ಕುಂಭಮೇಳದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಮತ್ತೊಬ್ಬ ಶಂಕಿತ ಖಾಲ್ಸಾ ಉಗ್ರ ಅರೆಸ್ಟ್‌

| N/A | Published : Mar 07 2025, 12:46 AM IST / Updated: Mar 07 2025, 07:14 AM IST

Kumbhamela

ಸಾರಾಂಶ

ಅಯೋಧ್ಯೆ ರಾಮಮಂದಿರ ಮತ್ತು ಗುಜರಾತ್‌ನ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಬೆನ್ನಲ್ಲೆ, ಕುಂಭಮೇಳದ ಮೇಲೆ ದಾಳಿಗೆ ಯೋಜಿಸಿದ ಮತ್ತೊಬ್ಬ ಶಂಕಿತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಲಖನೌ: ಅಯೋಧ್ಯೆ ರಾಮಮಂದಿರ ಮತ್ತು ಗುಜರಾತ್‌ನ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಬೆನ್ನಲ್ಲೆ, ಕುಂಭಮೇಳದ ಮೇಲೆ ದಾಳಿಗೆ ಯೋಜಿಸಿದ ಮತ್ತೊಬ್ಬ ಶಂಕಿತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಲಜರ್ ಮಸೀಹ್‌ ಬಂಧಿತ ಆರೋಪಿ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಅಮೆರಿಕದ ಖಲಿಸ್ತಾನಿ ಉಗ್ರರ ಜೊತೆ ಸಂಪರ್ಕ ಹೊಂದಿದ್ದು, ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಪಂಜಾಬ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಕೌಶಂಬಿಯಲ್ಲಿ ಬುಧವಾರ ರಾತ್ರಿ ಲಜರ್‌ನನ್ನು ಬಂಧಿಸಲಾಗಿದೆ.

ಕುಂಭ ಸ್ಫೋಟಕ್ಕೆ ಸಂಚು:

ಈ ಕುರಿತು ಮಾಹಿತಿ ನೀಡಿದ ಉ.ಪ್ರ. ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್, ‘ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಲಜರ್‌ ದೊಡ್ಡ ಭಯೋತ್ಪಾದಕ ದಾಳಿಯನ್ನು ಯೋಜಿಸಿದ್ದ. ಆದರೆ ತೀವ್ರವಾದ ಭದ್ರತಾ ತಪಾಸಣೆ ಇದ್ದ ಕಾರಣ ಆತನ ಯೋಜನೆ ವಿಫಲವಾಗಿತ್ತು. ಆ ಬಳಿಕ ಈತ ನಕಲಿ ದಾಖಲೆ ಬಳಸಿ ಪೋರ್ಚ್‌ಗಲ್‌ಗೆ ಪರಾರಿಯಾಗಲು ಸಂಚು ರೂಪಿಸಿದ್ದ’ ಎಂದು ತಿಳಿಸಿದ್ದಾರೆ.

ಕುಖ್ಯಾತ ಉಗ್ರ:

ಬಂಧಿತ ಲಜರ್‌, ಜರ್ಮನಿ ಮೂಲದ ಖಾಲ್ಸಾ ಇಂಟರ್‌ನ್ಯಾಷನಲ್ ಸಂಘಟನೆಯ ಮುಖ್ಯಸ್ಥ ಸ್ವರ್ಣ ಸಿಂಗ್ ಅಲಿಯಾಸ್ ಜೀವನ್ ಫೌಜಿ ಪರವಾಗಿ ಕೆಲಸ ಮಾಡುತ್ತಿದ್ದ. ಪಂಜಾಬ್‌ನ ಮಾದಕವಸ್ತು ಮತ್ತು ಸುಲಿಗೆ ಜಾಲದಲ್ಲಿ ತೊಡಗಿಸಿಕೊಂಡು, ಉಗ್ರ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತಿದ್ದ. ಪಂಜಾಬ್‌ನ ಕುರ್ಲಿಯಾನ್ ಗ್ರಾಮದವನಾದ ಈತ ಈ ಹಿಂದೆಯೂ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತು ಕಳ್ಳಸಾಗಣೆ ಮಾಡಿ ಜೈಲುಪಾಲಾಗಿದ್ದ. ಈತನಿಗೆ ಪಾಕಿಸ್ತಾನದ ಐಎಸ್‌ಐ, ಅಮೆರಿಕದ ಖಲಿಸ್ತಾನಿ ಉಗ್ರರ ಜತೆ ಸಂಪರ್ಕವಿರುವುದು ಕಂಡುಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ವಶ:

ಬಂಧಿತನಿಂದ ಕೆಲವು ಸ್ಫೋಟಕಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ 3 ಹ್ಯಾಂಡ್ ಗ್ರೆನೇಡ್‌ಗಳು, 2 ಡಿಟೋನೇಟರ್‌ಗಳು, 1 ವಿದೇಶಿ ನಿರ್ಮಿತ ಪಿಸ್ತೂಲ್ ಮತ್ತು 13 ಕಾಟ್ರಿಜ್‌ಗಳು ಸೇರಿವೆ. ಫಾಜಿಯಾಬಾದ್ ವಿಳಾಸವಿರುವ ಆಧಾರ್ ಕಾರ್ಡ್, ಮೊಬೈಲ್ ಫೋನ್ ಮತ್ತು ಸಿಮ್ ಅನ್ನೂ ವಶಡಿಸಿಕೊಳ್ಳಲಾಗಿದೆ.

ಆಸ್ಪತ್ರೆಯಿಂದ ಪರಾರಿ:

ಈ ಹಿಂದೆ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಬಂಧಿತನಾಗಿದ್ದ ಲಜರ್‌, ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ ವೇಳೆ 2024ರ ಸೆಪ್ಟೆಂಬರ್ 24ರಂದು ಪಂಜಾಬ್‌ನ ಜೈಲಿನಿಂದ ತಪ್ಪಿಸಿಕೊಂಡಿದ್ದ.