ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ರಾಜಧಾನಿ ಬೆಂಗಳೂರಿನ ಕೆರೆಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯ 66 ಕೆರೆಗಳು ಸಂಪೂರ್ಣವಾಗಿ ಬರಿದಾಗಿದ್ದು, ಒಟ್ಟಾರೆ 134 ಕೆರೆಗಳಲ್ಲಿ ನೀರಿನ ಮಟ್ಟ ಅರ್ಧಕ್ಕಿಂತ ಕಡಿಮೆಯಾಗಿದೆ.
ಮಾರ್ಚ್ನಿಂದ ಬೇಸಿಗೆ ಆರಂಭಗೊಂಡು ಬಹುತೇಕ ಎರಡೂವರೆ ತಿಂಗಳು ಪೂರ್ಣಗೊಂಡಿದೆ. ತುಂಬಿ ತುಳುಕುತ್ತಿದ್ದ ಬೆಂಗಳೂರಿನ ಕೆರೆಗಳು ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಮಟ್ಟ ಕುಸಿಯುವುದಕ್ಕೆ ಶುರುವಾಗಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ 183 ಕೆರೆಗಳ ಪೈಕಿ ಬರೋಬ್ಬರಿ 66 ಕೆರೆಗಳು ಸಂಪೂರ್ಣವಾಗಿ ಬರಿದಾಗಿದ್ದು, ಹನಿ ನೀರಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.
ಉಳಿದಂತೆ 34 ಕೆರೆಗಳಲ್ಲಿ ಶೇ.25ರಷ್ಟಕ್ಕಿಂತ ಕಡಿಮೆ ಪ್ರಮಾಣ ನೀರು ಶೇಖರಣೆಯಾಗಿದೆ. 44 ಕೆರೆಗಳಲ್ಲಿ ಶೇ.25 ರಿಂದ 50 ರಷ್ಟು ನೀರಿನ ಶೇಖರಣೆ ಇದೆ. 26 ಕೆರೆಗಳಲ್ಲಿ ಶೇ.50 ರಿಂದ 75 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಉಳಿದ 13 ಕೆರೆಗಳು ಮಾತ್ರ ಶೇ.100 ರಷ್ಟು ನೀರಿನ ಶೇಖರಣೆ ಇದೆ.
ಒಟ್ಟಾರೆ ಬಿಬಿಎಂಪಿಯ ವ್ಯಾಪ್ತಿಯ 183 ಕೆರೆಗಳು ಒಟ್ಟು 30,717.22 ದಶಲಕ್ಷ ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಇದೀಗ ಕೇವಲ 10,959.01 ದಶಲಕ್ಷ ಲೀಟರ್ ಮಾತ್ರ ಸಂಗ್ರಹವಾಗಿದೆ. ಕೇವಲ ಶೇ.35 ರಷ್ಟು ಮಾತ್ರ ನೀರಿನ ಸಂಗ್ರಹವಿದ್ದು, ಶೇ.75 ರಷ್ಟು ನೀರು ಖಾಲಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹದೇವಪುರದಲ್ಲಿ ಹೆಚ್ಚು ಕೆರೆ ಖಾಲಿ
ಮಹದೇವಪುರ ವಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ 51 ಕೆರೆಗಳಿವೆ. ಹಾಗಾಗಿ, ಅತಿ ಹೆಚ್ಚಿನ 20 ಕೆರೆಗಳು ಇದೇ ವಲಯದಲ್ಲಿ ಖಾಲಿಯಾಗಿವೆ. ಉಳಿದಂತೆ 30 ಕೆರೆಗಳಲ್ಲಿ ಶೇ.75 ರಷ್ಟಕ್ಕಿಂತ ಕಡಿಮೆ ಪ್ರಮಾಣದ ನೀರು ಶೇಖರಣೆಯಾಗಿದೆ. ಆರ್ ಆರ್ ನಗರದಲ್ಲಿ 15, ಯಲಹಂಕ 12, ಬೊಮ್ಮನಹಳ್ಳಿಯಲ್ಲಿ 9, ದಾಸರಹಳ್ಳಿಯಲ್ಲಿ 6, ಪೂರ್ವ ವಲಯದಲ್ಲಿ 2, ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ತಲಾ ಒಂದು ಕೆರೆ ಸಂಪೂರ್ಣವಾಗಿ ಖಾಲಿಯಾಗಿದೆ.
68 ಕೆರೆಗಳಲ್ಲಿ ಹೂಳು ಬಿಬಿಎಂಪಿಯು ನಿರ್ವಹಣೆ ಮಾಡುತ್ತಿರುವ 183 ಕೆರೆಗಳ ಪೈಕಿ ಈಗಾಗಲೇ ಸುಮಾರು 150 ಕೆರೆಗಳನ್ನು ಬಿಬಿಎಂಪಿಯು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ಆದರೂ 68 ಕೆರೆಗಳಲ್ಲಿ ಹೂಳು ತುಂಬಿಕೊಂಡು ನೀರಿನ ಸಂಗ್ರಹ ಮಟ್ಟ ಕಡಿಮೆಯಾಗಿದೆ. ಇನ್ನೂ 12ಕ್ಕೂ ಅಧಿಕ ಕೆರೆಗಳಲ್ಲಿ ಕಳೆ ಸಸ್ಯಗಳು ಬೆಳೆದುಕೊಂಡಿವೆ.
ಕೇಂದ್ರ ಸರ್ಕಾರದ ನಗರ ಪ್ರವಾಹ ವಿಪತ್ತು ನಿಯಂತ್ರಣ ಕಾರ್ಯಕ್ರಮದಡಿ 75 ಕೋಟಿ ರು. ಅನುದಾನ ನೀಡಲಾಗಿದೆ. ಈ ಪೈಕಿ ನಗರದ ಏಳು ಕೆರೆಗಳ ಹೂಳು ತೆಗೆದು ನೀರಿನ ಸಂಗ್ರಹ ಮಟ್ಟ ಹೆಚ್ಚಿಸುವುದಕ್ಕೆ ಕ್ರಿಯಾಯೋಜನೆ ರೂಪಿಸಿಕೊಂಡಿರುವ ಬಿಬಿಎಂಪಿಯ ಕೆರೆ ವಿಭಾಗವೂ ಚಿಕ್ಕಬೇಗೂರು ಕೆರೆ, ಹೆಬ್ಬಾಳ ಕೆರೆ, ನಾಗವಾರ ಕೆರೆ, ಚಿಕ್ಕಬೆಳ್ಳಂದೂರು ಕೆರೆ, ಕಲ್ಕೆರೆ ಕೆರೆ, ಅರಕೆರೆ, ಹಲಸೂರು ಕೆರೆ ಹಾಗೂ ಸೊಂಪುರ ಕೆರೆಗಳನ್ನು ಹೂಳು ತೆಗೆಯುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ನಗರದಲ್ಲಿ ಬಹುತೇಕ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಸ್ವಲ್ಪ ಪ್ರಮಾಣ ಮಳೆ ಬರುತ್ತಿರುವುದರಿಂದ ಕೆರೆಗಳಿಗೆ ನೀರು ಬಂದಿದೆ. ಇನ್ನೂ ಒಂದು ಬಾರಿ ಕೆರೆಗಳ ಹೂಳು ತೆಗೆದರೆ 10 ವರ್ಷದಲ್ಲಿ ಮತ್ತೆ ಹೂಳು ತುಂಬಿಕೊಳ್ಳಲಿದೆ. ಬಿಬಿಎಂಪಿಯು ಅನುದಾನದ ಲಭ್ಯತೆ ನೋಡಿಕೊಂಡು ಹೂಳು ತೆಗೆದು ಹೆಚ್ಚಿನ ಪ್ರಮಾಣದ ನೀರಿನ ಶೇಖರಣೆಗೆ ಕ್ರಮ ವಹಿಸಲಾಗುತ್ತಿದೆ.
- ವಿಜಯ್ ಕುಮಾರ್ ಹರಿದಾಸ್, ಮುಖ್ಯ ಎಂಜಿನಿಯರ್, ಬಿಬಿಎಂಪಿ ಕೆರೆ ವಿಭಾಗ
ಟೇಬಲ್ ಮಾಡಿಖಾಲಿ ಕೆರೆಗಳ ವಿವರವಲಯಒಟ್ಟು ಕೆರೆ ಸಂಖ್ಯೆಖಾಲಿ ಕೆರೆ ಸಂಖ್ಯೆ ಪೂರ್ವ41
ಪಶ್ಚಿಮ31
ದಕ್ಷಿಣ71
ಬೊಮ್ಮನಹಳ್ಳಿ449
ದಾಸರಹಳ್ಳಿ106
ಮಹದೇವಪುರ5120
ಆರ್ಆರ್ನಗರ3515
ಯಲಹಂಕ2912
ಒಟ್ಟು18366