ಪಾಕ್‌ನ ಸಿಂಧ್‌ ನಮ್ಮ ವಶ ಆಗಬಹುದು: ರಾಜನಾಥ್‌

| Published : Nov 24 2025, 03:45 AM IST

ಸಾರಾಂಶ

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯ, ಪ್ರಸಕ್ತ ಭಾರತದ ಭಾಗವಾಗದಿರಬಹುದು. ಆದರೆ ಮುಂದೆ ಅದು ಭಾರತದ ಕೈವಶವಾಗಬಹುದು ಎಂದು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.

- ಪಿಒಕೆ ಜತೆ ಇನ್ನೊಂದು ಭಾಗ ಮರುವಶಕ್ಕೆ ಯತ್ನ

- ಸಿಂಧ್‌ ಎಂದಿಗೂ ಭಾರತದ ಭಾಗ: ರಕ್ಷಣಾ ಸಚಿವ--

ರಾಜನಾಥ್‌ ಹೇಳಿದ್ದೇನು?

- ವಿಭಜನೆ ವೇಳೆ ಭಾರತದಿಂದ ಸಿಂಧ್ ಪ್ರಾಂತ್ಯ ಪ್ರತ್ಯೇಕವಾಗಿತ್ತು

- ಎಲ್‌.ಕೆ. ಅಡ್ವಾಣಿ ಸೇರಿ ಅನೇಕ ಸಿಂಧಿಗಳು ಭಾರತಕ್ಕೆ ಬಂದಿದ್ದರು

- ಇಂದಿಗೂ ಸಿಂಧ್‌ ವಿಭಜನೆಯನ್ನು ಖುದ್ದು ಅಡ್ವಾಣಿ ಅವರೇ ಒಪ್ಪಿಲ್ಲ

- ಹೀಗಾಗಿ ಮುಂದಿನ ದಿನದಲ್ಲಿ ಸಿಂಧ್‌ ನಮ್ಮ ವಶ ಆಗಬಹುದು

- ಭಾರತಕ್ಕೆಸಿಂಧೂ ನದಿ ಅತಿ ಪವಿತ್ರ, ಸಿಂಧ್‌ ಕೂಡ ನಮ್ಮದು

====ನವದೆಹಲಿ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯ, ಪ್ರಸಕ್ತ ಭಾರತದ ಭಾಗವಾಗದಿರಬಹುದು. ಆದರೆ ಮುಂದೆ ಅದು ಭಾರತದ ಕೈವಶವಾಗಬಹುದು ಎಂದು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ. ಈ ಹಿಂದೆ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಶೀಘ್ರ ಭಾರತದ ವಶವಾಗಲಿದೆ ಎಂದಿದ್ದ ಸಿಂಗ್‌, ಇದೀಗ ಇನ್ನೊಂದು ಪ್ರಾಂತ್ಯ ವಶದ ಮಾತುಗಳನ್ನು ಆಡಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್‌, ‘ಇಂದು ಸಿಂಧ್‌ ಭೂಮಿ ಭಾರತದ ಭಾಗವಾಗಿಲ್ಲ. ಆದರೆ ನಾಗರಿಕತೆ ದೃಷ್ಟಿಯಲ್ಲಿ ನೋಡಿದರೆ ಸಿಂಧ್‌ ಯಾವತ್ತಿಗೂ ಭಾರತದ ಭಾಗವಾಗಿ ಉಳಿಯುತ್ತದೆ. ಗಡಿಗಳು ಬದಲಾಗಬಹುದು. ಯಾರಿಗೆ ಗೊತ್ತು ನಾಳೆ ಸಿಂಧ್‌ ಮತ್ತೆ ಭಾರತಕ್ಕೆ ಮರಳಬಹುದು. ಸಿಂಧೂ ನದಿಯನ್ನು ಪವಿತ್ರ ಎಂದು ಭಾವಿಸುವ ಸಿಂಧ್‌ ಜನರು ಯಾವಾಗಲೂ ನಮ್ಮವರೇ ಆಗಿರುತ್ತಾರೆ. ಅವರು ಎಲ್ಲೇ ಇದ್ದರೂ, ಯಾವಾಗಲೂ ನಮ್ಮವರೇ ’ ಎಂದಿದ್ದಾರೆ.

ವಿಭಜನೆ ಒಪ್ಪಿಲ್ಲ:

ಇದೇ ವೇಳೆ ಅವರು, ‘ವಿಭಜನೆ ಸಂದರ್ಭದಲ್ಲಿ ಸಿಂಧ್‌ ಪಾಕಿಸ್ತಾನಕ್ಕೆ ಸೇರಿದ್ದನ್ನು ಇಂದಿಗೂ ಹಲವರು ಒಪ್ಪಿಲ್ಲ. ಸಿಂಧಿ ಹಿಂದೂಗಳು ಅದರಲ್ಲಿಯೂ ವಿಶೇಷವಾಗಿ ಎಲ್‌.ಕೆ. ಅಡ್ವಾಣಿಯಂತಹ ನಾಯಕರು ಸಿಂಧ್ ಪ್ರಾಂತ್ಯ ಭಾರತದಿಂದ ಬೇರ್ಪಟ್ಟಿರುವುದನ್ನು ಇಂದಿಗೂ ಒಪ್ಪಿಕೊಂಡಿಲ್ಲ. ಇದನ್ನು ಲಾಲ್‌ ಕೃಷ್ಣ ಅಡ್ವಾಣಿ ಅವರು ತಮ್ಮ ಪುಸ್ತಕವೊಂದರಲ್ಲಿ ಉಲ್ಲೇಖಿಸಿದ್ದಾರೆ. ಸಿಂಧ್‌ನಲ್ಲಿ ಮಾತ್ರವಲ್ಲ. ಭಾರತದಲ್ಲಿರುವ ಎಲ್ಲಾ ಹಿಂದೂಗಳು ಸಿಂಧೂ ನದಿಯನ್ನು ಪವಿತ್ರ ಎಂದು ಭಾವಿಸುತ್ತಾರೆ. ಅಲ್ಲದೇ ಮುಸ್ಲಿಮರು ಕೂಡ ಮೆಕ್ಕಾದ ಆಬ್-ಎ-ಜಮ್‌ಜಮ್‌ ರೀತಿಯೇ ಪವಿತ್ರ ಎಂದು ಭಾವಿಸಿದ್ದಾರೆ ಅಡ್ವಾಣಿ ಉಲ್ಲೇಖಿಸಿದ್ದರು’ ಎಂದಿದ್ದಾರೆ.