ಉಗ್ರವಾದ ಕೇಸಿನಲ್ಲಿ ದಿಲ್ಲಿಯ ತಿಹಾರ್‌ ಜೈಲಿನಲ್ಲಿರುವ ಎಂಜಿನಿಯರ್ ರಶೀದ್‌ ಅಲಿಯಾಸ್‌ ಶೇಖ್ ಅಬ್ದುಲ್ ರಶೀದ್‌ ಹಾಗೂ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ ಖಲಿಸ್ತಾನಿ ಪರ ಪ್ರಚಾರಕ ಹಾಗೂ ನಿಯೋಜಿತ ಸಂಸದ ಅಮೃತ್‌ಪಾಲ್‌ ಸಿಂಗ್‌ ಶುಕ್ರವಾರ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ನವದೆಹಲಿ: ಉಗ್ರವಾದ ಕೇಸಿನಲ್ಲಿ ದಿಲ್ಲಿಯ ತಿಹಾರ್‌ ಜೈಲಿನಲ್ಲಿರುವ ಎಂಜಿನಿಯರ್ ರಶೀದ್‌ ಅಲಿಯಾಸ್‌ ಶೇಖ್ ಅಬ್ದುಲ್ ರಶೀದ್‌ ಹಾಗೂ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ ಖಲಿಸ್ತಾನಿ ಪರ ಪ್ರಚಾರಕ ಹಾಗೂ ನಿಯೋಜಿತ ಸಂಸದ ಅಮೃತ್‌ಪಾಲ್‌ ಸಿಂಗ್‌ ಶುಕ್ರವಾರ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ಉಗ್ರವಾದದ ಕೇಸಲ್ಲಿ ಬಂಧಿತರಾಗಿರುವ ರಶೀದ್‌ ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಜೈಲಿಂದಲೇ ಸ್ಪರ್ಧಿಸಿದ್ದರು ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು. ಅವರಿಗೆ ಪ್ರಮಾಣವಚನ ಸ್ವೀಕರಿಸಲು ದಿಲ್ಲಿ ಕೋರ್ಟು 2 ತಾಸು ಕಸ್ಟಡಿ ಪೆರೋಲ್‌ ನೀಡಿತ್ತು.

ಅದೇ ರೀತಿ ಅಮೃತ್‌ಪಾಲ್‌ ಪಂಜಾಬ್‌ನ ಖಾದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರಿಗೂ ಕೋರ್ಟ್‌ ನಾಲ್ಕು ದಿನಗಳ ಪೆರೋಲ್‌ ನೀಡಿತ್ತು.

ಇವರು ಪ್ರಮಾಣವಚನ ಸ್ವೀಕಾರಕ್ಕೆ ಬಂದಾಗ ಸಂಸತ್ತಿನ ಆವರಣ ಹಾಗೂ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.