ಚುನಾವಣೆ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ: ಸುಪ್ರೀಂ

ಬಿಜೆಪಿ, ಆಯೋಗದಿಂದ ಸೀಟ್‌ ಚೋರಿ: ಕಾಂಗ್ರೆಸ್‌

ನವದೆಹಲಿ: ರಾಜ್ಯಸಭೆಗೆ ಚುನಾವಣೆಯ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಮಧ್ಯಪ್ರದೇಶ ಕಾಂಗ್ರೆಸ್‌ ಅಭ್ಯರ್ಥಿ ಮೀನಾಕ್ಷಿ ನಟರಾಜನ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಮೀನಾಕ್ಷಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ।ಪ್ರಶಾಂತ್‌ ಕುಮಾರ್‌ ಮಿಶ್ರಾ ಮತ್ತು ನ್ಯಾ। ಅತುಲ್‌ ಎಸ್‌. ಚಂದ್ರಕೂರ್‌ ಅವರಿದ್ದ ಪೀಠ, ‘ಸಂವಿಧಾನದಯ 329ನೇ ವಿಧಿಯು ಚುನಾವಣಾ ವಿಷಯಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದನ್ನು ನಿಷೇಧಿಸುತ್ತದೆ. ವಿಳಂಬವಿಲ್ಲದೆ ಚುನಾವಣೆಗಳು ನಡೆಯಬೇಕು. ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಿದ ನಂತರ ಚುನಾವಣಾ ಆಯೋಗವನ್ನು ಸಂಪರ್ಕಿಸುವುದು ಒಂದೇ ಪರಿಹಾರ’ ಎಂದು ಅಭಿಪ್ರಾಯ ಪಟ್ಟಿದೆ.

ಮೀನಾಕ್ಷಿ ಸಲ್ಲಿಸಿದ್ದ ಅರ್ಜಿಯಲ್ಲಿ ತಮ್ಮ ವಿರುದ್ಧದ ದಾಖಲಾದ ಕ್ರಿಮಿನಲ್‌ ಪ್ರಕರಣದ ಬಗ್ಗೆ ಉಲ್ಲೇಖಿಸಿಲ್ಲ ಎಂದು ಬಿಜೆಪಿ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು.


ಹೋರಾಡಲು ಸಿದ್ಧ:

ಅರ್ಜಿ ವಜಾ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮೀನಾಕ್ಷಿ, ‘ನಾವು ಹೋರಾಡಲು ಸಿದ್ಧರಿದ್ದೇವೆ, ಇದು ವೈಯಕ್ತಿಕ ಸೋಲಿನ ಪ್ರಶ್ನೆಯಲ್ಲ. ಆದರೆ ಪದೇ ಪದೇ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಆಘಾತಗಳಿಂದ ಚಿಂತಿತರಾಗಿದ್ದೇವೆ. ಮುಂದಿನ ನಡೆ ಪಕ್ಷ ನಿರ್ಧರಿಸುತ್ತದೆ. ನಾವು ಜನರ ನ್ಯಾಯಾಲಯಕ್ಕೆ ಹೋಗಲು ಸ್ವತಂತ್ರರು. ಮತ್ತು ಅದನ್ನು ಮಾಡುತ್ತೇವೆ’ ಎಂದರು.

ವೋಟ್‌ ಚೋರಿ:ಈ ನಡುವೆ ‘ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ಸೀಟ್‌ ಚೋರಿ ನಡೆಸುತ್ತಿವೆ. ನಾಮಪತ್ರ ತಿರಸ್ಕಾರವು ದೋಷಪೂರಿತ ಮತ್ತು ಅಸಮಂಜಸ ಹಾಗೂ ಅವಿವೇಕದ ತರ್ಕ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.