ಸಾರಾಂಶ
ಬಂಗಾರಪೇಟೆ ರೈಲ್ವೆ ನಿಲ್ದಾಣ ಅಮೃತ ಭಾರತ ಯೋಜನೆಯಡಿ ಪುನರಾಭಿವೃದ್ಧಿಗೆ ಚಾಲನೆ ನೀಡಿ ವರ್ಷವಾಗಿದ್ದು ಮುಂದಿನ ವರ್ಷದೊಳಗೆ ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.
ಬಂಗಾರಪೇಟೆ : ರಾಜ್ಯದಲ್ಲೆ ರೈಲ್ವೆ ಇಲಾಖೆಗೆ ಅತಿ ಹೆಚ್ಚು ಆದಾಯ ಬರುವ ಎರಡನೇ ನಿಲ್ದಾಣ ಎಂಬ ಹೆಗ್ಗಳಿಗೆ ಹೊಂದಿರುವ ಬಂಗಾರಪೇಟೆ ರೈಲು ನಿಲ್ದಾಣವನ್ನು 21 .79 ಕೋಟಿ ರು.ಗಳ ವೆಚ್ಚದಲ್ಲಿ ಅಮೃತ ಭಾರತ ಯೋಜನೆಯಡಿ ಪುನರಾಭಿವೃದ್ಧಿಗೆ ಚಾಲನೆ ನೀಡಿ ವರ್ಷವಾಗಿದ್ದು ಮುಂದಿನ ವರ್ಷದೊಳಗೆ ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ರೈಲು ನಿಲ್ದಾಣಕ್ಕೆ ಈ ಹಿಂದೆ ಸ್ವಲ್ಪ ಬದಲಾವಣೆ ಮಾಡಿದ್ದನ್ನು ಬಿಟ್ಟರೆ ಅಷ್ಟಾಗಿ ಸೌಕಭ್ಯಗಳಿಲ್ಲದೆ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಈಗ ಪುನರಾಭಿವೃದ್ದಿ ಕಾಮಗಾರಿ ಪೂರ್ಣಗೊಂಡರೆ ಈ ಭಾಗದ ಕೈಗಾರಿಕೆ, ವಾಣಿಜ್ಯೋದ್ಯಮ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬಲಿದೆ.
ಪ್ರಯಾಣಿಕರಿಗೆ ಸೌಲಭ್ಯ
ಬಂಗಾರಪೇಟೆ ರೈಲ್ವೆ ನಿಲ್ದಾಣ ಪ್ರಮುಖ ನಿಲ್ದಾಣವಾಗಿದ್ದು ನಿತ್ಯ 21 ಸಾವಿರ ಜನ ಇಲ್ಲಿಂದ ವಿವಿಧೆಡೆಗೆ ಸಂಚರಿಸುತ್ತಾರೆ,ಹೊಸ ವಿನ್ಯಾಸದ ನಿಲ್ದಾಣದ ಪೂರ್ಣಗೊಂಡರೆ ಆದಾಯ ಸಹ ದ್ವಿಗುಣಗೊಳ್ಳಲಿದೆ ,ಹೀಗಾಗಿ ಕಾರ್ಮಿಕರ ಓಡಾಟ ಉದ್ಯಮಿಗಳು,ವ್ಯಾಪಾರಿಗಳಿಗೆ ಸರಕು ಸಾಗಣೆ ಮಾಡಲು ಕಡಿಮೆ ವೆಚ್ಚದಲ್ಲಿ ರೈಲ್ವೆ ಸೌಲಭ್ಯ ದೊರಕಲಿದೆ.
2023 ರ ಆಗಸ್ಟ್ನಲ್ಲಿ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ವರ್ಚುವಲ್ ವೇದಿಕೆ ಮೂಲಕ ಪ್ರಧಾನಿ ಮೋದಿ ಪಟ್ಟಣದ ನಿಲ್ದಾಣ ಸೇರಿದಂತೆ, ಮಾಲೂರು, ವೈಟ್ಪೀಲ್ಡ್, ಕುಪ್ಪಂ ನಿಲ್ದಾಣಗಳನ್ನು ಪುನರಾಭೀವೃದ್ದಿಗೆ ಶಂಕುಸ್ಥಾಪನೆ ಮಾಡಿದರು. ಎಬಿಎಸ್ಎಸ್ ಯೋಜನೆಯಡಿ ೨೧.೭೯ಕೋಟಿ ಅನುದಾನ ಬಿಡುಗಡೆಯಾಗಿತ್ತು.
ನಿಲ್ದಾಣದಲ್ಲಿ 6 ಪ್ಲಾಟ್ಫಾರಂ
ಈ ನಿಲ್ದಾಣದಲ್ಲಿ ಒಟ್ಟು 6 ಪ್ಲಾಟ್ಫಾರಂಗಳು ಇವೆ, ಎಲ್ಲಾದಕ್ಕೂ ಚಾವಣಿ ಅಂದವಾದ ನೆಲಹಾಸು, ಗಣ್ಯವ್ಯಕ್ತಿಗಳಿಗೆ ಐಷಾರಾಮಿ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲಾಗುವುದು. ಜೊತೆಗೆ ಅತ್ಯಾಧುನಿಕ ಮಾದರಿಯ ಶೌಚಾಲಯ ಒದಗಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಈ ಆಧುನಿಕ ನಿಲ್ದಾಣ ಕಾರ್ಯರೂಪಕ್ಕೆ ಬಂದರೆ ಪಟ್ಟಣಕ್ಕೆ ಹೊಸ ಮೆರುಗು ಬರಲಿದೆ, ಇದರ ಜೊತೆಗೆ ಬೂದಿಕೋಟೆ ವೃತ್ತದಲ್ಲಿ ಸಂಚಾರ ಕಿರಿಕಿರಿ ತಪ್ಪಿಸಲು ಮೇಲ್ಸೇತುವೆ ಕಾಮಗಾರಿ ಸಹ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.