ್ದೇವೆ’. ಈ ನಿರ್ಧಾರವು ಪಾಕಿಸ್ತಾನಕ್ಕೆ ಮಹತ್ವದ ಪರಿಣಾಮಗಳನ್ನು ಬೀರಲಿದೆ. ಏಕೆಂದರೆ, ಪಾಕಿಸ್ತಾನವು ತನ್ನ 16 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಶೇಕಡ 80 ಮತ್ತು ಒಟ್ಟು ನೀರಿನ ಬಳಕೆಯ ಶೇ.93 ಸಿಂಧೂ ನದಿ ವ್ಯವಸ್ಥೆಯನ್ನು ಅವಲಂಬಿಸಿದೆ. ಈ ನದಿ ಪಾಕಿಸ್ತಾನದ 237 ದಶಲಕ್ಷ ಜನರಿಗೆ ಆಧಾರವಾಗಿದ್ದು, ಅದರ ಜಿಡಿಪಿಯ ಕಾಲು ಭಾಗಕ್ಕೆ ಕೊಡುಗೆ ನೀಡುತ್ತದೆ.
ಭಯೋತ್ಪಾದನೆ ಕೇವಲ ಭಾರತದ ಸಮಸ್ಯೆಯಲ್ಲ; ಇದು ಜಾಗತಿಕ ಪಿಡುಗು. ಗ್ಲೋಬಲ್ ಟೆರರಿಸಂ ಇಂಡೆಕ್ಸ್ (ಜಿಟಿಐ) ಪ್ರಕಾರ, ಭಯೋತ್ಪಾದಕ ಘಟನೆಗಳನ್ನು ಎದುರಿಸುತ್ತಿರುವ ದೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಭಯೋತ್ಪಾದಕ ಜಾಲಗಳನ್ನು ಸಮರ್ಥವಾಗಿ ಧ್ವಂಸಗೊಳಿಸಲು, ಮೂಲಭೂತವಾದವನ್ನು ಎದುರಿಸಲು ಮತ್ತು ಮುಂದಿನ ಪೀಳಿಗೆಗೆ ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು, ನಾವು ಬಿಡಿಬಿಡಿಯಾದ ಪ್ರಯತ್ನಗಳನ್ನು ಮೀರಿ ಹೋಗಬೇಕಾಗಿದೆ. ಬದಲಾಗಿ, ನಾವು ಒಂದು ತತ್ವಬದ್ಧ, ಸಮಗ್ರ, ಸ್ಥಿರ ಮತ್ತು ಸಮನ್ವಯದ ಜಾಗತಿಕ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು. ಇದು ಐದು ಪ್ರಮುಖ ಕ್ರಮಗಳನ್ನು ಒಳಗೊಂಡಿದೆ.
‘ಭಯೋತ್ಪಾದನೆ’ಯ ವ್ಯಾಖ್ಯಾನ ಅಗತ್ಯ
ಮೊದಲಿಗೆ, ‘ಭಯೋತ್ಪಾದನೆ’ ಪದವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು. ಭಯೋತ್ಪಾದನೆ ಎಂದರೇನು ಎಂಬುದರ ಕುರಿತು ಇನ್ನೂ ಜಾಗತಿಕ ಒಮ್ಮತವಿಲ್ಲ. ಭಾರತದ ಪ್ರಸ್ತಾವನೆಯ ಆಧಾರದ ಮೇಲೆ ವಿಶ್ವಸಂಸ್ಥೆಯಲ್ಲಿನ ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧದ ಸಮಗ್ರ ಒಪ್ಪಂದವು ಈ ವ್ಯಾಖ್ಯಾನಕ್ಕೆ ಹತ್ತಿರದಲ್ಲಿದೆ. ಕೇವಲ ಶಬ್ದಾರ್ಥದ ಭಿನ್ನಾಭಿಪ್ರಾಯಗಳು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಅಡ್ಡಿಯಾಗಬಾರದು; ಭಯೋತ್ಪಾದಕ ಕೃತ್ಯಗಳನ್ನು ತನಿಖೆ ಮಾಡಲು, ಕಾನೂನು ಕ್ರಮ ಜರುಗಿಸಲು, ಅಥವಾ ವಿದೇಶದಿಂದ ಅವರನ್ನು ಹಸ್ತಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಸ್ಪಷ್ಟ ವ್ಯಾಖ್ಯಾನದ ಅಗತ್ಯವಿದೆ.
ಎರಡನೆಯದಾಗಿ, ನಾವು ಕೇವಲ ಭಯೋತ್ಪಾದಕ ಸಂಘಟನೆಗಳ ಹಣಕಾಸು ಮೂಲಗಳನ್ನು ಮಾತ್ರವಲ್ಲದೆ, ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವ ರಾಷ್ಟ್ರಗಳ ಆರ್ಥಿಕ ವ್ಯವಹಾರಗಳನ್ನೂ ಸ್ಥಗಿತಗೊಳಿಸಬೇಕು. ಪಾಕಿಸ್ತಾನವು ಬೇಲ್ ಔಟ್ ಪ್ಯಾಕೇಜ್ಗಳನ್ನು ದುರುಪಯೋಗಪಡಿಸಿಕೊಂಡ ಇತಿಹಾಸವನ್ನು ಹೊಂದಿದ್ದು, ರಾಜ್ಯ-ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಸಾಲದ ಹಣಕಾಸನ್ನು ಬಳಸುತ್ತದೆ ಎಂಬುದನ್ನು ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ದಾನಿ ದೇಶಗಳು ಅರಿತುಕೊಳ್ಳಬೇಕು. ಐಎಂಎಫ್ಗೆ ನೀಡಿದ ಹೇಳಿಕೆಯಲ್ಲಿ ಭಾರತವು ಸ್ಪಷ್ಟಪಡಿಸಿದಂತೆ, ‘ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಬೆಂಬಲಕ್ಕೆ ಬಹುಮಾನ ನೀಡುವುದು ಜಾಗತಿಕ ಸಮುದಾಯಕ್ಕೆ ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ, ಹಣಕಾಸು ಸಂಸ್ಥೆಗಳು ಮತ್ತು ದಾನಿಗಳಿಗೆ ಪ್ರತಿಷ್ಠೆಯ ಅಪಾಯಗಳನ್ನು ತರುತ್ತದೆ ಮತ್ತು ಜಾಗತಿಕ ಮೌಲ್ಯಗಳನ್ನು ಅಣಕಿಸುತ್ತದೆ’.
ಪಾಕಿಸ್ತಾನಕ್ಕೆ ನೀಡಿದ ಹಣವು ಅಸ್ಥಿರ ಜಗತ್ತನ್ನು ಸೃಷ್ಟಿಸಲು ಕೆಲಸ ಮಾಡುವ ಸೇನಾ-ಭಯೋತ್ಪಾದಕ ಸಂಕೀರ್ಣದ ಕೈ ಸೇರುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ, ಪಾಕಿಸ್ತಾನವನ್ನು ಮತ್ತೆ ಎಫ್ಎಟಿಎಫ್ನಿಂದ ಗ್ರೇ ಲಿಸ್ಟ್ ಮಾಡಬೇಕು ಮತ್ತು ಪಾಕಿಸ್ತಾನವು ತನ್ನ ಭಯೋತ್ಪಾದಕ ಕಾರ್ಯಾಚರಣೆಗಳನ್ನು ವಿಶ್ವಾಸಾರ್ಹವಾಗಿ ಮತ್ತು ಬದಲಾಯಿಸಲಾಗದಂತೆ ತ್ಯಜಿಸುವವರೆಗೂ ಯಾವುದೇ ಹಣಕಾಸು ನೆರವನ್ನು ಕಡಿತಗೊಳಿಸಬೇಕು. ತಮ್ಮ ಪ್ರದೇಶದಲ್ಲಿ ಭಯೋತ್ಪಾದಕರನ್ನು ಆಶ್ರಯಿಸುವ ಇತರ ದೇಶಗಳ ವಿರುದ್ಧವೂ ಇದೇ ಮಾನದಂಡವನ್ನು ಅನ್ವಯಿಸಬೇಕು.
ಮೂರನೆಯದಾಗಿ, ಬಹಳ ಹಿಂದಿನಿಂದಲೂ ತಿಳಿದಿದ್ದರೂ, ಪಾಕಿಸ್ತಾನದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಶಕ್ತಿಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಈಗ ಇನ್ನಷ್ಟು ಸ್ಪಷ್ಟವಾಗಿದೆ. ಇತ್ತೀಚೆಗೆ ಭಯೋತ್ಪಾದಕರಿಗೆ ಸೇನಾ ಸಮವಸ್ತ್ರಧಾರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ, ರಾಜ್ಯ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಿದಾಗ ಇದು ಸ್ಪಷ್ಟವಾಯಿತು. ಪಾಕಿಸ್ತಾನದಲ್ಲಿ, ಅಣ್ವಸ್ತ್ರಗಳು ಸರ್ಕಾರೇತರ ಶಕ್ತಿಗಳ ಕೈ ಸೇರಬಹುದು ಎಂಬ ನಿರಂತರವಾದ ಬೆದರಿಕೆ ಇದೆ. ಅಂತಾರಾಷ್ಟ್ರೀಯ ಸಮುದಾಯವು ಈ ಗಂಭೀರ ಅಪಾಯವನ್ನು ಒಪ್ಪಿಕೊಳ್ಳಲೇಬೇಕು, ಮತ್ತು ಪಾಕಿಸ್ತಾನದ ಪರಮಾಣು ಅಸ್ತ್ರಗಳನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (ಐಎಇಎ) ಮೇಲ್ವಿಚಾರಣೆಗೆ ಒಳಪಡಿಸಬೇಕು.
ನಾಲ್ಕನೆಯದಾಗಿ, ಪರೋಕ್ಷ ಯುದ್ಧವು ಅಪಾಯಕಾರಿ ಬೆದರಿಕೆಯಾಗಿದೆ. ತಮ್ಮ ನೆರೆಹೊರೆಯನ್ನು ಅಸ್ಥಿರಗೊಳಿಸಲು ಪರ್ಯಾಯಗಳನ್ನು ಬಳಸುವ ದೇಶಗಳನ್ನು ಹೆಸರಿಸುವ ಅಗತ್ಯವಿದೆ. ಭಯೋತ್ಪಾದಕ ಕೃತ್ಯಗಳಿಗೆ ನೀಡುವ ಪ್ರತಿಕ್ರಿಯೆಗಳ ವ್ಯಾಪ್ತಿ ಮತ್ತು ತೀವ್ರತೆಯು, ಅವು ಎಲ್ಲಿ ಸಂಭವಿಸುತ್ತವೆ ಅಥವಾ ಬಲಿಪಶುಗಳ ರಾಷ್ಟ್ರೀಯತೆ ಯಾವುದು ಎಂಬುದನ್ನು ಅವಲಂಬಿಸಿರಬಾರದು. ದೇಶಗಳು ತಮ್ಮ ಅನುಕೂಲ ಅಥವಾ ಹಿತಾಸಕ್ತಿಗಳಿಗೆ ಅನುಗುಣವಾಗಿ ಯಾವ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸಬೇಕು ಎಂದು ಆಯ್ದುಕೊಂಡಾಗ, ಅದು ಸಾಮೂಹಿಕ ಪ್ರತಿಕ್ರಿಯೆಯನ್ನು ದುರ್ಬಲಗೊಳಿಸುತ್ತದೆ, ಅಪರಾಧಿಗಳಿಗೆ ಧೈರ್ಯ ತುಂಬುತ್ತದೆ ಮತ್ತು ಅಂತಹ ಕೃತ್ಯಗಳಿಗೆ ಮೌನ ಸಮ್ಮತಿಯನ್ನು ನೀಡುತ್ತದೆ.
ಐದನೆಯದಾಗಿ, ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಸುರಕ್ಷಿತ ನೆಲೆಗಳು ತಮ್ಮ ಅಂತಾರಾಷ್ಟ್ರೀಯ ವ್ಯಾಪ್ತಿ ಮತ್ತು ಕೃತಕ ಬುದ್ಧಿಮತ್ತೆ, ಸ್ವಾಯತ್ತ ವ್ಯವಸ್ಥೆಗಳು, ಆಗ್ಮೆಂಟೆಡ್ ರಿಯಾಲಿಟಿ, ಜೈವಿಕ ತಂತ್ರಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನದಂತಹ ಉದಯೋನ್ಮುಖ ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ ವಿಶ್ವಾದ್ಯಂತ ಪರಿಣಾಮಗಳನ್ನು ಹೊಂದಿವೆ. ಭಯೋತ್ಪಾದಕರು ಈ ದುರ್ಬಲತೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದರಿಂದ ಉಂಟಾಗುವ ಬೆದರಿಕೆಗಳನ್ನು ನಿಭಾಯಿಸಲು ಜಾಗತಿಕ ಸಹಕಾರ ಅತ್ಯಗತ್ಯ. ಎಲ್ಲಾ ದೇಶಗಳು ಒಗ್ಗೂಡಿ ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧದ ಸಮಗ್ರ ಒಪ್ಪಂದಕ್ಕೆ ಸಹಿ ಹಾಕಲು ಇದು ಸಮಯ.
ಶಾಂತಿಪ್ರಿಯ ರಾಷ್ಟ್ರಗಲು ಕೈಜೋಡಿಸಲಿ
ಇಂತಹ ಒಪ್ಪಂದವನ್ನು ಸಮರ್ಥಿಸುತ್ತಾ, 9/11 ದಾಳಿಗಳ ನಂತರ, ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಭಯೋತ್ಪಾದನೆಗೆ ಯಾವುದೇ ಸೈದ್ಧಾಂತಿಕ, ರಾಜಕೀಯ ಅಥವಾ ಧಾರ್ಮಿಕ ಸಮರ್ಥನೆಯನ್ನು ನಾವು ದೃಢವಾಗಿ ನಿರಾಕರಿಸಬೇಕು’ ಎಂದು ಹೇಳಿದ್ದರು. ರವೀಂದ್ರನಾಥ ಠಾಕೂರರ ಮಾತುಗಳನ್ನು ಉಲ್ಲೇಖಿಸುತ್ತಾ ಅವರು, ‘ಇನ್ನು ಮುಂದೆ, ಪ್ರತಿಯೊಂದು ದೇಶವೂ ತನ್ನ ಸ್ವಂತ ಸುರಕ್ಷತೆಯ ಬಗ್ಗೆ ಹೊಂದಿರುವ ಕಾಳಜಿಯು ಇಡೀ ವಿಶ್ವದ ಕಲ್ಯಾಣವನ್ನೂ ಒಳಗೊಳ್ಳಬೇಕು’ ಎಂದು ಹೇಳಿದ್ದರು.
ಭಯೋತ್ಪಾದನೆಯನ್ನು ಅದರ ಎಲ್ಲ ರೂಪಗಳಲ್ಲಿ ನಿರ್ಮೂಲನೆ ಮಾಡುವ ತನ್ನ ಧ್ಯೇಯದಲ್ಲಿ ಭಾರತ ದೃಢವಾಗಿ ನಿಂತಿದೆ.
ಎಲ್ಲಾ ಶಾಂತಿಪ್ರಿಯ ರಾಷ್ಟ್ರಗಳು ನಮ್ಮೊಂದಿಗೆ ಕೈಜೋಡಿಸಬೇಕೆಂದು ನಾವು ಮನವಿ ಮಾಡುತ್ತೇವೆ.