ಜನ ಸುರಾಜ್‌ ಪಕ್ಷದ ಸಂಸ್ಥಾಪಕ, ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್‌ ಕಿಶೋರ್‌ ಅವರು ಮನೆ ತೊರೆದು ಆಶ್ರಮ ಸೇರಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ವರೆಗೂ ಪಟನಾದ ಹೊರವಲಯದಲ್ಲಿರುವ ಆಶ್ರಮದಲ್ಲೇ ಇದ್ದುಕೊಂಡು ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

- ಮುಂದಿನ ಚುನಾವಣೆಗೆ ಆಶ್ರಮದಲ್ಲಿ ಕೂತು ಕೆಲಸ

- ಅಲ್ಲಿಂದಲೇ ಜನ್‌ ಸುರಾಜ್‌ ಪಕ್ಷದ ಸಂಘಟನೆ

- ಮುಂದೆ ಪಕ್ಷ ಉತ್ತಮ ಸಾಧನೆ ತೋರುವ ವಿಶ್ವಾಸ

ಪಟನಾ: ಜನ ಸುರಾಜ್‌ ಪಕ್ಷದ ಸಂಸ್ಥಾಪಕ, ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್‌ ಕಿಶೋರ್‌ ಅವರು ಮನೆ ತೊರೆದು ಆಶ್ರಮ ಸೇರಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ವರೆಗೂ ಪಟನಾದ ಹೊರವಲಯದಲ್ಲಿರುವ ಆಶ್ರಮದಲ್ಲೇ ಇದ್ದುಕೊಂಡು ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ತನ್ನ ಅಸ್ತಿತ್ವ ಸಾರಲಿದೆ ಎಂಬ ವಿಶ್ವಾಸವನ್ನು ಪಿಕೆ ಎಂದೇ ಹೆಸರಾದ ಅವರು ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಾನು ಕಳೆದ ರಾತ್ರಿ ಐಐಟಿ ಪಟನಾ ಸಮೀಪದಲ್ಲೇ ಇರುವ ಬಿಹಾರ ನವ ನಿರ್ಮಾಣ ಆಶ್ರಮಕ್ಕೆ ಸ್ಥಳಾಂತರಗೊಂಡಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆ ವರೆಗೆ ಅಲ್ಲೇ ಇರಲಿದ್ದೇನೆ. ಆ ಚುನಾವಣೆಯಲ್ಲಿ ನಮ್ಮ ಪಕ್ಷ ಉತ್ತಮ ಸಾಧನೆ ತೋರುವ ಭರವಸೆ ಇದೆ’ ಎಂದರು.

ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್‌ನ ಸಹಸಂಸ್ಥಾಪಕರಾಗಿರುವ ಪ್ರಶಾಂತ್‌ ಕಿಶೋರ್‌ ಅವರು 2024ರಲ್ಲಿ ಜನ ಸುರಾಜ್‌ ಪಕ್ಷ ಕಟ್ಟಿ ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಬಿಜೆಪಿಯ ಮಾಜಿ ಸಂಸದ ಉದಯ್‌ ಸಿಂಗ್‌ ಅವರ ಒಡೆತನದ, ಪಟನಾ ಏರ್ಪೋರ್ಟ್‌ಗೆ ಸಮೀಪದಲ್ಲೇ ಇರುವ ಬಂಗಲೆಯಲ್ಲಿ ಈವರೆಗೆ ನೆಲೆಸಿದ್ದರು.