ಇಸ್ಲಾಂ ಧರ್ಮ ಅವಹೇಳನ ಆರೋಪಕ್ಕಾಗಿ ಬಾಂಗ್ಲಾದ ಭಾಲುಕ ಎಂಬಲ್ಲಿ ಬರ್ಬರವಾಗಿ ಹತ್ಯೆಯಾದ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್‌ ಹಾಗೆ ಮಾಡಿದ್ದ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಮತಾಂಧರ ಬಣ್ಣ ಮತ್ತೊಮ್ಮೆ ಬಯಲಾಗಿದೆ.

ಧರ್ಮನಿಂದನೆ ಯಾರೂ ಕೇಳಿಲ್ಲ, ಎಲ್ಲೂ ಪೋಸ್ಟ್‌ ಮಾಡಿಲ್ಲ

ಬಾಂಗ್ಲಾದ ಕ್ರೂರ ಮತಾಂಧರ ಬಣ್ಣ ಮತ್ತೊಮ್ಮೆ ಬಯಲುಢಾಕಾ: ಇಸ್ಲಾಂ ಧರ್ಮ ಅವಹೇಳನ ಆರೋಪಕ್ಕಾಗಿ ಬಾಂಗ್ಲಾದ ಭಾಲುಕ ಎಂಬಲ್ಲಿ ಬರ್ಬರವಾಗಿ ಹತ್ಯೆಯಾದ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್‌ ಹಾಗೆ ಮಾಡಿದ್ದ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಮತಾಂಧರ ಬಣ್ಣ ಮತ್ತೊಮ್ಮೆ ಬಯಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭದ್ರತಾ ಪಡೆಯ ಅಧಿಕಾರಿಯೊಬ್ಬರು, ‘ದೀಪು, ಇಸ್ಲಾಂ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುತ್ತಿದ್ದುದನ್ನು ಯಾರೊಬ್ಬರೂ ಪ್ರತ್ಯಕ್ಷವಾಗಿ ಕೇಳಿಸಿಕೊಂಡಿಲ್ಲ. ಫೇಸ್‌ಬುಕ್‌ನಲ್ಲೂ ಆತ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಯಾವುದೇ ಪೋಸ್ಟ್‌ ಮಾಡಿದ್ದು ಸ್ಥಳೀಯರಾಗಲೀ ಅಥವಾ ಆತ ಕೆಲಸ ಮಾಡುತ್ತಿದ್ದ ಜವಳಿ ಕಾರ್ಖಾನೆಯ ಇತರೆ ಉದ್ಯೋಗಿಗಳು ಕೂಡ ಆತನ ಬಾಯಿಂದ ಧರ್ಮನಿಂದನೆಯ ಮಾತು ಕೇಳಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಕಾರ್ಖಾನೆ ಉಳಿವಿಗೆ ದೀಪು ಔಟ್‌:

ಕಟ್ಟರ್‌ ಇಸ್ಲಾಮಿಕ್‌ ನಾಯಕ ಉಸ್ಮಾನ್‌ ಹದಿ ಹತ್ಯೆ ಬೆನ್ನಲ್ಲೇ ಬಾಂಗ್ಲಾ ಉದ್ವಿಗ್ನವಾಗಿತ್ತು. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮುಸಲ್ಮಾನರ ಕೋಪ ಭುಗಿಲೆದ್ದ ಕಾರಣ, ತಮ್ಮಲ್ಲಿರುವ ಹಿಂದೂ ನೌಕರ ಕಾರ್ಖಾನೆಗೆ ಮುಳುವಾಗದಿರಲಿ ಎಂಬ ಉದ್ದೇಶದಿಂದ ದೀಪುವನ್ನು ಕಾರ್ಖಾನೆಯಿಂದ ಹೊರಹಾಕಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮನಿಂದನೆಯ ಆರೋಪ ಹೊರಿಸಿ ದೀಪುವನ್ನು ಸಾರ್ವಜನಿಕವಾಗಿ ಹೊಡೆದು ಕೊಂದು, ಮೃತದೇಹವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಲಾಗಿತ್ತು.

===

ದಾಸ್‌ ಹತ್ಯೆ ಅಪರಾಧಿಗಳಿಗೆ ಶಿಕ್ಷೆ ಆಗಲಿ: ಭಾರತ ತಾಕೀತು

ಹಿಂದೂ ಹತ್ಯೆ ಬಗ್ಗೆ ಮೌನ ಮುರಿದ ವಿದೇಶಾಂಗ ಸಚಿವಾಲಯ

ದಿಲ್ಲಿಯ ಬಾಂಗ್ಲಾ ರಾಯಭಾರ ಕಚೇರಿ ಮೇಲೆ ದಾಳಿ ಸುದ್ದಿ ಸುಳ್ಳು

ನವದೆಹಲಿ: ದೀಪು ಚಂದ್ರ ದಾಸ್‌ ಎಂಬ ಹಿಂದೂ ಯುವಕನನ್ನು ಭೀಕರವಾಗಿ ಹತ್ಯೆಗೈದ ವ್ಯಕ್ತಿಗಳು ನ್ಯಾಯಾಲಯಟ ಕಟಕಟೆ ಏರುವುದನ್ನು ಬಾಂಗ್ಲಾದೇಶ ಸರ್ಕಾರ ಖಚಿತಪಡಿಸಬೇಕು ಎಂದು ನೆರೆ ದೇಶಕ್ಕೆ ಭಾರತ ತಾಕೀತು ಮಾಡಿದೆ.ಈ ಕುರಿತು ಭಾನುವಾರ ಇಲ್ಲಿ ಪ್ರತಿಕ್ರಿಯೆ ನೀಡಿದ ವಿದೇಶಾಂಗ ವ್ಯವಹಾಹಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್‌, ‘ಬಾಂಗ್ಲಾ ಪರಿಸ್ಥಿತಿಯ ಬಗ್ಗೆ ಭಾರತ ತೀವ್ರ ನಿಗಾ ಇಟ್ಟಿದೆ. ದಾಸ್ ಹತ್ಯೆಯ ಅಪರಾಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಬೇಕೆಂದು ನಾವು ಒತ್ತಾಯಿಸಿದ್ದೇವೆ’ ಎಂದರು.

ಇದೆ ವೇಳೆ ದಾಸ್ ಹತ್ಯೆ ಬಳಿಕ ದೆಹಲಿಯಲ್ಲಿನ ಬಾಂಗ್ಲಾದೇಶ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿದೆ ಎಂಬ ಬಾಂಗ್ಲಾ ಮಾಧ್ಯಮಗಳ ವರದಿಯನ್ನು ಜೈಸ್ವಾಲ್‌ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ‘ತನ್ನ ನೆಲದಲ್ಲಿರುವ ವಿದೇಶಿ ಕಚೇರಿಗಳ ರಕ್ಷಣೆಗೆ ಭಾರತ ಸದಾ ಬದ್ಧವಾಗಿದೆ. ಡಿ.20ರಂದು ದೆಹಲಿಯ ಬಾಂಗ್ಲಾ ಹೈಕಮಿಷನ್ ಮುಂದೆ ಸುಮಾರು 20-25 ಯುವಕರು ಜಮಾಯಿಸಿ ದೀಪು ಅವರ ಹತ್ಯೆಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು ಮತ್ತು ಬಾಂಗ್ಲಾದ ಅಲ್ಪಸಂಖ್ಯಾತರ ರಕ್ಷಣೆಗಾಗಿ ಕರೆ ನೀಡಿದರು. ಪೊಲೀಸರು ಕೆಲವೇ ನಿಮಿಷಗಳಲ್ಲಿ ಗುಂಪನ್ನು ಚದುರಿಸಿದರು. ಈ ಘಟನೆಯ ವಿಡಿಯೋ ಸಾಕ್ಷ್ಯಗಳು ಸಾರ್ವಜನಿಕವಾಗಿ ಲಭ್ಯವಿವೆ’ ಎಂದರು.

==

ಬಾಂಗ್ಲಾ: ಕೈಲಿದ್ದ ಕೆಂಪು ದಾರ ನೋಡಿ ಮತ್ತೊಬ್ಬ ಹಿಂದೂ ಮೇಲೆ ಹಲ್ಲೆ

ಢಾಕಾ: ಉದ್ವಿಗ್ನ ಬಾಂಗ್ಲಾದಲ್ಲಿ ದೀಪು ಚಂದ್ರದಾಸ್‌ ಎಂಬ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ ಬೆನ್ನಲ್ಲೇ, ಗೋಬಿಂದ್‌ ಬಿಸ್ವಾಸ್‌ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಇದಕ್ಕೆ ಕಾರಣ ಆತನ ಕೈಲಿದ್ದ ಕೆಂಪು ದಾರ(ತಾಯತ) ಮತ್ತು ಆತ ಭಾರತದ ಗುಪ್ತಚರ ಸಂಸ್ಥೆ ರಾ ಏಜೆಂಟ್‌ ಎಂಬ ಸುಳ್ಳು ಆರೋಪ.ಹಿಂದೂಗಳು ಸಾಮಾನ್ಯವಾಗಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವನ್ನು ತಳ್ಳುಗಾಡಿ ಚಾಲಕ ಬಿಸ್ವಾಸ್‌ನ ಕೈಯ್ಯಲ್ಲಿ ಗಮನಿಸಿದ ಜನ, ಆತನ ಮೇಲೆ ದಾಳಿ ನಡೆಸಿದ್ದಾರೆ. ಜತೆಗೆ ಆತ ರಾ ಏಜೆಂಟ್‌ ಎಂಬ ಸುದ್ದಿಯೂ ಹಬ್ಬಿದ್ದು, ಇದರಿಂದ ಇನ್ನೂ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಇದರಿಂದ ಅವರ ಕುತ್ತಿಗೆ ಮತ್ತು ಎದೆ ಭಾಗಕ್ಕೆ ಗಾಯಗಳಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಒಬ್ಬಾತ ಪೊಲೀಸರ ಕೈಯ್ಯಿಂದ ಬಿಸ್ವಾಸ್‌ನನ್ನು ರಕ್ಷಿಸಲು ಮುಂದಾಗುವುದನ್ನೂ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಾಣಬಹುದು.

==

ಬಾಂಗ್ಲಾ ಮತಾಂಧರ ಕ್ರೌರ್ಯಕ್ಕೆ7 ವರ್ಷದ ಬಾಲಕಿ ಬಲಿ

ಮಾಜಿ ಪ್ರಧಾನಿ ಖಲೀದಾ ಪಕ್ಷದ ನಾಯಕನ ಮನೆಗೆ ಬೆಂಕಿ

ಮನೆ ಬಾಗಿಲು ಮುಚ್ಚಿ ಬೆಂಕಿ । ನಾಲ್ವರು ಪಾರು, ಬಾಲೆ ಬಲಿ

ಢಾಕಾ: ಕಟ್ಟರ್‌ ಮುಸ್ಲಿಂ ಯುವನಾಯಕ ಉಸ್ಮಾನ್‌ ಹದಿ ಹತ್ಯೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆಗೈದಿದ್ದ ಮತಾಂಧರು, ಇದೀಗ 7 ವರ್ಷದ ಪುಟ್ಟ ಬಾಲಕಿಯ ಜೀವ ಬಲಿ ಪಡೆದಿದ್ದಾರೆ.ಕಳೆದ 2-3 ದಿನಗಳಿಂದ ದೇಶವ್ಯಾಪಿ ಹಿಂಸಾಚಾರ ನಡೆಸುತ್ತಿರುವ ಮತಾಂಧರು ಮತ್ತು ದುಷ್ಕರ್ಮಿಗಳು, ಭಾನುವಾರ ತಡರಾತ್ರಿ ಮಾಜಿ ಪ್ರಧಾನಿ ಖಲೀದಾ ಜಿಯಾ ಪಕ್ಷದ ನಾಯಕ ಬೇಲಾಲ್‌ ಹೊಸೇನ್‌ ಎಂಬುವವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆಯ ಬಾಗಿಲಿಗೆ ಹೊರಗಿನಿಂದ ಚಿಲುಕ ಹಾಕಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್‌ ಬೆಲಾಲ್‌ ತಮ್ಮ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಬಾಗಿಲು ಒಡೆದು ಹೊರಬಂದಿದ್ದಾರೆ. ಆದರೆ ಈ ವೇಳೆ ತೀವ್ರವಾಗಿ ಗಾಯಗೊಂಡ ಇನ್ನೊಬ್ಬ 7 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ

ಕಳೆದ ವರ್ಷ ಹಸೀನಾ ವಿರುದ್ಧ ನಡೆದಿದ್ದ ದಂಗೆ ವೇಳೆಯೂ ಇದೇ ರೀತಿಯ ರಾಜಕೀಯ ಹಿಂಸಾಚಾರಕ್ಕೆ ಬಿಎನ್‌ಪಿ ಮತ್ತು ಅವಾಮಿ ಲೀಗ್‌ ಪಕ್ಷದ ಹಲವು ನಾಯಕರು, ಕಾರ್ಯಕರ್ತರು ಬಲಿಯಾಗಿದ್ದರು.